ಮಾರಣಾಂತಿಕ ರೋಗಗ್ರಸ್ತರ ನೆರವಿಗಾಗಿ ಎಸ್ಪಿಬಿ ಸಂಗೀತ
ಬೆಂಗಳೂರು, ಮಾರ್ಚ್ 03: ಖ್ಯಾತ ಗಾಯಕ ಡಾ. ಎಸ್ ಪಿ ಬಾಲಸುಬ್ರಮಣ್ಯಂ ಅವರು ಸ್ವರಾನುಭೂತಿ-2018ನಲ್ಲಿ ಹಾಡುವ ಹಾಡಿಗೆ ತಮ್ಮ ಧ್ವನಿಯನ್ನು ನೀಡಲು ಒಪ್ಪಿದ್ದಾರೆ. ಅವರ ಜೊತೆಗೆ ಬಹುಮುಖ ಪ್ರತಿಭೆಯ ಹಿನ್ನೆಲೆ ಗಾಯಕಿ ಶ್ರೀಮತಿ ಎಂ ಡಿ ಪಲ್ಲವಿ ಅವರು ಸಹ ದನಿಗೂಡಿಸಲಿದ್ದಾರೆ.
ಈ ಕಾರ್ಯಕ್ರಮವನ್ನು ಬೆಂಗಳೂರಿನ ಚೌಡಯ್ಯ ಸ್ಮಾರಕ ಭವನದಲ್ಲಿ ದಿನಾಂಕ: 04/03/2018 ರಂದು ಸಂಜೆ 5.30 ರಿಂದ 9 ಗಂಟೆಯವರೆಗೆ ಏರ್ಪಡಿಸಲಾಗಿದೆ. ಕಾರ್ಯಕ್ರಮದ ಟಿಕೆಟ್ಗಳನ್ನು ಸಭಾಭವನದ ಕೌಂಟರ್ನಲ್ಲಿ ಮಾರಲಾಗುತ್ತದೆ. ಕಾರ್ಯಕ್ರಮದಿಂದ ಪೂರ್ಣ ಆದಾಯವನ್ನು 450 ರೋಗಿಗಳ ಅಗತ್ಯಗಳನ್ನು ಪೂರೈಸಲು ಬಳಸಲಾಗುತ್ತದೆ.
ಎಸ್ ವಿ ವೈ ಎಮ್ : 33 ವರ್ಷಗಳಿಂದ ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್(ಎಸ್ ವಿ ವೈ ಎಮ್) ಒಂದು ಪ್ರಗತಿಪರ, ಮಾದರಿ ಸಂಸ್ಥೆಯಾಗಿ ರೂಪುಗೊಂಡಿದ್ದು, ಹೊಸ ಸಮಾಜವನ್ನು ಕಟ್ಟುವಲ್ಲಿ ಶ್ರಮಿಸುತ್ತಿದೆ.
ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್ ಸಂಸ್ಥೆಯು "ಉಪಶಮನ ಆರೈಕೆಯನು 2009-10 ರಿಂದ ಮೈಸೂರು ನಗರದಲ್ಲಿ ಪ್ರಾರಂಭಿಸಿದೆ.
ಉಪಶಮನ ಆರೈಕೆಯು ದೀರ್ಘಕಾಲಿಕ ಹಾಗೂ ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಾ ಹಾಸಿಗೆ ಹಿಡಿದಿರುವ ರೋಗಿಗಳಿಗೆ ರೋಗದ ಎಲ್ಲಾ ಹಂತಗಳಲ್ಲಿ ನೋವಿನಿಂದ ಹೊರ ಬರಲು ಹಾಗೂ ರೋಗವನ್ನು ತಡೆಯುವ ಗುರಿಯನ್ನು ಹೊಂದಿರುತ್ತದೆ.
ಕ್ಯಾನ್ಸರ್, ಪಾರ್ಶ್ವವಾಯು, ಬೆನ್ನುಹುರಿಯ ಗಾಯ, ತೀವ್ರ ನರವೈಜ್ಞಾನಿಕ ಅಸ್ವಸ್ಥತೆ, ಅಧಿಕ ರಕ್ತದೊತ್ತಡ, ಗ್ಯಾಂಗ್ರೇನ್, ಕಿಡ್ನಿ ವೈಫಲ್ಯ, ಸೆರಬ್ರಲ್ ಪಾಲ್ಸಿ, ಮಧುಮೇಹ, ದೈಹಿಕ ಮತ್ತು ಮಾನಸಿಕ ಕಾಯಿಲೆಯನ್ನು ಎದುರಿಸುತ್ತಿರುವ, ಹಾಸಿಗೆ ಹಿಡಿದಿರುವ ಹಾಗೂ ಇತರೆ ಗುಣಪಡಿಸಲಾಗದ ರೋಗಗಳು ಮತ್ತು ಅಸ್ವಸ್ಥೆತೆಗಳಿಂದ ಬಳಲುತ್ತಿರುವ 700 ರೊಗಿಗಳಿಗೆ ಆರೈಕೆ ನೀಡಲಾಗಿದೆ. ಪ್ರಸ್ತುತವಾಗಿ ಉಪಶಮನ ಆರೈಕೆ ಕಾರ್ಯಕ್ರಮದ ಅಡಿಯಲ್ಲಿ ಸುಮಾರು 450 ರೋಗಿಗಳನ್ನು ಬೆಂಬಲಿಸಲಾಗಿದೆ.
ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: ಸ್ವಾಮಿ ವಿವೇಕಾನಂದ ಯೂತ್ ಮೂವ್ಮೆಂಟ್, ಜೆಪಿ ನಗರದ ಕಚೇರಿ, ಬೆಂಗಳೂರು