ಮೇಕೆದಾಟು ಡ್ಯಾಂ ನಿರ್ಮಾಣಕ್ಕೆ ತಮಿಳುನಾಡು ಅಡ್ಡಗಾಲು
ಬೆಂಗಳೂರು, ನ. 14: ಕಾವೇರಿ ನೀರಿನ ವಿಷಯದಲ್ಲಿ ಪದೇ ಪದೆ ಮೂಗು ತೂರಿಸಿ ಕರ್ನಾಟಕಕ್ಕೆ ತಲೆ ನೋವಾಗಿದ್ದ ಜಯಲಲಿತಾ ಜೈಲಿನಿಂದ ಹೊರಬಂದಂತೆಯೇ ಮತ್ತೆ ತಮ್ಮ ಆಟ ಆರಂಭಿಸಿದ್ದಾರೆ. ರಾಜಕೀಯ ವಿಷಯದಲ್ಲಿ ಜಯಲಲಿತಾ ಅವರ ಛಾಯೆ ಎಂದೇ ಗುರುತಿಸಿಕೊಂಡಿರುವ ಮುಖ್ಯಮಂತ್ರಿ ಪನ್ನೀರ ಸೆಲ್ವಂ ಮೂಲಕ ಕರ್ನಾಟಕದ ಯೋಜನೆಗಳಿಗೆ ಮತ್ತೆ ಕಂಟಕ ತಂದೊಡ್ಡಿದ್ದಾರೆ.
ಕಾವೇರಿ ತೀರದ ಮೇಕೆದಾಟು ಪ್ರದೇಶದಲ್ಲಿ ಡ್ಯಾಂಗಳ ನಿರ್ಮಾಣ ಯೋಜನೆ ಜಾರಿಗಾಗಿ ಕರ್ನಾಟಕ ಸರ್ಕಾರವು ತಾಂತ್ರಿಕ ಸಲಹೆಯನ್ನು ಕೋರಿದೆ. ಈ ಯೋಜನೆಯಿಂದ ಸುಮಾರು 2,500 ಎಕರೆ ಅರಣ್ಯ ಪ್ರದೇಶ ನೀರಿನಲ್ಲಿ ಮುಳುಗಬಹುದೆಂದು ಅಂದಾಜಿಸಲಾಗಿದೆ. [ಮೇಕೆದಾಟುವಿನಲ್ಲಿ ಕುಡಿಯುವ ನೀರಿಗಾಗಿ ಡ್ಯಾಂ]
ಪ್ರಧಾನಿಗೆ ಪತ್ರ: ಈ ಹಿನ್ನೆಲೆಯಲ್ಲಿ ತಮಿಳುನಾಡಿನ ವಿರೋಧ ಪಕ್ಷಗಳು ಬೀದಿಗಿಳಿದು ಪ್ರತಿಭಟನೆ ಆರಂಭಿಸಿವೆ. ಈ ಕಾರಣದಿಂದ ತಕ್ಷಣ ಈ ಯೋಜನೆಗಳಿಗೆ ತಡೆಯೊಡ್ಡಬೇಕೆಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ತಮಿಳುನಾಡು ಸರ್ಕಾರ ಮೊರೆ ಇಟ್ಟಿದೆ. [ಮತ್ತೆ ಕಾವೇರಿ ಕ್ಯಾತೆ ತೆಗೆದ ಜಯಲಲಿತಾ]
ಈ ಹಿನ್ನೆಲೆಯಲ್ಲಿ ಪ್ರಧಾನ ಮಂತ್ರಿಗೆ ಪತ್ರ ಬರೆದಿರುವ ತಮಿಳುನಾಡು ಮುಖ್ಯಮಂತ್ರಿ ಪನ್ನೀರ ಸೆಲ್ವಂ, ಉದ್ದೇಶಿತ ಡ್ಯಾಂ ಯೋಜನೆಗಳು 2013ರ ಫೆಬ್ರವರಿಯಲ್ಲಿ ಕೇಂದ್ರ ಸರ್ಕಾರವು ಜಾರಿಗೊಳಿಸಿರುವ ಕಾವೇರಿ ನ್ಯಾಯಮಂಡಳಿ ಆದೇಶವನ್ನು ಉಲ್ಲಂಘಿಸುತ್ತಿದೆ ಎಂದು ಆರೋಪಿಸಿದ್ದಾರೆ.
ಕರ್ನಾಟಕ ಸರ್ಕಾರವು ಪದೇ ಪದೆ ನ್ಯಾಯಮಂಡಳಿಯ ಅಂತಿಮ ಆದೇಶವನ್ನು ಉಲ್ಲಂಘಿಸುತ್ತಿದೆ. ಇದರಿಂದ ನದಿಯ ಕೆಳಭಾಗದ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ ಹಾಗೂ ಲಕ್ಷಾಂತರ ರೈತರಿಗೆ ತೊಂದರೆಯಾಗುತ್ತಿದೆ. ಇದೀಗ ಮತ್ತೆ ಆದೇಶ ಉಲ್ಲಂಘಿಸಿ ಮೇಕೆದಾಟು ಪ್ರದೇಶದಲ್ಲಿ ಡ್ಯಾಂ ನಿರ್ಮಿಸಲು ಮುಂದಾಗಿದೆ ಎಂದು ವಿವರಿಸಿದ್ದಾರೆ.
ಅವರನ್ನು ಕೇಳಬೇಕಂತೆ: ತಮಿಳುನಾಡು ಸರ್ಕಾರದ ಒಪ್ಪಿಗೆ ಇಲ್ಲದೆ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಯಾವುದೇ ಜಲಶಕ್ತಿ ಅಥವಾ ನೀರಾವರಿ ಯೋಜನೆಗಳನ್ನು ಕೈಗೊಳ್ಳದಂತೆ ಕರ್ನಾಟಕ ಸರ್ಕಾರಕ್ಕೆ ಸೂಚಿಸಬೇಕೆಂದು ಪನ್ನೀರಸೆಲ್ವಂ ಪತ್ರದಲ್ಲಿ ಕೋರಿದ್ದಾರೆ. [ಮೇಕೆದಾಟು ಜಲವಿದ್ಯುತ್ ಯೋಜನೆ ಸ್ಥಗಿತವಿಲ್ಲ]
ಅಲ್ಲದೆ, ತಮಿಳುನಾಡು ಸರ್ಕಾರವನ್ನು ಸಂಪರ್ಕಿಸದೆ ಕರ್ನಾಟಕ ಪ್ರಸ್ತಾವನೆ ಸಲ್ಲಿಸಿದ ಯಾವುದೇ ಯೋಜನೆಗೆ ಒಪ್ಪಿಗೆ ನೀಡಬಾರದೆಂದು ಕೇಂದ್ರ ಪರಿಸರ ಮತ್ತು ಅರಣ್ಯ ಇಲಾಖೆಗೆ ಸೂಚಿಸಬೇಕೆಂದು ಮನವಿ ಸಲ್ಲಿಸಿದ್ದಾರೆ.
ಕಾವೇರಿ ನೀರಿನ ಬಳಕೆ ಕುರಿತು ಕಣ್ಣಿಡಲು ನ್ಯಾಯಮಂಡಳಿ ಆದೇಶದಂತೆ ಶಾಶ್ವತವಾಗಿ ಕಾವೇರಿ ನಿರ್ವಹಣೆ ಮಂಡಳಿ ಅಥವಾ ಕಾವೇರಿ ಜಲ ನಿಯಂತ್ರಣ ಸಮಿತಿ ರಚಿಸಬೇಕೆಂದೂ ಪನ್ನೀರ ಸೆಲ್ವಂ ಪತ್ರದಲ್ಲಿ ಕೋರಿದ್ದಾನೆ.
ಪ್ರಕರಣ ಬಾಕಿ: ಕರ್ನಾಟಕ ಸರ್ಕಾರವು ಶಿವನಸಮುದ್ರಂ ಹಾಗೂ ಮೇಕೆದಾಟು ಪ್ರದೇಶದಲ್ಲಿ ನಿರ್ಮಿಸಲು ಉದ್ದೇಶಿಸಿದ್ದ ಜಲ ವಿದ್ಯುತ್ ಯೋಜನೆಗಳ ಸ್ಥಗಿತಕ್ಕೆ ಕೋರಿ ತಮಿಳುನಾಡು ಸರ್ಕಾರವು ಈಗಾಗಲೇ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ಈ ಪ್ರಕರಣ ಇನ್ನೂ ಬಾಕಿ ಉಳಿದಿದೆ.