ಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸ್ಥಗಿತ
ಬೆಂಗಳೂರು, ಜೂನ್ 13: ಬಾಣಸವಾಡಿ-ಹೊಸೂರು ನಡುವೆ ಪ್ರಾರಂಭವಾಗಿದ್ದ 4 ಡೆಮು ಉಪನಗರ ರೈಲನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ.
ಹಳಿ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸ್ಥಗಿತಗೊಳಿಸಲಾಗಿದೆ. ರೈಲ್ವೆ ಸುರಕ್ಷತೆ ದೃಷ್ಟಿಯಿಂದ ದೇಶದೆಲ್ಲೆಡೆ ರೈಲು ಹಳಿ ಬದಲಾವಣೆ ಹಾಗೂ ದುರಸ್ತಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಅದರ ಅನ್ವಯ ಈಗಿರುವ ಬೆಂಗಳೂರು-ಮೈಸೂರು, ವೈಟ್ಫೀಲ್ಡ್-ಯಶವಂತಪುರ ಮಾರ್ಗದ ರೈಲು ಹಳಿ ಬದಲಾವಣೆ ಕಾರ್ಯ ಮುಕ್ತಾಯವಾಗಿದೆ.
ಬೆಂಗಳೂರು:ಇಂದಿನಿಂದ ಉಪನಗರ ರೈಲು ಸಂಚಾರ ಆರಂಭ!
ಇದೀಗ ಕೊನೆಯ ಹಂತದಲ್ಲಿ ಹೊಸೂರುವರೆಗೆ ಹಳಿ ಬದಲಾವಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಹಳಿ ಬದಲಾವಣೆ ಕಾಮಗಾರಿ ನಡೆಯುವುದರಿಂದ ಬಾಣಸವಾಡಿ-ಹೊಸೂರು ಉಪನಗರ ರೈಲು ಸಂಚಾರ ಸೇವೆಯನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿದೆ. ರೈಲ್ವೆ ಇಲಾಖೆಯು ಕಳೆದ ಮಾ.12ರಂದು 4 ಡೆಮು ರೈಲು ಸಂಚಾರ ಆರಂಭಿಸಿತ್ತು.
ಇದರಿಂದ ಎಲೆಕ್ಟ್ರಾನಿಕ್ಸಿಟಿ ಕಡೆಗೆ ಪ್ರಯಾಣಿಸುತ್ತಿದ್ದ ಸಾವಿರಾರು ಟೆಕ್ಕಿಗಳಿಗೆ ಅನುಕೂಲವಾಗಿತ್ತು. ಬಾಣಸವಾಡಿಯಿಂದ ಒಂದು ಗಂಟೆ ಅವಧಿಯಲ್ಲಿ ಹೊಸೂರು ತಲುಪಬಹುದಿತ್ತು. ಇದೀಗ ಹಳಿ ಬದಲಾವಣೆ ಕಾಮಗಾರಿ ಹಿನ್ನೆಲೆಯಲ್ಲಿ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಇದರಿಂದ ಆ ಭಾಗಕ್ಕೆ ಪ್ರಯಾಣಿಸುತ್ತಿದ್ದ ಉದ್ಯೋಗಿಗಳು ಮತ್ತು ಸಾರ್ವಜನಿಕರಿಗೆ ಸಮಸ್ಯೆಯಾಗಿದೆ.