ಪ್ರಜೆಗಳ ರಕ್ಷಣೆ ಆಯಾ ರಾಜ್ಯಗಳದ್ದೇ ಹೊಣೆ : ಸಿದ್ದು
ಬೆಂಗಳೂರು, ಅ. 7 : ಕರ್ನಾಟಕದಲ್ಲಿರುವ ತಮಿಳರೇ ಆಗಿರಲಿ, ತಮಿಳುನಾಡಿನಲ್ಲಿ ನೆಲೆಸಿರುವ ಕನ್ನಡಿಗರೇ ಆಗಲಿ, ಪ್ರಜೆಗಳ ರಕ್ಷಣೆ ಆಯಾ ರಾಜ್ಯಗಳದ್ದೇ ಹೊಣೆ. ತಮಿಳುನಾಡಿನಲ್ಲಿರುವ ಕನ್ನಡಿಗರನ್ನು ತಮಿಳುನಾಡು ಸರಕಾರವೇ ರಕ್ಷಿಸಬೇಕಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಲ್ಲಿ ಸ್ಪಷ್ಟ ನುಡಿಗಳಲ್ಲಿ ಹೇಳಿದ್ದಾರೆ.
ತಮಿಳು ನಾಡಿನ ಮಾಜಿ ಮುಖ್ಯಮಂತ್ರಿ ಡಾ. ಜೆ. ಜಯಲಲಿತಾ ಅವರ ಕುರಿತ ಅಕ್ರಮ ಆಸ್ತಿ ಗಳಿಕೆ ವಿಚಾರಣೆ ರಾಜ್ಯದಲ್ಲಿ ನಡೆಯುತ್ತಿರುವ ಹಿನ್ನೆಲೆಯಲ್ಲಿ ಅಲ್ಲಿನ ರಾಜಧಾನಿ ಚನ್ನೈ ನಗರದಲ್ಲಿ ಕನ್ನಡಿಗರ ವಿರುದ್ಧ ಬೆದರಿಕೆಯ ಭಿತ್ತಿಪತ್ರಗಳನ್ನು ಅಂಟಿಸಲಾಗಿದೆ ಎಂಬ ಅಂಶವನ್ನು ಮಾಧ್ಯಮದವರು ಗಮನಕ್ಕೆ ತಂದಾಗ ಮೇಲಿನಂತೆ ಉತ್ತರಿಸಿದರು. [ಜಯಾ ಜಾಮೀನು ನಿರಾಕರಣೆಗೆ ಕಾರಣಗಳು]
ಈ ಪ್ರಕರಣದ ವರ್ಗಾವಣೆ ಕೋರುವಿರಾ ಎಂಬ ಬಗ್ಗೆ ಕೇಳಿದಾಗ, ಒಕ್ಕೂಟದ ವ್ಯವಸ್ಥೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಸಂಬಂಧಿತ ರಾಜ್ಯಗಳದ್ದೇ ಜವಾಬ್ದಾರಿ. ತಮಿಳುನಾಡಿನಲ್ಲಿರುವ ಕನ್ನಡಿಗರ ಹಿತಕ್ಕೆ ಯಾವುದೇ ಧಕ್ಕೆ ಬಾರದು ಎಂಬ ವಿಶ್ವಾಸ ತಮ್ಮಲ್ಲಿದೆ ಎಂದರು. [ಜಯಾಗೆ ಬೇಲ್ ಸಿಗದಿದ್ದರೆ ಕನ್ನಡಿಗರ ದಿಗ್ಬಂಧನ?]
ರಾಜ್ಯದಲ್ಲಿ ನಡೆಯುತ್ತಿರುವ ಜಯಲಲಿತಾ ಅವರ ವಿರುದ್ಧದ ಪ್ರಕರಣದ ವಿಚಾರಣೆಯಿಂದ ಎರಡೂ ರಾಜ್ಯಗಳ ಬಾಂಧವ್ಯಕ್ಕೆ ತೊಂದರೆಯಾಗುತ್ತದೆ ಎಂಬುದನ್ನು ಸಾರಾಸಗಟಾಗಿ ತಳ್ಳಿ ಹಾಕಿದ ಸಿದ್ದರಾಮಯ್ಯ, ಈ ಪ್ರಕರಣಕ್ಕೂ ರಾಜ್ಯಕ್ಕೂ ಹಾಗೂ ರಾಜ್ಯ ಸರ್ಕಾರಕ್ಕೂ ಯಾವುದೇ ಸಂಬಂಧವಿಲ್ಲ. ಭಾರತದ ಸರ್ವೋಚ್ಚ ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದ ವಿಚಾರಣೆ ರಾಜ್ಯದಲ್ಲಿ ನಡೆಯುತ್ತಿದೆ ಎಂಬುದನ್ನು ಎಲ್ಲರೂ ಗಮನಿಸಬೇಕು. ತಮಿಳುನಾಡಿನಲ್ಲಿರುವ ಕನ್ನಡಿಗರು ಹಾಗೂ ಕರ್ನಾಟಕದಲ್ಲಿರುವ ತಮಿಳರ ಹಿತ ರಕ್ಷಣೆಗೆ ಸರ್ಕಾರ ಬದ್ಧ ಎಂದು ವಿವರಿಸಿದರು.