ಬಾಣಸವಾಡಿ-ಹೊಸೂರು ಡೆಮು ರೈಲು ತಾತ್ಕಾಲಿಕ ಸ್ಥಗಿತ
ಬೆಂಗಳೂರು, ಮೇ 26: ಡೆಮು ಉಪನಗರ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ. ಬಾಣಸವಾಡಿ-ಹೊಸೂರು ನಡುವೆ ಹೊಸದಾಗಿ ಆರಂಭವಾಗಿದ್ದ ನಾಲ್ಕು ಡೆಮು ಉಪನಗರ ರೈಲುಗಳ ಸಂಚಾರವನ್ನು ನೈಋತ್ಯ ರೈಲ್ವೆ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ.
ಪ್ರಯಾಣಿಕರ ಸುರಕ್ಷತಾ ದೃಷ್ಟಿಯಿಂದ ದೇಶದೆಲ್ಲೆಡೆ ರೈಲು ಹಳಿ ಬದಲಾವಣೆ ಕಾಮಗಾರಿಗೆ ಚುರುಕು ನೀಡಲಾಗಿದೆ. ಪ್ರಸ್ತುತ ಬೆಂಗಳೂರಿನಿಂದ ಮೈಸೂರು, ವೈಟ್ಫೀಲ್ಡ್, ಯಶವಂತಪುರ ಕಡೆಗೆ ರೈಲು ಹಳಿ ಬದಲಾವಣೆ ಕಾರ್ಯ ಮುಕ್ತಾಯವಾಗಿದ್ದು, ಕೊನೆಯ ಹಂತದಲ್ಲಿ ಹೊಸೂರಿಗೆ(40-50ಕಿ.ಮೀ) ಹಳಿ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಳಿ ಬದಲಾವಣೆ ಕಾಮಗಾರಿ ನಡೆಯುವುದರಿಂದ ಬಾಣಸವಾಡಿ ಹೊಸೂರು ಉಪನಗರ ರೈಲು ಸಂಚಾರ ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ರೈಲ್ವೆ ಬೋಗಿಗೆ ಶೀಘ್ರ ಬ್ಲ್ಯಾಕ್ಬಾಕ್ಸ್ ಉಪಕರಣ ಅಳವಡಿಕೆ
ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಯಾವುದೇ ಉದ್ಘಾಟನಾ ಕಾರ್ಯಕ್ರಮ ಆಯೋಜಿಸದೆ ಮಾ. 12ರಂದು ಈ 2 ಹೊಸ ರೈಲುಗಳನ್ನು ತರಾತುರಿಯಲ್ಲಿ ಇಲಾಖೆ ಕಾರ್ಯಾಚರಣೆಗೊಳಿಸಿತ್ತು. ಹೊಸ ಸೇವೆ ಆರಂಭದಿಂದ ಎಲೆಕ್ಟ್ರಾನಿಕ್ಸಿಟಿ ಕಡೆಗೆ ಪ್ರಯಾಣಿಸುತ್ತಿದ್ದ ಸಾವಿರಾರು ಟೆಕ್ಕಿಗಳು ನಿಟ್ಟುಸಿರು ಬಿಟ್ಟಿದ್ದರು.
ಬಾಣಸವಾಡಿಯಿಂದ 1 ಗಂಟೆಯಲ್ಲಿ ಹೊಸೂರು ತಲುಪುತ್ತಿದ್ದರು. ರೈಲಿಗೆ ನಿತ್ಯ ಪ್ರಯಾಣಿಕರ ಸಂಖ್ಯೆ ವೃದ್ಧಿಯಾಗುತ್ತಿತ್ತು. ಆದರೆ, ಇದೀಗ ಹಳಿ ಬದಲಾವಣೆ ಕಾರಣಕ್ಕೆ ಮೇ 26ರಿಂದ ಅ.25ರವರೆಗೂ ರೈಲು ಸಂಚಾರ ಸ್ಥಗಿತಗೊಳಿಸಲು ಇಲಾಖೆ ನಿರ್ಧರಿಸಿದೆ. ಇದರಿಂದ ಟೆಕ್ಕಿಗಳು ಮತ್ತೆ ರಸ್ತೆ ಪ್ರಯಾಣಕ್ಕೆ ಇಳಿಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.