ಬೆಂಗಳೂರು ಸ್ಫೋಟ : ಮದನಿಗೆ ಸುಪ್ರೀಂ ಜಾಮೀನು
ಪೀಪಲ್ಸ್ ಡೆಮಾಕ್ರೆಟಿಕ್ ಪಾರ್ಟಿ ಸ್ಥಾಪಕ ಅಬ್ದುಲ್ ನಾಸಿರ್ ಮದನಿ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿಚಾರಣೆಯನ್ನು ಶುಕ್ರವಾರ ನಡೆಸಿದ ಸುಪ್ರೀಂಕೋರ್ಟ್ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ. ಒಂದು ವೇಳೆ ಪ್ರಕರಣದ ಸಾಕ್ಷಿಗಳ ಜೊತೆ ಮದನಿ ಮಾತುಕತೆ ನಡೆಸುವುದು ತಿಳಿದುಬಂದರೆ, ತಕ್ಷಣದಿಂದಲೇ ಜಾಮೀನಿ ಅರ್ಜಿ ವಜಾಗೊಳ್ಳುತ್ತದೆ ಎಂದು ಕೋರ್ಟ್ ಎಚ್ಚರಿಕೆ ನೀಡಿದೆ.
ತಲಾ 1 ಲಕ್ಷ ರೂ.ಗಳ ಎರಡು ಬಾಂಡ್ ಗಳನ್ನು ಒಂದು ತಿಂಗಳ ಜಾಮೀನಿಗಾಗಿ ಮದನಿ ನ್ಯಾಯಾಲಯಕ್ಕೆ ನೀಡಬೇಕಾಗುತ್ತದೆ. ಬೆಂಗಳೂರಿನಲ್ಲಿ ನೆಲೆಸುವ ಮದನಿ ಎಲ್ಲಿರುತ್ತಾರೆ? ಎಂಬ ಬಗ್ಗೆ ವಿಳಾಸವನ್ನು ಕರ್ನಾಟಕದ ಪೊಲೀಸರಿಗೆ ನೀಡುವಂತೆ ಕೋರ್ಟ್ ತನ್ನ ಆದೇಶದಲ್ಲಿ ಸೂಚನೆ ನೀಡಿದೆ. [ಮದನಿ ಮೇಲಿನ ಆರೋಪಗಳೇನು?]
2008ರ ಜುಲೈ 25ರಂದು ಬೆಂಗಳೂರಿನಲ್ಲಿ ಸಂಭವಿಸಿದ ಸರಣಿ ಸ್ಫೋಟದ ರೂವಾರಿಯಾದ ಅಬ್ದುಲ್ ನಾಸಿರ್ ಮದನಿ 2010ರಿಂದ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾನೆ. ಮದನಿ ಮೇಲೆ ಉಗ್ರ ಚಟುವಟಿಕೆ, ಕೊಲೆ ಯತ್ನ ಮುಂತಾದ ಆರೋಪಗಳಿವೆ. ಅಂಧತ್ವ, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ಮದನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಸುಪ್ರೀಂಕೋರ್ಟ್ ಕೆಲವು ದಿನಗಳ ಹಿಂದೆ ಕರ್ನಾಟಕ ಸರ್ಕಾರಕ್ಕೆ ಆದೇಶಿಸಿತ್ತು. [ಮದನಿ ಯಾರು, ಆತನ ಪ್ರತಾಪಗಳೇನು?]
ಕರ್ನಾಟಕ ಸರ್ಕಾರ 16 ಲಕ್ಷ ರೂ.ಖರ್ಚು ಮಾಡಿ ಬೆಂಗಳೂರಿನ ಮಣಿಪಾಲ್ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಮದನಿಗೆ ಚಿಕಿತ್ಸೆ ಕೊಡಿಸಿತ್ತು. ಜುಲೈ 4ರಂದು ಮದನಿಯನ್ನು ಮಣಿಪಾಲ್ ಆಸ್ಪತ್ರೆಗೆ ತಪಾಸಣೆಗಾಗಿ ಕರೆದುಕೊಂಡು ಹೋಗಬೇಕಾಗಿತ್ತು. ಆದರೆ, ಆಸ್ಪತ್ರೆಗೆ ಬರಲು ಮದನಿ ನಿರಾಕರಿಸುತ್ತಿದ್ದಾನೆ ಎಂದು ಸುಪ್ರೀಂಕೋರ್ಟ್ ಗೆ ಮೂರು ದಿನಗಳ ಹಿಂದೆ ಕರ್ನಾಟಕ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿತ್ತು. [ಬೆಂಗಳೂರು ಸರಣಿ ಸ್ಫೋಟ ಎಲ್ಲಿ, ಯಾವಾಗ?]