ಬಿಬಿಎಂಪಿಯ ಮೈತ್ರಿ ಮುರಿಯುವ ಸುಳಿವು ಕೊಟ್ಟ ದೇವೇಗೌಡರು!
ಬೆಂಗಳೂರು, ಮಾರ್ಚ್ 05 : ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿವೆ. ಎಚ್.ಡಿ.ದೇವೇಗೌಡ ಅವರು ಮೈತ್ರಿ ಮುರಿಯುವ ಸುಳಿವು ನೀಡಿದ್ದಾರೆ.
ಕರ್ನಾಟಕದ ವಿಧಾನಸಭೆ ಚುನಾವಣೆ, ರಾಜ್ಯಸಭೆ ಚುನಾವಣೆ ಬೆಳವಣಿಗೆಗಳ ಹಿನ್ನಲೆಯಲ್ಲಿ ಮೈತ್ರಿಗೆ ಭಂಗ ಉಂಟಾಗಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ದೆಹಲಿಯಲ್ಲಿದ್ದು, ಎರಡು ದಿನಗಳ ಬಳಿಕ ಬೆಂಗಳೂರಿಗೆ ವಾಪಸ್ ಆಗಲಿದ್ದಾರೆ.
ಬಿಬಿಎಂಪಿ : ಜೆಡಿಎಸ್-ಕಾಂಗ್ರೆಸ್ ದೋಸ್ತಿಯಲ್ಲಿ ಕಹಿ?
ದೇವೇಗೌಡರು ಬೆಂಗಳೂರಿಗೆ ವಾಪಸ್ ಬಂದ ಬಳಿಕ ಮೈತ್ರಿ ಮುಂದುವರೆಸುವ ಕುರಿತು ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ. 2015ರಿಂದ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡು ಅಧಿಕಾರ ಹಂಚಿಕೊಂಡಿದ್ದು, ಕಾಂಗ್ರೆಸ್ ಮೇಯರ್ ಪಟ್ಟ, ಜೆಡಿಎಸ್ ಉಪ ಮೇಯರ್ ಪಟ್ಟವನ್ನು ಪಡೆದಿವೆ.
ಬಿಬಿಎಂಪಿಯಲ್ಲಿನ ಮೈತ್ರಿ 5 ವರ್ಷ ಅಂದ್ರು ದೇವೇಗೌಡ್ರು!
2017ರ ಸೆಪ್ಟೆಂಬರ್ನಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆಗೆ ಚುನಾವಣೆ ನಡೆಯುವ ಸಂದರ್ಭದಲ್ಲಿಯೇ ಮೈತ್ರಿ ಮುರಿಯವು ಬಗ್ಗೆ ಸುದ್ದಿಗಳು ಹಬ್ಬಿತ್ತು. ಆದರೆ, ಬೆಂಗಳೂರು ನಗರದ ಶಾಸಕರ, ಬಿಬಿಎಂಪಿ ಸದಸ್ಯರ ಸಭೆ ನಡೆಸಿದ್ದ ದೇವೇಗೌಡರು ಮೈತ್ರಿ ಮುಂದುವರೆಸಲು ಒಪ್ಪಿಗೆ ನೀಡಿದ್ದರು...
ಮೈತ್ರಿ ವಿಚಾರ ಏಕೆ ಬಂತು
ಸೋಮವಾರ ದೆಹಲಿಯಲ್ಲಿ ಮಾತನಾಡಿದ ಎಚ್.ಡಿ.ದೇವೇಗೌಡರು, 'ಬಿಬಿಎಂಪಿಯಲ್ಲಿನ ಮೈತ್ರಿ ಮುಂದುವರೆಸುವ ಕುರಿತು ಪರಾಮರ್ಶೆ ನಡಸಲಾಗುತ್ತದೆ' ಎಂದು ಹೇಳಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎರಡು ದಿನದಲ್ಲಿ ನಿರ್ಧಾರ
'ನಾನು ದೆಹಲಿಯಲ್ಲಿದ್ದೇನೆ. ಬುಧವಾರ ಬೆಂಗಳೂರಿಗೆ ಮರಳಲಿದ್ದು, ಅಲ್ಲಿಗೆ ತೆರಳಿದ ಬಳಿಕ ಮೈತ್ರಿ ಮುಂದುವರೆಸುವ ಕುರಿತು ನಿರ್ಧಾರವನ್ನು ಕೈಗೊಳ್ಳಲಾಗುತ್ತದೆ' ಎಂದು ದೇವೇಗೌಡರು ಹೇಳಿದ್ದಾರೆ.
ಮೈತ್ರಿ ಮುರಿಯಲು ಕಾರಣವೇನು?
ರಾಜ್ಯಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳಲು ಜೆಡಿಎಸ್ ಬಯಸಿತ್ತು. ಆದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಮೈತ್ರಿಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಜೆಡಿಎಸ್ ಸಹ ಬಿಬಿಎಂಪಿಯಲ್ಲಿ ಮೈತ್ರಿ ಮುರಿಯುವ ಸುಳಿವು ನೀಡಿದೆ.
2015ರ ಫಲಿತಾಂಶ
2015ರ ಬಿಬಿಎಂಪಿ ಚುನಾವಣೆಯಲ್ಲಿ ಬಿಜೆಪಿ 100, ಕಾಂಗ್ರೆಸ್ 76, ಜೆಡಿಎಸ್ 14 ಸ್ಥಾನಗಳಲ್ಲಿ ಜಯಗಳಿಸಿತ್ತು. 8 ಪಕ್ಷೇತರ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು. ಬಿಜೆಪಿ ಅತೀ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಜೆಡಿಎಸ್ ಬೆಂಬಲ ಪಡೆದ ಕಾಂಗ್ರೆಸ್ ಮೇಯರ್ ಪಟ್ಟವನ್ನು ಪಡೆದುಕೊಂಡಿತ್ತು. ಜೆಡಿಎಸ್ಗೆ ಉಪ ಮೇಯರ್ ಪಟ್ಟ ಬಿಟ್ಟುಕೊಟ್ಟಿತ್ತು.
ಮೇಯರ್ ಮತ್ತು ಉಪ ಮೇಯರ್
ಸದ್ಯ, ಬಿಬಿಎಂಪಿ ಮೇಯರ್ ಸಂಪತ್ ರಾಜ್, ಉಪ ಮೇಯರ್ ಜೆಡಿಎಸ್ ಪಕ್ಷದ ಪದ್ಮಾವತಿ ನರಸಿಂಹಮೂರ್ತಿ. 2017ರ ಸೆಪ್ಟೆಂಬರ್ನಲ್ಲಿ ಮೇಯರ್ ಮತ್ತು ಉಪ ಮೇಯರ್ ಆಯ್ಕೆ ನಡೆದಿದೆ.