ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ರೈಲು ನಿಲ್ದಾಣಕ್ಕೆ ನೆಮ್ಮದಿಯ ನಡೆ
ಬೆಂಗಳೂರು, ಫೆಬ್ರವರಿ 20 : ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಹೊರಬರುವ ಪ್ರಯಾಣಿಕರು ಇನ್ನುಮುಂದೆ ನೆಮ್ಮದಿಯಿಂದ ಕೆಎಸ್ ಆರ್ ಟಿಸಿ, ಬಿಎಂಟಿಸಿ ಹಾಗೂ ರೈಲು ನಿಲ್ದಾಣಕ್ಕೆ ನಡೆದುಕೊಂಡು ಹೋಗಬಹುದು.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಿಂದ ಬಸ್ ನಿಲ್ದಾಣಗಳು, ರೈಲು ನಿಲ್ದಾಣವನ್ನು ಸಂಪರ್ಕಿಸುವಂತೆ ನಿರ್ಮಿಸಿರುವ ಸಬ್ ವೇ ಮಂಗಳವಾರ ಉದ್ಘಾಟನೆಯಾಗಲಿದೆ. 9 ಅಡಿ ಅಗಲದ ಈ ಪ್ರತ್ಯೇಕ ಪಾದಚಾರಿ ಮಾರ್ಗದ ನಿರ್ಮಾಣ ಕೆಲ ತಿಂಗಳ ಹಿಂದೆಯಷ್ಟೇ ಆರಂಭವಾಗಿತ್ತು.
ಇಂದಿನಿಂದ ನಮ್ಮ ಮೆಟ್ರೋದ ಎರಡು ಬಾಗಿಲು ಮಹಿಳೆಯರಿಗಾಗಿ
ಒಟ್ಟು 70 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣವಾಗಿರುವ ಈ ಸಬ್ ವೇಯಲ್ಲಿ ಮಳೆ, ಬಿಸಿಲು ಇದ್ದರೂ ಆರಾಮವಾಗಿ ನಡೆಯಬಹುದು. ಪ್ರಯಾಣಿಕರು ಸರಾಗವಾಗಿ ನಡೆದು ಹೋಗುವಂತೆ ಛಾವಣಿ ಅಳವಡಿಸಲಾಗಿದೆ. ಬಿಎಂಆರ್ ಸಿ ಎಲ್ ನಿಂದ ನಿರ್ಮಾಣವಾದ ಈ ಸಬ್ ವೇ ಗೆ ಕೆಎಸ್ ಆರ್ ಟಿಸಿ ಭೂಮಿ ನೀಡಿದೆ.
ಮೆಜೆಸ್ಟಿಕ್ ನಿಲ್ದಾಣ ನಿರ್ಮಾಣವಾಗಿ ಮೂರು ವರ್ಷವಾಗುತ್ತಾ ಬಂದರೂ ಜನರು ರಸ್ತೆ ಬದಿಯಲ್ಲೇ ನಡೆದುಕೊಂಡು ಹೋಗಬೇಕಿತ್ತು.ಮೆಟ್ರೋದಿಂದ ಹೊರಬಂದ ಪ್ರಯಾಣಿಕರು ಸಂಚಾರ ದಟ್ಟಣೆಯಿಂದ ಕೂಡಿರುವ ಗುಬ್ಬಿ ತೋಟದಪ್ಪ ರಸ್ತೆಯಲ್ಲಿ ನಡೆದು ಬಸ್ ಹಾಗೂ ರೈಲು ನಿಲ್ದಾಣಕ್ಕೆ ತಲುಪುತ್ತಿದ್ದರು.
ಮಂಗಳವಾರ ಸಂಜೆ 5.30 ಕ್ಕೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಸಬ್ ವೇ ಉದ್ಘಾಟಿಸಲಿದ್ದಾರೆ. ಸಾರಿಗೆ ಸಚಿವ ಎಚ್.ಎಂ.ರೇವಣ್ಣ, ಸಂಸದ ಪಿ.ಸಿ. ಮೋಹನ್, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅತಿಥಿಗಳಾಗಿ ಆಗಮಿಸಲಿದ್ದಾರೆ.