ನಿತ್ಯಾನಂದ ತಿರುವಣ್ಣಾಮಲೈಗೆ ಶಿಫ್ಟ್, ಶೈವರಿಂದ ವಿರೋಧ
ಬೆಂಗಳೂರು, ಸೆ.9: ಲೈಂಗಿಕ ಕಿರುಕುಳ ಆರೋಪ ಎದುರಿದುತ್ತಿರುವ ಬಿಡದಿ ಆಶ್ರಮದ ಗುರು ನಿತ್ಯಾನಂದ ತನ್ನ 'ಬಿಡದಿ ಮನೆ' ಬಿಟ್ಟು ತವರು ಮನೆಗೆ ಹೋಗುವ ಮಾತನ್ನಾಡಿದ್ದಾರೆ ಎಂದು ಖಾಸಗಿ ಮಾಧ್ಯಮಗಳು ವರದಿ ಮಾಡಿವೆ. ಮಂಗಳವಾರ ಮುಂಜಾನೆ ಆಶ್ರಮವಾಸಿಗಳನ್ನು ಉದ್ದೇಶಿಸಿ ಮಾತನಾಡುತ್ತಾ ಪುರುಷತ್ವ ಪರೀಕ್ಷೆ ಹೆಸರಿನಲ್ಲಿ ನನ್ನನ್ನು ಕರ್ನಾಟಕ ನಡೆಸಿಕೊಂಡ ರೀತಿಯಿಂದ ಬೇಸರವಾಗಿದೆ, ಶೀಘ್ರವೇ ಆಶ್ರಮವನ್ನು ತಿರುವಣ್ಣಾಮಲೈಗೆ ವರ್ಗಾಯಿಸುವುದಾಗಿ ಹೇಳಿದ್ದಾರೆ ಎನ್ನಲಾಗಿದೆ.
ಬಿಡದಿ ಮಠದ ಸ್ಥಳಾಂತರದ ಬಗ್ಗೆ ಮಂಗಳವಾರ ಬೆಳಗ್ಗೆ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ನಿತ್ಯಾನಂದ ಘೋಷಿಸಿರುವುದು ತಮಿಳುನಾಡಿನಲ್ಲೂ ಸಂಚಲನ ಉಂಟು ಮಾಡುತ್ತಿದೆ. ಇನ್ಮುಂದೆ ತಮಿಳುನಾಡಿನ ತಿರುವಣ್ಣಾಮಲೈನಿಂದ ಪ್ರವಚನ ಇನ್ನಿತರ ಕಾರ್ಯಕ್ರಮಗಳು ನಡೆಯಲಿದ್ದು ಅಲ್ಲಿಂದಲೇ ನೇರ ಪ್ರಸಾರ ಮಾಡಲಾಗುವುದು ಎಂಬ ಸುದ್ದಿ ತಿಳಿಯುತ್ತಿದ್ದಂತೆ ತಮಿಳುನಾಡಿನ ಶೈವ ಪಂಥ ಪೀಠಗಳು ಬೆಚ್ಚಿವೆ.
ಈ ನಡುವೆ ಬಿಡದಿಯ ಧ್ಯಾನಪೀಠದ ಆಶ್ರಮವನ್ನು ನಿತ್ಯಾನಂದನ ಶಿಷ್ಯರು ನೋಡಿಕೊಳ್ಳುತ್ತಾರೆ ನ್ಯಾಯಾಲಯದ ಕೆಲಸದ ಸಲುವಾಗಿ ಮಾತ್ರ ನಿತ್ಯಾನಂದ ಬೆಂಗಳೂರಿಗೆ ಬರುತ್ತಾರೆ ಎಂದು ತಿಳಿದು ಬಂದಿದೆ.
ಸ್ವಾಮಿ ನಿತ್ಯಾನಂದ ಅವರ ಪುರುಷತ್ವ ಪರೀಕ್ಷೆ ನಡೆಸಿದ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ವಿಕ್ಟೋರಿಯಾ ಆಸ್ಪತ್ರೆ ಅಧೀಕ್ಷಕ ಡಾ. ಟಿ.ದುರ್ಗಪ್ಪ ಅವರು, ಸುಪ್ರೀಂಕೋರ್ಟ್ ಸೂಚನೆ ಮೇರೆಗೆ ಪರೀಕ್ಷೆ ಪೂರ್ಣಗೊಳಿಸಲಾಗಿದೆ. ಎಲ್ಲ ತರಹದ ಪರೀಕ್ಷೆಗಳಿಗೂ ಅವರು ಸ್ಪಂದಿಸಿದ್ದು, ಮುಂದಿನ ಎರಡು ದಿನಗಳಲ್ಲಿ ವರದಿ ಸಿದ್ಧಗೊಳ್ಳುತ್ತದೆ, ಅದನ್ನು ಸಿಐಡಿ ಅಧಿಕಾರಿಗಳಿಗೆ ಸಲ್ಲಿಸುತ್ತೇವೆ ಎಂದಿದ್ದಾರೆ [ಎರಡು ದಿನದಲ್ಲಿ ನಿತ್ಯಾ ಪರೀಕ್ಷೆ ವರದಿ ಸಿಐಡಿ ಕೈಗೆ]
ನಿತ್ಯಾನಿಗೇಕೆ ಎಂದೂ ಇಲ್ಲದ ಸಂಕಟ ಬಂದಿದೆ
ಕೋರ್ಟ್ ಆದೇಶದಂತೆ ವಿಧಿವಿಜ್ಞಾನ ತಜ್ಞ, ಮನೋವೈದ್ಯ ತಜ್ಞ, ಆಂಡ್ರೋಲಾಜಿ ಮತ್ತು ಯೂರೋಲಾಜಿಸ್ಟ್ ಮತ್ತು ಫಿಜಿಷಿಯನ್ ಸೇರಿದಂತೆ ನಾಲ್ಕು ತಜ್ಞ ವೈದ್ಯರು ವಿವಿಧ ರೀತಿಯಲ್ಲಿ ನಿತ್ಯಾನಂದನ ಪುರುಷತ್ವ ಪರೀಕ್ಷೆ ನಡೆಸಿದ ನಂತರ ಲಿಂಗ ಪರೀಕ್ಷೆಗೂ ಮುಂದಾಗಿ ಧ್ವನಿ ಸ್ಯಾಂಪಲ್ ತೆಗೆದುಕೊಂಡಿದ್ದು ನಿತ್ಯಾನಂದ ಅವರಿಗೆ ತೀವ್ರ ನೋವುಂಟು ಮಾಡಿದೆಯಂತೆ. ಹೀಗಾಗಿ ಇಲ್ಲಿನ ಜನರ ಸಹವಾಸ ಸಾಕು ಎಂದು ನಿರ್ಧರಿಸಿದ್ದಾರೆ ಎನ್ನಲಾಗಿದೆ. [ಪುರುಷತ್ವ ಪರೀಕ್ಷೆ ಎಂದರೇನು? ಏಕೆ ಮಾಡ್ಬೇಕು?]
ಕನ್ನಡ ಪರ ಸಂಘಟನೆಗಳ ಪ್ರತಿಭಟನೆ
ಕರ್ನಾಟಕದಿಂದ ನಿತ್ಯಾನಂದನ ಗಡಿಪಾರಿಗೆ ಆಗ್ರಹಿಸಿ ಪ್ರವೀಣ್ ಕುಮಾರ್ ಶೆಟ್ಟಿ ಬಳಗದ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬಿಡದಿ ಆಶ್ರಮದ ಮುಂದೆ ನಿನ್ನೆ ಭಾರಿ ಪ್ರತಿಭಟನೆ ನಡೆಸಿತ್ತು. ಇದರಿಂದ ಸಿಟ್ಟಿಗೆದ್ದ ಆಶ್ರಮವಾಸಿಗಳು ತಮ್ಮ ಕೋಪವನ್ನು ಖಾಸಗಿ ಮಾಧ್ಯಮ ಪ್ರತಿನಿಧಿಗಳ ಮೇಲೆ ಹಲ್ಲೆ ಮಾಡುವ ಮೂಲಕ ತೀರಿಸಿಕೊಂಡಿದ್ದರು.
ಈ ರೀತಿ ನಿರಂತರವಾಗಿ ಕನ್ನಡ ಪರ ಸಂಘಟನೆಗಳು ಸ್ಥಳೀಯ ಮಾಧ್ಯಮಗಳ ಕಿರಿಕಿರಿಯನ್ನು ತಪ್ಪಿಸಿಕೊಳ್ಳಲು ನಿತ್ಯಾನಂದ ಅವರು ತಮಿಳುನಾಡಿನ ಕಡೆ ಮುಖ ಮಾಡಿದ್ದಾರೆ. ಆದರೆ, ಇದು ಬೇಸರದಿಂದ ನಡೆಯುತ್ತಿರುವ ಶಿಫ್ಟಿಂಗ್ ಕಾರ್ಯ ಯಾರದೇ ಬೆದರಿಕೆಗೆ ಆಶ್ರಮವಾಸಿಗಳು ಬಗ್ಗುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಶೈವ ಅಧೀನಂ ಪೀಠಗಳಿಂದ ಬಹಿಷ್ಕಾರ
ಈಗಾಗಲೇ ಮದುರೈ ಅಧೀನಂ ಪೀಠ ಏರಲು ಹೋಗಿ ಕೆಳಗೆ ಬಿದ್ದಿರುವ ಸ್ವಾಮಿ ನಿತ್ಯಾನಂದ ಈಗ ಮತ್ತೊಮ್ಮೆ ತಮ್ಮ ಹುಟ್ಟೂರು ತಿರುವಣ್ಣಾಮಲೈ ಕಡೆ ಮುಖ ಮಾಡಿದ್ದಾರೆ. ಮಧುರೈ ಅಧೀನ ಪೀಠ ಸಂರಕ್ಷಣಾ ಸಮಿತಿ, ಧರ್ಮಪುರಂ, ತಿರುಪಾನಂದಲ್ ಅಧೀನಂ ಸೇರಿದಂತೆ 12ಕ್ಕೂ ಅಧಿಕ ಶೈವಪೀಠಗಳು ಸ್ವಾಮಿ ನಿತ್ಯಾನಂದ ಬರುವಿಕೆಯನ್ನು ವಿರೋಧಿಸಲು ನಿರ್ಧರಿಸಿವೆ.
ಅದರೆ, ಸ್ವಾಮಿ ನಿತ್ಯಾನಂದನ ಬಗ್ಗೆ ಬಹುದೊಡ್ಡ ಶೈವ ಪಂಥ ಹೊಂದಿರುವ ಕರ್ನಾಟಕದಲ್ಲಿ ಮಾತ್ರ ಹೆಚ್ಚಿನ ಒತ್ತಡ ಕಂಡು ಬಂದಿಲ್ಲ. ಇಲ್ಲಿನ ಕೆಲ ವೀರಶೈವ ಮಠಗಳು ನಿತ್ಯಾನಂದ ಅವರಿಗೆ ಬೆಂಬಲ ವ್ಯಕ್ತಪಡಿಸಿದ್ದೂ ಉಂಟು.
ಈ ಆದೇಶ ಹೊರಬಿದ್ದು ಎರಡು ವರ್ಷ ಕಳೆದರೂ
ಡಿವಿ ಸದಾನಂದ ಗೌಡ ಅವರು ಕರ್ನಾಟಕ ಮುಖ್ಯಮಂತ್ರಿ ಆಗಿದ್ದ ಕಾಲದಲ್ಲಿ ಸ್ವಾಮಿ ನಿತ್ಯಾನಂದ ಅವರನ್ನು ಕರ್ನಾಟಕದಿಂದ ಗಡೀಪಾರು ಮಾಡುವಂತೆ ಆದೇಶ ಹೊರಡಿಸಿದ್ದರು. ಮೊಟ್ಟ ಮೊದಲ ಬಾರಿಗೆ ಇಂಥದ್ದೊಂದು ಆದೇಶ ಕೇಳಿ ನಿತ್ಯಾನಂದ ಅವರು ಬೆಚ್ಚಿದ್ದರು. ಕಾರಣ, ನಿತ್ಯಾನಂದನ ಜೊತೆಗೆ ಬಿಡದಿ ಆಶ್ರಮವನ್ನು ಖಾಲಿ ಮಾಡಿ ವಶಕ್ಕೆ ತೆಗೆದುಕೊಳ್ಳುವಂತೆ ಅಂದಿನ ಗೃಹ ಸಚಿವ ಆರ್ ಅಶೋಕ್ ಗೆ ಸೂಚನೆ ನೀಡಿದ್ದರು.
ಅದರೆ, ಈ ಆದೇಶ ಹೊರಬಿದ್ದು ಎರಡು ವರ್ಷ ಕಳೆದರೂ ನಿತ್ಯಾನಂದನ ಕೂದಲು ಕೊಂಕಿಲ್ಲ. ಬಿಜೆಪಿ ಅಧಿಕಾರ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಬಂದಿದೆ. ಸದಾನಂದ ಗೌಡರು ಈಗ ರೈಲ್ವೆ ಸಚಿವರಾಗಿದ್ದಾರೆ.