ನವೀನ್ ಬಂಧನ ಇನ್ನೂ ಒಂದು ವಾರ ತಡವಾಗಿದ್ದರೆ?
ಬೆಂಗಳೂರು, ಮಾರ್ಚ್ 13 : ವಿಚಾರಣೆಯ ಸಮಯದಲ್ಲಿ ಕ್ಷಣಕ್ಕೊಂದು ಹೇಳಿಕೆ ಬದಲಿಸುತ್ತಿರುವ ಕೆ.ಟಿ. ನವೀನ್ ಕುಮಾರ್ ಅಲಿಯಾಸ್ ಹೊಟ್ಟೆ ಮಂಜ, ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಭಾಗಿಯಾಗಿದ್ದಾನಾ ಇಲ್ಲವಾ ಎಂಬುದು ಇನ್ನೂ ಸಾಬೀತಾಗಬೇಕಿದೆ. ಆದರೆ, ಅಷ್ಟರಲ್ಲಿ ಕುತೂಹಲಕರ ಸಂಗತಿ ಬೆಳಕಿಗೆ ಬಂದಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಗೌರಿ ಲಂಕೇಶ್ ಹತ್ಯೆಯಲ್ಲಿ ನವೀನ್ ಕುಮಾರ್ ತೋರಿದ ಕೈಚಳಕದಿಂದ ಪ್ರಭಾವಿತರಾಗಿದ್ದ, ಪ್ರಕರಣದ ಹಿಂದಿರುವ ಕಾಣದ ಕೈಗಳು, ನವೀನ್ ಕುಮಾರ್ ಗೆ ಮತ್ತೊಂದು ಹತ್ಯೆಯ 'ಸುಪಾರಿ' ನೀಡಿದ್ದರೆಂದು ಸಂಗತಿಯನ್ನು ತನಿಖಾಧಿಕಾರಿಗಳು ತಿಳಿಸಿದ್ದಾರೆ.
ಗೌರಿ ಹತ್ಯೆ, ಮೊದಲ ಬಂಧನ: ಮಾರ್ಚ್ 12ಕ್ಕೆ ಮದ್ದೂರು ಬಂದ್
ಆ ಮತ್ತೊಬ್ಬ ವ್ಯಕ್ತಿ ಮತ್ತಾರೂ ಅಲ್ಲ, ವಿವಾದಿತ ಕನ್ನಡ ಲೇಖಕ, ಪ್ರಗತಿಪರ ಚಿಂತಕ, ಅನುವಾದಕ, ಮೈಸೂರಿನಲ್ಲಿ ನೆಲೆಸಿರುವ ನಿವೃತ್ತ ಪ್ರಾಧ್ಯಾಪಕ ಕೆ ಎಸ್ ಭಗವಾನ್. ಅಸಲಿಗೆ, ಫೆಬ್ರವರಿ 18ರಂದು ಬಂಧಿತನಾಗುವ ಸಮಯದಲ್ಲಿ, ಭಗವಾನ್ ಅವರನ್ನು ಹತ್ಯೆಗೈಯಲೆಂದೇ ಬಂದೂಕನ್ನು ಕೊಳ್ಳುವ ಪ್ರಕ್ರಿಯೆಯಲ್ಲಿ ಆತ ನಿರತನಾಗಿದ್ದ. ಆತನ ಬಳಿಯಿಂದ ಅಕ್ರಮವಾಗಿ ಇಟ್ಟುಕೊಂಡಿದ್ದ ಹಲವಾರು ಜೀವಂತ ಗುಂಡುಗಳನ್ನು ಕೂಡ ವಶಪಡಿಸಿಕೊಳ್ಳಲಾಗಿದೆ.
ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ
ಈ ಹಿನ್ನೆಲೆಯಲ್ಲಿ, ಗೌರಿ ಹತ್ಯೆಯ ಪ್ರಮುಖ ಆರೋಪಿ ಸ್ಥಾನದಲ್ಲಿರುವ ಹೊಟ್ಟೆ ಮಂಜನ ಮೇಲೆ ಕೇಸು ಪ್ರಬಲವಾಗುತ್ತಾ ಸಾಗಿದೆ. ಆದರೂ, ಆತ ಕೊಲೆ ಮಾಡಿರುವ ಬಗ್ಗೆ ಬಾಯಿ ಬಿಡುತ್ತಿಲ್ಲ. ಅಲ್ಲದೆ ವ್ಯತಿರಿಕ್ತ ಹೇಳಿಕೆ ನೀಡುತ್ತಿರುವುದರಿಂದ, ಮಂಪರು ಪರೀಕ್ಷೆ ಕೂಡ ನಡೆಸಲು ನ್ಯಾಯಾಲಯ ಪೊಲೀಸರಿಗೆ ಅನುಮತಿ ನೀಡಿದೆ.
2017ರ ಸೆಪ್ಟೆಂಬರ್ 5ರಂದು ಗೌರಿ ಲಂಕೇಶ್ ಕೊಲೆ
ಸೆಪ್ಟೆಂಬರ್ 5ರ ಸಂಜೆ 7.30ರ ಸುಮಾರಿಗೆ ತಮ್ಮ ಲಂಕೇಶ್ ಪತ್ರಿಕೆ ಕಚೇರಿಯಿಂದ ರಾಜರಾಜೇಶ್ವರಿ ನಗರದಲ್ಲಿರುವ ನಿವಾಸಕ್ಕೆ ಗೌರಿ ಲಂಕೇಶ್ ಅವರು ಬಂದು, ಕಾರು ನಿಲ್ಲಿಸಿ ಗೇಟನ್ನು ತೆರೆಯುತ್ತಿದ್ದಾಗ ಬೈಕ್ ಮೇಲೆ ಬಂದಿದ್ದ ಹಂತಕರು ಗೌರಿಯ ಮೇಲೆ ಗುಂಡಿನ ಮಳೆ ಸುರಿದಿದ್ದರು. ನಾಲ್ಕು ಗುಂಡುಗಳು ಗೌರಿ ದೇಹವನ್ನು ಹೊಕ್ಕಿದ್ದವು. ಗೌರಿಯವರು ತಪ್ಪಿಸಿಕೊಳ್ಳಲು ಯತ್ನಿಸಿದರೂ, ಹಂತಕರು ಬಿಡದೆ ಗುಂಡಿನ ಸುರಿಮಳೆಗರೆದು ಸ್ಥಳದಲ್ಲಿಯೇ ಗೌರಿಯನ್ನು ಕೊಂದಿದ್ದರು. ಆ ಸಮಯದಲ್ಲಿ ಮನೆಯ ಮುಂದೆ ಬೀದಿ ದೀಪ ಇಲ್ಲದಿದ್ದುದು ಹಂತಕರಿಗೆ ಸಹಾಯವಾಗಿತ್ತು. ಅಲ್ಲದೆ ಹಂತಕ, ಹೆಲ್ಮೆಟ್ ಧರಿಸಿದ್ದರಿಂದ ವ್ಯಕ್ತಿಯ ಗುರುತು ಸಿಕ್ಕಿರಲಿಲ್ಲ. ಮನೆ ಮುಂದಿನ ಸಿಸಿಟಿವಿ ಕ್ಯಾಮೆರಾ ಕೂಡ ಸ್ಪಷ್ಟ ಸಾಕ್ಷ್ಯ ದೊರಕಿಸಿಕೊಟ್ಟಿರಲಿಲ್ಲ.
ಗೌರಿ ಮನೆ ಮುಂದೆ ಅಡ್ಡಾಡಿದ್ದ ನವೀನ್
ಮತ್ತೊಂದು ಮಹತ್ವದ ಸಂಗತಿಯೆಂದರೆ, ಶಂಕಿತ ಹಂತಕ ನವೀನ ಕುಮಾರ್, ರಾಜಾಜಿನಗರದಲ್ಲಿರುವ ಗೌರಿ ಲಂಕೇಶ್ ಮನೆಯ ಬಳಿ ಹಲವಾರು ಬಾರಿ ಸುತ್ತಾಡಿ, ಗೌರಿ ತಮ್ಮ ಕಚೇರಿಯಿಂದ ಪ್ರತಿದಿನ ಮನೆಗೆ ಮರಳುವ ಸಮಯ ನೋಡಿಕೊಂಡು, ಹೆಚ್ಚು ಜನ ಅಡ್ಡಾಡದಿರುವ ಸಮಯ ನಿಗದಿ ಮಾಡಿಕೊಂಡು, ಸುಪಾರಿ ಹಂತಕರಿಗೆ ಹತ್ಯೆಗೆ ವೇದಿಕೆ ಕಲ್ಪಿಸಿಕೊಟ್ಟಿದ್ದ. ಸಂಚಿನಂತೆ ಗೌರಿಯನ್ನು ಅತ್ಯಂತ ನಿಖರವಾಗಿ ಮತ್ತು ಯೋಜನೆಯಂತೆ ಹತ್ಯೆ ಮಾಡಲಾಗಿದೆ. ಪೊಲೀಸರ ಪ್ರಕಾರ, ಹಂತಕರು ಕರ್ನಾಟಕದ ಹೊರಗಡೆಯಿಂದ ಬಂದವರಾಗಿದ್ದಾರೆ. ನವೀನ್ ಕುಮಾರನೇ ನೇರವಾಗಿ ಭಾಗಿಯಾಗಿದ್ದಾನಾ ಎಂಬುದೂ ಸಾಬೀತಾಗಬೇಕಾಗಿದೆ. ಕೆಲ ತಿಂಗಳ ಹಿಂದೆ ಪೊಲೀಸರು ಹಂತಕರ ಮುಖಚೆಹರೆಯ ಸ್ಕೆಚ್ ಕೂಡ ಬಿಡುಗಡೆ ಮಾಡಿದ್ದರು.
ಗೌರಿ ಹತ್ಯೆ ಪ್ರಕರಣ: ಆರೋಪಿ ನವೀನ್ ಕುಮಾರ್ ಗೆ ಮಂಪರು ಪರೀಕ್ಷೆ
ಮಂಪರು ಪರೀಕ್ಷೆಗೆ ಕೋರ್ಟ್ ಅನುಮತಿ
ನವೀನ್ ಕುಮಾರ್ ತನಿಖಾಧಿಕಾರಿಗಳ ಮುಂದೆ ವಿಭಿನ್ನ ಹೇಳಿಕೆ ನೀಡಿದ್ದು, ಒಂದಕ್ಕೊಂದು ತಾಳೆಯಾಗುತ್ತಿಲ್ಲ. ಆತನ ಹೇಳಿಕೆ ಸತ್ಯಾಸತ್ಯತೆ ಅರಿಯಲು ಆತನಿಗೆ ಮಂಪರು ಪರೀಕ್ಷೆಗೆ ಅನುಮತಿ ನೀಡಬೇಕೆಂದು ನ್ಯಾಯಾಲಯಕ್ಕೆ ಪೊಲೀಸರು ಕೋರಿದ್ದರು. ನವೀನ್ ಕುಮಾರ್ ತನಿಖೆಗೆ ಸರಿಯಾಗಿ ಸಹಕಾರ ನೀಡದಿರುವ ಹಿನ್ನೆಲೆಯಲ್ಲಿ ಮ್ಯಾಜಿಸ್ಟ್ರೇಟರು ಅನುಮತಿ ನೀಡಿದ್ದು, ವಿಧಿವಿಜ್ಞಾನ ಕೇಂದ್ರದಲ್ಲಿ ಮಂಪರು ಪರೀಕ್ಷೆ ನಡೆಯಲಿದೆ. ಈ ಮೊದಲು, ಮಂಪರು ಪರೀಕ್ಷೆಗೆ ತನಿಖೆಯ ವೇಳೆ ಆತ ಒಪ್ಪಿಕೊಂಡಿದ್ದರೂ ನಂತರ ಮ್ಯಾಜಿಸ್ಟ್ರೇಟ್ ಮುಂದೆ ನಿರಾಕರಿಸಿದ್ದ.
ಹಿಂದೂಗಳನ್ನು ಕೆಣಕುತ್ತಿರುವ ಭಗವಾನ್
ಇದೀಗ, ಹಿಂದೂ ದೇವರ ವಿರುದ್ಧ ಹೇಳಿಕೆ ನೀಡಿ ಹಿಂದೂಗಳನ್ನು ಸಾಕಷ್ಟು ಬಾರಿ ಕೆಣಕಿರುವ ಕೆಎಸ್ ಭಗವಾನ್ ಹತ್ಯೆಯ ಸಂಚು ಕೂಡ ಬೆಳಕಿಗೆ ಬಂದಿದ್ದರಿಂದ, ಗೌರಿ ಲಂಕೇಶ್ ಹತ್ಯೆಯ ತನಿಖೆಯ ಜೊತೆಗೆ ಭಗವಾನ್ ಪ್ರಕರಣವನ್ನು ಕೂಡ ತನಿಖೆಗೆ ಒಳಪಡಿಸಲಿದೆ. ಭಾರತೀಯ ದಂಡ ಸಂಹಿತೆಯ ಅಡಿಯಲ್ಲಿ ಭಗವಾನ್ ಹತ್ಯೆಗೆ ಯತ್ನ ಮತ್ತು ಸಂಚು ರೂಪಿಸಿದ ಆರೋಪದಡಿ ನವೀನ್ ವಿಚಾರಣೆಗೆ ಒಳಗಾಗಲಿದ್ದಾನೆ. ಜೊತೆಗೆ ಅಕ್ರಮವಾಗಿ ಶಸ್ತ್ರಾಸ್ತ್ರ ಕಾಯ್ದೆಯಡಿ ಕೂಡ ವಿಚಾರಣೆಗೆ ಒಳಪಡಲಿದ್ದಾನೆ ಎಂದು ಬೆಂಗಳೂರು ಡಿಸಿಪಿ (ಪಶ್ಚಿಮ) ಎಂಎನ್ ಅನುಚೇತ್ ಅವರು ತನಿಖೆಯ ವಿವರಣೆಯನ್ನು ನೀಡಿದ್ದಾರೆ.
ಬಂಧನ ಇನ್ನು ಒಂದು ವಾರ ತಡವಾಗಿದ್ದರೆ...
ಮತ್ತೊಂದು ಆಘಾತಕರ ಸಂಗತಿ ಬೆಳಕಿಗೆ ಬಂದಿರುವುದೇನೆಂದರೆ, ನವೀನ್ ಕುಮಾರ್ ನನ್ನು ಬಂಧಿಸಲು ಒಂದು ವಾರ ತಡ ಮಾಡಿದ್ದರೂ, ಮೈಸೂರಿನಲ್ಲಿ ಕೆಎಸ್ ಭಗವಾನ್ ಅವರ ಹತ್ಯೆಯಾಗುವ ಸಂಭವನೀಯತೆ ಇತ್ತು. ಸಕಾಲದಲ್ಲಿ ಶಂಕಿತ ಹಂತಕ ನವೀನ್ ಕುಮಾರ್ ನನ್ನು ಬಂಧಿಸಿರುವುದರಿಂದ ಹತ್ಯೆ ತಪ್ಪಿದಂತಾಗಿದೆ. ಸನಾತನ ಸಂಸ್ಥೆಗೆ ಸೇರಿದವನೆನ್ನಲಾಗಿರುವ ನವೀನ್ ಕುಮಾರ್ ಗೆ, ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸುವ, ಶಸ್ತ್ರಾಸ್ತ್ರಗಳನ್ನು ಕೊಂಡು ಹಂತಕರಿಗೆ ನೀಡುವ ಮತ್ತು ಹತ್ಯೆ ಮಾಡುವಲ್ಲಿ, ಕರ್ನಾಟಕಕ್ಕೆ ಈಗಾಗಲೆ ಭೇಟಿ ನೀಡಿದ್ದ, ಹಂತಕರಿಗೆ ಸಹಾಯಹಸ್ತ ನೀಡುವ ಜವಾಬ್ದಾರಿಯನ್ನು ವಹಿಸಲಾಗಿತ್ತು.
ಶಂಕಿತ ಗೌರಿ ಹಂತಕರ ಸದಸ್ಯನಿಂದ ಮತ್ತೊಬ್ಬ ವಿಚಾರವಾದಿ ಕೊಲೆಗೆ ಸಂಚು!
ಭಗವಾನ್ ಅವರ ಜೀವಕ್ಕೆ ಅಪಾಯವಿತ್ತು
ಭಗವಾನ್ ಹತ್ಯೆಯ ಸಂಚಿನ ಸುಳಿವು ದೊರೆಯುತ್ತಿದ್ದಂತೆ ಅವರಿಗೆ ಮೈಸೂರಿನಲ್ಲಿ ಬಿಗಿ ಭದ್ರತೆ ಒದಗಿಸಲಾಗಿತ್ತು. ಇದೀಗ ನವೀನ್ ಕುಮಾರ್ ಬಂಧನದ ನಂತರ ಭದ್ರತೆಯನ್ನು ಮತ್ತಷ್ಟು ಹೆಚ್ಚಿಸಲಾಗಿದೆ. ಮತ್ತೊಂದು ತನಿಖೆಯ ಪ್ರಕಾರವೂ, ಭಗವಾನ್ ಅವರ ಜೀವಕ್ಕೆ ಅಪಾಯವಿತ್ತು ಎಂದು ಮೈಸೂರು ಪೊಲೀಸ್ ಕಮಿಷನರ್ ಸುಬ್ರಮಣ್ಯೇಶ್ವರ ತಿಳಿಸಿದ್ದಾರೆ. ಆ ಇನ್ನೊಂದು ತನಿಖೆ ತಿಳಿಸುವುದೇನೆಂದರೆ, ಗೌರಿ ಹತ್ಯೆಯ ತನಿಖೆಯ ದಾರಿ ತಪ್ಪಿಸಲೆಂದೇ, ಕೆಎಸ್ ಭಗವಾನ್ ಅವರ ಹತ್ಯೆಗೆ ಸಂಚು ರೂಪಿಸಲಾಗಿತ್ತು. ಗೌರಿ ಹಂತಕರ ಸುಳಿವಿನ ಬಗ್ಗೆ ಗೃಹ ಸಚಿವರಾದ ರಾಮಲಿಂಗಾ ರೆಡ್ಡಿ ಹೇಳಿಕೆ ನೀಡುತ್ತಲೇ ಬಂದಿದ್ದರು.
ಇತರ ಹತ್ಯೆಗಳ ಮೇಲೆ ಬೆಳಕು ಚೆಲ್ಲುವುದೆ?
ಗೌರಿ ಲಂಕೇಶ್ ಅವರನ್ನು 7.65 ಎಂಎಂ ದೇಶೀಯ ಪಿಸ್ತೂಲಿನಿಂದ ಹತ್ಯೆ ಮಾಡಲಾಗಿತ್ತು. 2015ರ ಆಗಸ್ಟ್ ನಲ್ಲಿ ಸಂಶೋಧಕ ಎಂಎಂ ಕಲಬುರ್ಗಿ ಅವರನ್ನು ಕೂಡ ಧಾರವಾಡದಲ್ಲಿ ಇದೇ ಬಗೆಯ ಪಿಸ್ತೂಲಿನಿಂದ ಹಣೆಗೆ ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಇವರಲ್ಲದೆ, ಪ್ರಗತಿಪರ ಚಿಂತಕ ಗೋವಿಂದ ಪನ್ಸಾರೆ ಅವರನ್ನು ಕೂಡ ಇದೇ ಬಗೆಯ ಪಿಸ್ತೂಲಿನಿಂದ ಕೊಲ್ಲಲಾಗಿತ್ತು. ಅವರಿಬ್ಬರ ಹಂತಕರು ಇನ್ನೂ ಸಿಕ್ಕಿಲ್ಲ. ಈ ಎಲ್ಲ ಹಿನ್ನೆಲೆಯಲ್ಲಿ ನವೀನ್ ಕುಮಾರ್ ಬಂಧನ ಭಾರೀ ಮಹತ್ವ ಪಡೆದುಕೊಂಡಿದೆ. ಈ ಪ್ರಕರಣ ಉಳಿದ ಪ್ರಕರಣಗಳ ತನಿಖೆಯ ದಾರಿಯನ್ನೂ ಸುಗಮಗೊಳಿಸಬಹುದು.