ಸ್ಟೀಲ್ ಬ್ರಿಡ್ಜ್ ಸಭೆಯಲ್ಲಿ ನಡೆದಿದ್ದೇನು?ಓವರ್ ಟು ಸುರೇಶ್ ಕುಮಾರ್
ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ 'ಸ್ಟೀಲ್ ಬ್ರಿಡ್ಜ್' ಸಂಬಂಧ ಮಂಗಳವಾರ (ಅ 25) ಕರೆದಿದ್ದ ಸರ್ವಪಕ್ಷದ ಸಭೆ ಹಲವು ಹೈಡ್ರಾಮಾಗಳ ಮೂಲಕ ಮುಕ್ತಾಯಗೊಂಡಿದೆ.
ಬೆಂಗಳೂರು, ಅ 26: ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ 'ಸ್ಟೀಲ್ ಬ್ರಿಡ್ಜ್' ಸಂಬಂಧ ಮಂಗಳವಾರ (ಅ 25) ಕರೆದಿದ್ದ ಸರ್ವಪಕ್ಷದ ಸಭೆ ಹಲವು ಹೈಡ್ರಾಮಾಗಳ ಮೂಲಕ ಮುಕ್ತಾಯಗೊಂಡಿದೆ.
ಪರಸ್ಪರ ಆರೋಪ, ಪ್ರತ್ಯಾರೋಪದ ನಡುವೆ ನಗರದ ಮಹಾಲಕ್ಷ್ಮಿ ಲೇಔಟ್ ಶಾಸಕ ಕೆ ಗೋಪಾಲಯ್ಯ, ಸಚಿವ ಜಾರ್ಜ್ ವಿರುದ್ದ ಕಿಡಿಕಾರಿ ಸಖತ್ತಾಗಿ ಚಾರ್ಚ್ ಮಾಡಿದ ಘಟನೆ ನಡೆದಿದೆ. (ಉಕ್ಕಿನ ಸೇತುವೆಗೂ ಟೋಲ್)
ಸ್ಟೀಲ್ ಬ್ರಿಡ್ಜ್ (ಉಕ್ಕಿನ ಸೇತುವೆ) ನಿರ್ಮಾಣ ಬೆಂಗಳೂರು ನಗರಕ್ಕೆ ಯಾಕೆ ಬೇಕು ಎಂದು ವಿಪಕ್ಷಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಸಭೆ ವಿಫಲವಾಗಿದೆ. ಈ ನಡುವೆ ಸಚಿವ ಜಾರ್ಜ್, ಪಿಪಿಟಿ ಮೂಲಕ ಮಾಧ್ಯಮದವರಿಗೆ ಸ್ಟೀಲ್ ಬ್ರಿಡ್ಜ್ ರೂಪುರೇಷೆಯನ್ನು ವಿವರಿಸಿದ್ದಾರೆ.
ನಗರದ ಜನಪ್ರತಿನಿಧಿಗಳು ಭಾಗವಹಿಸಿದ್ದ ಈ ಸಭೆಯಲ್ಲಿ ಜಾರ್ಜ್ ನೀಡುತ್ತಿದ್ದ ಉತ್ತರ ವಿಶ್ವಾಸಕ್ಕೆ ಯೋಗ್ಯವಲ್ಲ ಎಂದು ಬಿಜೆಪಿ ಸದಸ್ಯರು 'ದುರಂಹಕಾರಿ ಸರಕಾರಕ್ಕೆ ಧಿಕ್ಕಾರ.. ಧಿಕ್ಕಾರ' ಘೋಷಣೆ ಕೂಗುತ್ತಾ ಸಭೆಯಿಂದ ಹೊರನಡೆದಿದ್ದಾರೆ.
ಸಭೆ ಬಹಿಷ್ಕರಿಸಿ ಹೊರಬಂದ ಬಿಜೆಪಿ ಮುಖಂಡ ಸುರೇಶ್ ಕುಮಾರ್, ತಮ್ಮ ಫೇಸ್ ಬುಕ್ ಟೈಂಲೈನಿನಲ್ಲಿ ಸಭೆಯಲ್ಲಿ ನಡೆದಿದ್ದೇನೆಂದು ಬರೆದುಕೊಂಡಿದ್ದಾರೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೇವೆ. ಶಾಸಕ ಗೋಪಾಲಯ್ಯ ರೌದ್ರಾವತಾರ, ಮುಂದೆ ಓದಿ..
ಶಾಸಕ ಗೋಪಾಲಯ್ಯ ರೌದ್ರಾವತಾರ
ಸ್ಟೀಲ್ ಬ್ರಿಡ್ಜ್ ಯಾವನಿಗೆ ಬೇಕು? ಮೊದಲು ಬಿಡಿಎ ಸಮಸ್ಯೆ ಸರಿ ಮಾಡಿ. ಮೊದ್ಲು ಕೊಡಬೇಕಾದ ಪರಿಹಾರ ಕೊಡ್ರೀ.. ಮನುಷ್ಯತ್ವಕ್ಕೆ ಬೆಲೆ ಇಲ್ವೇನ್ರೀ ನಿಮಗೆ? ಆ ಹೆಂಗಸು ಏನಾದ್ರೂ ಸಾವನ್ನಪ್ಪಿದರೆ ( ಬಿಡಿಎ ಪರಿಹಾರ ವಿಳಂಬದಿಂದ ಬೇಸತ್ತು ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ ಮಂಗಳಾ) ನಾನ್ ಸುಮ್ಮಿನಿರಲ್ಲಾ. ಆ ರಾಜಕುಮಾರ್ ಖತ್ರಿ (ಬಿಡಿಎ ಆಯುಕ್ತ) ಇದಕ್ಕೆ ಹೊಣೆಹೊರಬೇಕಾಗುತ್ತೆ - ಮಹಾಲಕ್ಷ್ಮಿ ಲೇಔಟ್ ಶಾಸಕ ಗೋಪಾಲಯ್ಯ.
ಸಚಿವ ದಿನೇಶ್ ಗುಂಡೂರಾವ್
ಬಿಜೆಪಿ ಎಲ್ಲಾ ವಿಚಾರದಲ್ಲಿ ರಾಜಕೀಯ ಮಾಡುತ್ತೆ. ಯೋಜನೆ ಬೇಡ ಎನ್ನುವ ಬಿಜೆಪಿ ಮುಖಂಡರಿಗೆ ಯೋಜನೆ ಯಾಕೆ ಬೇಡ ಎನ್ನುವುದಕ್ಕೆ ಉತ್ತರವಿಲ್ಲ. ರಾಜೀವ್ ಚಂದ್ರಶೇಖರ್ ಅವರನ್ನು ತೃಪ್ತಿ ಪಡಿಸಲು ಬಿಜೆಪಿ ಈ ಪ್ರಹಸನ ನಡೆಸುತ್ತಿದೆ. ಇಷ್ಟು ದಿನ ಇಲ್ಲದ ರಾಜೀವ್ ಚಂದ್ರಶೇಖರ್ ಈಗ ಎಲ್ಲಿಂದ ಬಂದರು - ದಿನೇಶ್ ಗುಂಡೂರಾವ್.
ಫೇಸ್ ಬುಕ್ ನಲ್ಲಿ ಸುರೇಶ್ ಕುಮಾರ್ ಹೇಳಿದ್ದು
ಇಂದು ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ ಜೆ ಜಾರ್ಜ್ ರವರು ಬೆಂಗಳೂರಿನ ಶಾಸಕ-ಸಂಸದರ ಸಭೆಯನ್ನು, ವಿವಾದಕ್ಕೆ ಈಡಾಗಿರುವ ಸ್ಟೀಲ್ ಫ್ಲೈ ಓವರ್ ಕುರಿತು ಚರ್ಚಿಸಲು ಕರೆದಿದ್ದರು. ಆದರೆ ಇದೊಂದು ಪ್ರಹಸನವಾಗಿ ಪರಿವರ್ತನೆಯಾಯಿತು. ಸ್ಟೀಲ್ ಫ್ಲೈ ಓವರ್ ಗೆ ಸಕಾರಣವಾಗಿ ವಿರೋಧಿಸುವವರಿಗೆ ಕ್ಷಣ-ಕ್ಷಣವೂ ಅಡ್ಡ ಹಾಕುತ್ತಿದ್ದರು.
ರಾಜೀವ್ ಚಂದ್ರಶೇಖರ್
ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ರವರು ಪ್ರಮುಖ ಅಂಶಗಳನ್ನು ಮಂಡಿಸುತ್ತಿದ್ದಾಗ "ನಿಮ್ಮ ಸಂಸ್ಥೆ ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಿದೆ. ನೀವು ಇಲ್ಲಿ ಮಾತನಾಡಬಾರದು" ಎಂದು ಜಾರ್ಜ್ ಸಾಹೇಬರು ಅಡ್ಡ ಹಾಕಿದರು. ಆಗ ನಾವೆಲ್ಲಾ, ಹಾಗಿದ್ದರೆ ಅವರನ್ನು ಈ ಸಭೆಗೆ ಏಕೆ ಕರೆದಿದ್ದೀರಿ? ಎಂದು ಕೇಳಿದಾಗ ಸಾಹೇಬರು ನಿರುತ್ತರರಾದರು.
ಪಿ ಸಿ ಮೋಹನ್
ಲೋಕಸಭಾ ಸದಸ್ಯ ಪಿ ಸಿ ಮೋಹನ್ ರವರು ವಿಮಾನ ನಿಲ್ದಾಣಕ್ಕೆ ಇರುವ ಪರ್ಯಾಯ ಮಾರ್ಗ ಕುರಿತು ಬಹಳ ಚೆನ್ನಾಗಿ ವಿಷಯ ತಿಳಿಸಿದರು. ಆದರೆ ಪ್ರತಿ ಮಾತಿಗೂ ಜಾರ್ಜ್ ರವರು ಪ್ರವೇಶಿಸಿ ಅಡ್ಡ ಹಾಕುವುದು ಸರ್ವೇ ಸಾಮಾನ್ಯವಾಗಿಬಿಟ್ಟಿತ್ತು.
ಸುರೇಶ್ ಕುಮಾರ್
ನನ್ನ ಸರದಿ ಬಂದಾಗ ಸ್ಟೀಲ್ ಫ್ಲೈ ಓವರ್ ಬದಲಿಗೆ ಬಳ್ಳಾರಿ ರಸ್ತೆಯಲ್ಲಿ ನಾವು ಮಾಡಬಹುದಾದ ಪರ್ಯಾಯ ಪರಿಹಾರ ಕ್ರಮಗಳ ಬಗ್ಗೆ ಪ್ರಸ್ತಾಪಿಸುತ್ತಾ, ವಿಪರೀತ ವಾಹನ ಬಾಹುಳ್ಯ ಎದುರಿಸುತ್ತಿರುವ 'ವಿಂಡ್ಸರ್ ಮ್ಯಾನರ್ ಜಂಕ್ಷನ್' ಹಾಗೂ "ಕಾವೇರಿ ಜಂಕ್ಷನ್' ಗಳಲ್ಲಿ ಸಣ್ಣ ಫ್ಲೈ ಓವರ್ ಗಳನ್ನು ನಿರ್ಮಿಸಿದರೆ ಬಳ್ಳಾರಿ ರಸ್ತೆಯ ಬಹಳಷ್ಟು ಸಮಸ್ಯೆ ನಿವಾರಣೆ ಆಗುತ್ತದೆ ಎಂದು ನನ್ನ ಅನಿಸಿಕೆ ಎಂದು ಹೇಳುತ್ತಿದ್ದಂತೆಯೇ ಸಿಟ್ಟಿಗೆದ್ದ ಸಾಹೇಬರು ಮ್ಯಾಜಿಕ್ ಬಾಕ್ಸ್ ಎಂದು ಜೋರಾಗಿ ಕೂಗಿದರು.
ನಮ್ಮ ತಾಳ್ಮೆಗೂ ಮಿತಿಯಿದೆ
ಜಾರ್ಜ್ ರವರ ಎಡಬಿಡದ ಈ ವರ್ತನೆಯಿಂದ ನಮ್ಮ ತಾಳ್ಮೆಯೂ ಕಟ್ಟೆ ಒಡೆಯಿತು. ಭಾರಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಅವರು ನಮ್ಮ ಅನಿಸಿಕೆಗಳನ್ನೇ ಕೇಳಲು ತಯಾರಿಲ್ಲದ ಕಾರಣ ಅನಿವಾರ್ಯವಾಗಿ ಸಭೆಯಿಂದ ಹೊರಗೆ ಬರಬೇಕಾಯಿತು. ಬಿಜೆಪಿಯ ಎಲ್ಲಾ ಶಾಸಕರು ಇಂದಿನ ಸಭೆಯಲ್ಲಿ ಪಾಲ್ಗೊಂಡಿದ್ದೆವು. ಮೊದಲೇ ಒಂದು ಮಾತು ಸ್ಪಷ್ಟಗೊಳಿಸಿದೆವು. " ನಾವ್ಯಾರೂ ನಗರದ ಅಭಿವೃದ್ಧಿ ಕಾರ್ಯಗಳಿಗೆ ವಿರುದ್ಧವಿಲ್ಲ. ಆದರೆ ಈ ಫ್ಲೈ ಓವರ್ ಬಗ್ಗೆ ಸಹಜವಾಗಿ ಎದ್ದಿರುವ ಸಂಗತಿಗಳನ್ನು ಇಲ್ಲಿ ತಿಳಿಸುತ್ತಿದ್ದೇವೆ" ಎಂದು ಸ್ಪಷ್ಟ ಪಡಿಸಿದ್ದೆವು.
ಬ್ಯಾಡ ಎಂದರೂ ಹೋಗುತ್ತೇನೆ. ಈಗ ಏನ್ಮಾಡಲಿ ಹೇಳು
ಒಟ್ಟಿನಲ್ಲಿ ಇಂದಿನ ಸಭೆ ಹಿಂದೆ ರಾಜ್ಯದ ನೀರಾವರಿ ಸಚಿವರಾಗಿದ್ದ ದಿ. ನಂಜೇಗೌಡರ ಪ್ರಸಿದ್ಧ ಮಾತನ್ನು ನೆನಪಿಸಿತು. ಹಳ್ಳಿಯಲ್ಲಿ ಒಬ್ಬ ತನ್ನಕ್ಕನಿಗೆ ಹೇಳಿದನಂತೆ " ಅಕ್ಕಾ, ನಾನು ಜಾತ್ರೆಗೆ ಹೋಗಬೇಕು ಎಂದು ಈಗಾಗಲೇ ನಿಶ್ಚಯಿಸಿದ್ದೇನೆ. ನೀನು ಹೋಗು ಎಂದರೂ ಹೋಗುತ್ತೇನೆ, ಬ್ಯಾಡ ಎಂದರೂ ಹೋಗುತ್ತೇನೆ. ಈಗ ಏನ್ಮಾಡಲಿ ಹೇಳು". ಹಾಗೆಯೇ ಸರಕಾರ ಶತಾಯಗತಾಯ ಸ್ಟೀಲ್ ಫ್ಲೈ ಓವರನ್ನು ನಿರ್ಮಿಸಿಯೇ ತೀರುತ್ತೇನೆ. ಈಗ ಏನು ಮಾಡಲಿ ಎಂದು ಕೇಳುವುದಕ್ಕೆ ನಮ್ಮೀ ಸಭೆ ಕರೆದಂತಿತ್ತು.