ಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ
Recommended Video
ಬೆಂಗಳೂರು, ಡಿಸೆಂಬರ್ 11: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರ ಹತ್ಯೆಗೆ ಸುಪಾರಿ ನೀಡಿದ ಆರೋಪ ಎದುರಿಸುತ್ತಿರುವ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.
ಸಂಪಾದಕ ರವಿಬೆಳಗೆರೆ ವಿರುದ್ಧ ದೂರು ನೀಡಿದ ಪತ್ರಕರ್ತ ಸುನೀಲ್
1ನೇ ಎಸಿಎಂಎಂ ನ್ಯಾಯಾಧೀಶ ಜಗದೀಶ್ ಅವರು ರವಿ ಬೆಳಗೆರೆಗೆ ಡಿಸೆಂಬರ್ 23ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ.
ಸುಪಾರಿ ಕೇಸಿಗೆ ಸಂಬಂಧಿಸಿದಂತೆ ರವಿ ಬೆಳಗೆರೆ ಅವರು ಕಳೆದ ನಾಲ್ಕು ದಿನಗಳ ಸಿ.ಸಿ.ಬಿ. ಅಧಿಕಾರಿಗಳ ವಶದಲ್ಲಿದ್ದರು. ರವಿ ಬೆಳಗೆರೆ ಅವರನ್ನು ಸೋಮವಾರದಂದು ಕೋರ್ಟಿಗೆ ಹಾಜರುಪಡಿಸಲಾಯಿತು. ಆದರೆ, ಹೆಚ್ಚಿನ ವಿಚಾರಣೆಗೆಗಾಗಿ ತಮ್ಮ ಕಸ್ಟಡಿಗೆ ನೀಡುವಂತೆ ಮನವಿ ಮಾಡಿಕೊಳ್ಳಲಿಲ್ಲ.
ಜಾಮೀನು ಅರ್ಜಿ ಸಲ್ಲಿಸಿಲ್ಲ: ಅನಾರೋಗ್ಯದ ಹಿನ್ನಲೆಯಲ್ಲಿ ರವಿ ಬೆಳಗೆರೆ ಅವರಿಗೆ ಮಧ್ಯಂತರ ಜಾಮೀನು ಮಂಜೂರು ಮಾಡುವಂತೆ ರವಿ ಬೆಳಗೆರೆ ಅವರ ವಕೀಲ ದಿವಾಕರ್ ಅವರು ಅರ್ಜಿ ಸಲ್ಲಿಸುವ ನಿರೀಕ್ಷೆಯಿತ್ತು. ಆದರೆ, ಜಾಮೀನು ಅರ್ಜಿಯನ್ನು ಬುಧವಾರ ಸಲ್ಲಿಸಲಾಗುವುದು ಎಂದರು.
'ರವಿ ಬೆಳಗೆರೆ ಪ್ರತಿದಿನ ಇಂಜೆಕ್ಷನ್ ತೆಗೆದುಕೊಳ್ಳಬೇಕು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಬೇಕು ಎಂದು 60 ಪುಟಗಳ ವೈದ್ಯಕೀಯ ವರದಿಯನ್ನು ಕೋರ್ಟ್ ಮುಂದೆ ದಾಖಲೆ ಮಾತ್ರ ಸಲ್ಲಿಸಲಾಗಿದ್ದು, ಪರಪ್ಪನ ಅಗ್ರಹಾರ ಜೈಲಿನಲ್ಲಿ ಸೂಕ್ತ ವೈದ್ಯಕೀಯ ವ್ಯವಸ್ಥೆ ಕಲ್ಪಿಸುವಂತೆ ಮಾತ್ರ ಕೋರಲಾಗಿದೆ ಎಂದು ವಕೀಲ ದಿವಾಕರ್ ಅವರು ಹೇಳಿದರು.
ರವಿ ಬೆಳಗೆರೆ ವಿರುದ್ಧ ಈಗಾಗಲೇ ಸುಪಾರಿ ಕೇಸಿಗೆ ಸಂಬಂಧಿಸಿದಂತೆ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ 1958ರ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಕೊಲೆ ಸಂಚು ಆರೋಪದಲ್ಲಿ ಈ ಐಪಿಎಸ್ ಸೆಕ್ಷನ್ 115 ನಂತೆ ಪ್ರಕರಣ ದಾಖಲಾಗಿದೆ.