ತಮ್ಮ ಜೀವ ಉಳಿಸಿಕೊಳ್ಳಲು ಕವಳನನ್ನು ಕೊಂದರು
ಬೆಂಗಳೂರು, ಜೂ. 27 : ಕುಖ್ಯಾತ ರೌಡಿ ವಿಜಯಕುಮಾರ ಅಲಿಯಾಸ್ ಕವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಅಪರಾಧ ವಿಭಾಗದ ಪೊಲೀಸರು ಹತ್ತು ಮಂದಿಯನ್ನು ಬಂಧಿಸಿದ್ದಾರೆ. ಜೀವ ಭಯದಿಂದಾಗಿ ಎಲ್ಲರೂ ಸೇರಿ ಕವಳನನ್ನು ಹತ್ಯೆ ಮಾಡಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ಗುರುವಾರ ಕೇಂದ್ರ ಅಪರಾಧ ವಿಭಾಗದ (ಸಿಸಿಬಿ) ಪೊಲೀಸರು ಮಡಿವಾಳದ ಬಾಬು ಅಲಿಯಾಸ್ ನಖರಾ ಬಾಬು ಮತ್ತು ಆತನ ಸಹಚರಾರದ ಹೀರಲಾಲ್ ಪ್ರಸಾದ್, ಸುನೀಲ್ ಗೌಡ, ಅರುಣ್ ಕುಮಾರ್, ಸತೀಶ್ ರೆಡ್ಡಿ, ನರೇಂದ್ರ, ಚೇತನ್ ಕುಮಾರ್, ಮುನಿರಾಜು, ವಿಶ್ವನಾಥ್ ಮತ್ತು ಲಕ್ಷ್ಮಣ್ ಅವರನ್ನು ಕವಳ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಿದ್ದಾರೆ. [ಡೆಡ್ಲಿ ಸೋಮನ ಬಂಟ ಕವಳ ಭೀಕರ ಕೊಲೆ]
ಒಂದು ಕಾಲದಲ್ಲಿ ಕವಳನ ಬಂಟನಾಗಿದ್ದ ನಖರಾ ಬಾಬು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಕವಳನನ್ನು ಹತ್ಯೆ ಮಾಡಿ ನಗರದಲ್ಲಿ ತಲೆ ಮರಿಸಿಕೊಂಡಿದ್ದಾರೆ ಎಂಬ ಖಚಿತ ಮಾಹಿತಿ ಹಿನ್ನಲೆಯಲ್ಲಿ ದಾಳಿ ಮಾಡಿದ ಸಿಸಿಬಿ ಪೊಲೀಸರು ಮಡಿವಾಳದ ಸಿಲ್ಕ್ ಬೋರ್ಡ್ ಸಮೀಪ ಆರೋಪಿಗಳನ್ನು ಗುರುವಾರ ರಾತ್ರಿ ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. [ಕುಟ್ಟಿ ಅಲಿಯಾಸ್ ತಿರು vs ವಿಜಿ ಅಲಿಯಾಸ್ ಕವಳ]
ಜೀವ ಭಯದಿಂದಾಗಿ ಕೊಂದರು : ಕೊಲೆಯಾದ ಕವಳನ ಬಂಟನಾಗಿದ್ದ ನಖರಾ ಬಾಬು ಅವರ ಜೊತೆಯಲ್ಲಿ ಇದ್ದುಕೊಂಡು ಆತನ ಕೆಲಸಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡುತ್ತಿದ್ದ ಎಂದು ತಿಳಿದುಬಂದಿದೆ. 2013ರ ವಿಧಾನಸಭಾ ಚುನಾವಣೆ ಸಮಯದಲ್ಲಿಯೂ ಬಾಬು ಕೊಟ್ಟ ಮಾಹಿತಿ ಅನ್ವಯ ಕವಳನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ತನ್ನ ಬಂಧನಕ್ಕೆ ನಖರಾ ಬಾಬು ಕಾರಣ ಎಂದು ತಿಳಿದ ಕವಳ ಆತನಿಗೆ ಜೀವ ಬೆದರಿಕೆ ಹಾಕಿದ್ದ.
ಕಾಲು ಮುರಿದಿದ್ದ ಕವಳ : ಚುನಾವಣೆ ಮುಗಿದ ಬಳಿಕ ಜೈಲಿನಿಂದ ಹೊರಬಂದ ಕವಳ ಬಾಬುನನ್ನು ಅಪಹರಿಸಿ ಕಾಲು ಮುರಿದು ಹಾಕಿದ್ದ. ಅಲ್ಲದೆ, ನನ್ನ ವಿರುದ್ಧ ಮಾಹಿತಿ ಕೊಟ್ಟರೆ ಜೀವ ಉಳಿಸುವುದಿಲ್ಲ ಎಂದು ಬೆದರಿಕೆ ಹಾಕಿದ್ದ. ಈ ಘಟನೆ ಬಳಿಕ ಆತಂಕಗೊಂಡ ಬಾಬು, ಇನ್ನು ಕವಳ ಜೀವಂತ ಇದ್ದರೆ ನಮ್ಮನ್ನು ಉಳಿಸುವುದಿಲ್ಲ ಎಂದು ಸಹಚರರನ್ನು ಸೇರಿಸಿಕೊಂಡು ಕವಳನ ಕೊಲೆಗೆ ಸಂಚು ರೂಪಿಸಿದ್ದರು.
ಮಂಗಳವಾರ ಬೆಂಗಳೂರಿಗೆ ಕವಳ ಆಗಮಿಸುವ ಬಗ್ಗೆ ಖಚಿತ ಮಾಹಿತಿ ತಿಳಿದ ಬಾಬು, ಅಂದೇ ಕವಳನ ಹತ್ಯೆಗೆ ಹೊಂಚು ಹಾಕಿದ್ದರು. ಅದರಂತೆ ಹೊಸೂರು ಸಮೀಪ ಮಂಗಳವಾರ ರಾತ್ರಿ ಕವಳನ ಮೇಲೆ ಕಾರದ ಪುಡಿ ಎರಚಿ, ಮಚ್ಚಿನಿಂದ ಕೊಚ್ಚಿ ಆತನ ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳ ಹೆಚ್ಚಿನ ವಿಚಾರಣೆ ಮುಂದುವರೆದಿದೆ.