ಸ್ಟೀಲ್ ಫ್ಲೈಓವರ್ ಬೇಡ ಅನ್ನುವವರಿಗೆ ಹಿನ್ನಡೆ, ಮುಂದೇನು?
ಸಿದ್ದರಾಮಯ್ಯ ಅವರು 'ಡೋಂಟ್ ಕೇರ್' ಅಟಿಟ್ಯೂಡ್ ನಾಗರಿಕರನ್ನು ಮತ್ತಷ್ಟು ಕೆರಳಿಸಿದೆ. 'ನೀವು ಸೇರಾದರೆ, ನಾವು ಸವ್ವಾಸೇರು' ಎಂದು ಸಿಡಿದೆದ್ದಿರುವ ಸ್ಟೀಲ್ ಫ್ಲೈಓವರ್ ವಿರೋಧಿ ನಾಗರಿಕರು ಮುಂದಿನ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ.
ಬೆಂಗಳೂರಿನ ಹಸಿರು ಸೌಂದರ್ಯವನ್ನು ಹಾಳುಗೆಡವುವ, ಜನರ ಹಣವನ್ನು ದುಂದು ಮಾಡುವ 1791 ಕೋಟಿ ರು. ವೆಚ್ಚದ ಸ್ಟೀಲ್ ಫ್ಲೈಓವರ್ ಬೇಡವೇಬೇಡ ಎಂದು ಬೆಂಗಳೂರಿನ ನಾಗರಿಕರು ಬೀದಿಗಿಳಿದಿದ್ದರೆ, ನೀವೇನೇ ಮಾಡಿ ಮೇಲ್ಸೇತುವೆಯನ್ನು ನಿರ್ಮಿಸಿಯೇ ತೀರುತ್ತೇವೆ, 'ಐ ಡೋಂಟ್ ಕೇರ್' ಎಂದು ಸಿದ್ದರಾಮಯ್ಯ ನಾಗರಿಕರಿಗೆ ಸವಾಲು ಹಾಕಿದ್ದಾರೆ.
ಬಸವೇಶ್ವರ ವೃತ್ತದಿಂದ ಹೆಬ್ಬಾಳ ಫ್ಲೈಓವರ್ ವರೆಗೆ ನಿರ್ಮಾಣವಾಗಲಿರುವ 'ಬಿಳಿಆನೆ' ಸ್ಟೀಲ್ ಫ್ಲೈಓವರ್ ವಿರೋಧಿಸುತ್ತಿರುವ ನಾಗರಿಕರಿಗೆ ಮತ್ತು ಸಿದ್ದರಾಮಯ್ಯ ಸರಕಾರಕ್ಕೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಈ ಹೋರಾಟದಲ್ಲಿ ಯಾರು ಗೆಲ್ಲುತ್ತಾರೆ, ಯಾರಿಗೆ ಸೋಲಾಗುತ್ತದೆ ಎಂಬುದು ಕಾಲವೇ ನಿರ್ಣಯಿಸಲಿದೆ.
ಸಿದ್ದರಾಮಯ್ಯ ಅವರು 'ಡೋಂಟ್ ಕೇರ್' ಅಟಿಟ್ಯೂಡ್ ನಾಗರಿಕರನ್ನು ಮತ್ತಷ್ಟು ಕೆರಳಿಸಿದೆ. 'ನೀವು ಸೇರಾದರೆ, ನಾವು ಸವ್ವಾಸೇರು' ಎಂದು ಸಿಡಿದೆದ್ದಿರುವ ಸ್ಟೀಲ್ ಫ್ಲೈಓವರ್ ವಿರೋಧಿ ಬೆಂಗಳೂರಿನ ನಾಗರಿಕರು ಮುಂದಿನ ಹೋರಾಟದ ರೂಪುರೇಷೆಯನ್ನು ಸಿದ್ಧಪಡಿಸಿದ್ದಾರೆ.
'ಸಿಟಿಜನ್ಸ್ ಅಗೆನ್ಸ್ಟ್ ಸ್ಟೀಲ್ ಫ್ಲೈಓವರ್' ಎಂಬ ಹೆಸರಿನಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಪ್ರಾರಂಭವಾದ ಪುಟ್ಟ ಸಂಘಟನೆ ಈಗ ವಿರಾಟ್ ಸ್ವರೂಪವನ್ನು ಪಡೆಯುತ್ತಿದೆ. ಭಾನುವಾರ ಬಸವೇಶ್ವರ ವೃತ್ತ, ಬಿಡಿಎ, ಕಾವೇರಿ ಸರ್ಕಲ್ ಮತ್ತು ಮೇಖ್ರಿ ವೃತ್ತದಲ್ಲಿ ಆಯೋಜಿಸಲಾಗಿದ್ದ ಪ್ರತಿಭಟನೆಯಲ್ಲಿ 8 ಸಾವಿರಕ್ಕೂ ಹೆಚ್ಚು ಜನರು ಮಾನವ ಸರಪಳಿ ನಿರ್ಮಿಸಿ, ಇಂಗಿತವೇನೆಂಬುದನ್ನು ಅಭಿವ್ಯಕ್ತಪಡಿಸಿದ್ದಾರೆ.
ಸಿದ್ದರಾಮಯ್ಯನವರು ಅಧಿಕೃತವಾಗಿ ತಮ್ಮ ಯೋಜನೆಯ ಪರ 219 ಜನರಿದ್ದಾರೆ ಎಂದು ಹೇಳಕೊಂಡು ತಮ್ಮ ಹಟಮಾರಿತನವನ್ನು ಸಮರ್ಥಿಸಿಕೊಂಡಿದ್ದಾರೆ. ಭಾನುವಾರ ಜಮಾವಣೆಗೊಂಡಿದ್ದ 8,000 ನಾಗರಿಕರು ಅವರ ಲೆಕ್ಕಕ್ಕಿಲ್ಲದಿರುವುದು ನಿಜಕ್ಕೂ ವಿಷಾದದ ಸಂಗತಿ ಎಂದು ಪ್ರತಿಭಟನಾಕಾರರು ದೂಷಿಸುತ್ತಿದ್ದಾರೆ. ಪ್ರತಿಭಟನಾಕಾರರ ಮುಂದಿನ ಹೆಜ್ಜೆಗಳು ಮುಂದಿನಂತಿವೆ.
ಬೃಹತ್ ಮೆರವಣಿಗೆ
ಮಾನವ ಸರಪಣಿಯ 8,000 ನಾಗರಿಕರು ಹಾಗೂ ಯೋಜನೆಯನ್ನು ವಿರೋಧಿಸುವ 30,000 ಸಹಿಗಳು ಯಾವ ಲೆಕ್ಕಕ್ಕೂ ಇಲ್ಲ ಅಂದಮೇಲೆ ಮುಖ್ಯಮಂತ್ರಿಗಳ ಗಣನೆಗೆ ಯೋಗ್ಯವಾದ ಮೆರವಣಿಗೆಯನ್ನು ಮಾಡಿ ನಗರದ ಜನರ ಭಾವನೆಯನ್ನು ಅವರಿಗೆ ಮುಟ್ಟಿಸಲು ಪ್ರಯತ್ನಿಸುತ್ತೇವೆ.
ತಜ್ಞರೊಂದಿಗೆ ಚರ್ಚೆ
ಬೆಳಗ್ಗೆ 11, ಭಾನುವಾರ ರೋಟರಿ ಸಭಾಂಗಣ, ಲಾವೆಲ್ ರಸ್ತೆಯಲ್ಲಿ ಮೇಲ್ಸೇತುವೆ ಯೋಜನೆಯ ವಿನ್ಯಾಸ, ಪ್ರಕ್ರಿಯೆ, ಡಿ.ಪಿ.ಆರ್ ತಯಾರಿಸುವುದರಲ್ಲಿ ಆಗಿರುವ ಲೋಪ ದೋಷಗಳ ಕುರಿತು ತಜ್ಞರು ಮಾತನಾಡುತ್ತಾರೆ. ಈ ಸಭೆಗೆ ನೋಂದಾಯಿಸಿಕೊಳ್ಳುವವರು [email protected]ಗೆ 'Register for consultation' ಅಂತ ವಿಷಯ ಬರೆದು ನೋಂದಾಯಿಸಿಕೊಳ್ಳಬಹುದು.
ಮತ ಚಲಾವಣೆಯಿಂದ ಜನಾಭಿಪ್ರಾಯ ಸಂಗ್ರಹ
ನಗರದ ಹಲವೆಡೆ ಮುಚ್ಚಿದ ಮತ ಪೆಟ್ಟಿಗೆಗಳಲ್ಲಿ ಮೇಲ್ಸೇತುವೆ 'ಬೇಡ' ಅಥವ 'ಬೇಕು' ಎಂದು ತಮ್ಮ ಹೆಸರು, ಉದ್ಯೋಗ, ದೂರವಾಣಿ ಸಂಖ್ಯೆಯೊಂದಿಗೆ ಚೀಟಿಯ ಮೇಲೆ ಬರೆದು ಹಾಕಬಹುದು. ಭಾನುವಾರ (ಸ್ಥಳಗಳು ನಿಗದಿಯಾದ ಬಳಿಕ ತಿಳಿಸುವೆವು) ನಂತರ ಮುಚ್ಚಿದ ಮತಪೆಟ್ಟಿಗೆಗಳನ್ನು ರೋಟರಿ ಸಭಾಂಗಣಕ್ಕೆ ತಂದು ಹಿರಿಯರ ಸಮಕ್ಷಮದಲ್ಲಿ ತರೆದು ಮತ ಏಣಿಕೆ ಮಾಡಿ ಪಲಿತಾಂಶ ಘೋಷಿಸುವುದು.
ಸ್ಯಾಂಕಿ - ಬಳ್ಳಾರಿ ರಸ್ತೆಗಳ ಮರಗಾವಲು
ರಾತ್ರಿಯ ವೇಳೆ ನಗರ ನಿದ್ರಿಸುವಾಗ ಕಂಟ್ರಾಕ್ಟರುಗಳು ಸ್ಯಾಂಕಿ - ಬಳ್ಳಾರಿ ರಸ್ತೆಯ ಮರಗಳ ಮಾರಣಹೋಮ ಮಾಡಬಹುದು. ಆದ್ದರಿಂದ ಸ್ವಯಂಸೇವಕರು ಇಡೀ ರಾತ್ರಿ ಕಾವಲು ನಿಲ್ಲುತ್ತಾರೆ. ಇದು ನವೆಂಬರ್ 1 ಕನ್ನಡ ರಾಜ್ಯೋತ್ಸವ ದಿನದಿಂದ ಆರಂಭವಾಗಲಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಮನವಿ
ಪರಿಸರ ಮತ್ತು ಬೆಂಗಳೂರಿನ ಬಗ್ಗೆ ಕಾಳಜಿಯುಳ್ಳವರು ನೂರು ರು. ನೀಡಿ, ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ಸಲ್ಲಿಸಬೇಕಾಗಿರುವ ಮನವಿಗೆ ಸಹಿ ಮಾಡಬಹುದು. ಸಹಿ ಮಾಡಿದವರು [email protected] ವಿಳಾಸಕ್ಕೆ 'NGT Petition' ಅಂತ ಸಬ್ಜೆಕ್ಟ್ ನಲ್ಲಿ ನಮೂದಿಸಿ ಈಮೇಲ್ ಕಳಿಸಬೇಕು.
ಸೆಲ್ಫಿ ವಿಡಿಯೋ ಮಾಡಿ ಕಳಿಸಿ
'ನನಗೆ ಸ್ಟೀಲ್ ಫ್ಲೈಓವರ್ ಬೇಡ ಯಾಕೆ' ಎಂದು ನಿಮ್ನಿಮ್ಮ 20-ಸೆಕೆಂಡಿನ ಸೆಲ್ಫಿ ವಿಡಿಯೋ ಮಾಡಿ ಈ ಪುಟದಲ್ಲಿ ಪೋಸ್ಟ್ ಮಾಡಿರಿ.