ಮೆಟ್ರೋ ಸಿಬ್ಬಂದಿ ಜತೆಗೆ ಸಂಧಾನ ಮಾತುಕತೆ ವಿಫಲ
ಬೆಂಗಳೂರು, ಮಾರ್ಚ್ 15: ಬಿಎಂಆರ್ ಸಿಎಲ್ ನೌಕರರ ಸಂಘಕ್ಕೆ ಮಾನ್ಯತೆ, ವೇತನ ಪರಿಷ್ಕರಣೆ, ಗುತ್ತಿಗೆ ಪದ್ಧತಿ ರದ್ದು ಸೇರಿ ಹಲವು ಬೇಡಿಕೆಗಳ ಈಡೇರಿಕೆ ಒತ್ತಾಯಿಸುತ್ತಿದ್ದ ನೌಕರರ ಜತೆಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ನಡೆಸಿದ ಸಂಧಾನ ಸಭೆ ವಿಫಲವಾಗಿದೆ.
ಹೀಗಾಗಿ ಅಧಿಕಾರಿಗಳು ಮತ್ತು ನೌಕರರು ಮಾ.16ಕ್ಕೆ ಕೇಂದ್ರ ಕಾರ್ಮಿಕ ಆಯೋಗ ನಡೆಸಲಿರುವ ಸಭೆಯ ನಿರೀಕ್ಷೆಯಲ್ಲಿದ್ದಾರೆ. ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಮಾ.22ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ನೌಕರರು ನಿರ್ಧರಿಸಿದ್ದರು. ಬಿಎಂಆರ್ ಸಿಎಲ್ ಆಡಳಿತ ಮಂಡಳಿ ಎಸ್ಮಾ ಪ್ರಯೋಗದ ಎಚ್ಚರಿಕೆ ನೀಡಿದ್ದರೂ ನೌಕರರು ಈ ನಿರ್ಧಾರದಿಂದ ಹಿಂದೆ ಸರಿದಿಲ್ಲ.
ಮಾ.22ಕ್ಕೆ ಮೆಟ್ರೋ ರೈಲು ಸಿಬ್ಬಂದಿ ಮುಷ್ಕರ ಖಚಿತ
ಬುಧವಾರ ಹಿರಿಯ ಅಧಿಕರಿಗಳು ಬಿಎಂಆರ್ ಸಿಎಲ್ ನೌಕರರ ಸಂಘದ ಪ್ರತಿನಿಧಿಗಳನ್ನು ಕರೆದು ಮಾತನಾಡಿದ್ದಾರೆ. ಮಾ.21ರೊಳಗೆ ಬೇಡಿಕೆ ಈಡೇರಿಸಿದರೆ ಮುಷ್ಕರದಿಂದ ಹಿಂದೆ ಸರಿಯುತ್ತೇವೆ. ಇಲ್ಲದಿದ್ದರೆ ಮುಷ್ಕರ ನಡೆಸಿಯೇ ತೀರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಸಮಸ್ಯೆ ಬಗೆ ಹರಿಸಲು ಮಧ್ಯಪ್ರವೇಶಿಸಿರುವ ಕೇಂದ್ರ ಕಾರ್ಮಿಕ ಆಯೋಗ ಮಾ.16ರಂದು ಸಭೆ ನಿಗದಿ ಮಾಡಿದೆ. ಈ ಸಭೆಯಲ್ಲಿ ಅಧಿಕಾರಿಗಳು ಹಾಗೂ ನೌಕರರನ್ನು ಒಟ್ಟಿಗೆ ಕೂರಿಸಿ ಚರ್ಚೆ ನಡೆಸಲಾಗುತ್ತದೆ.