ಸ್ಟೇಫಿಟ್ ವಾಕಾಥಾನ್ ನಲ್ಲಿ ಸಚಿವ ರಾಮಲಿಂಗಾರೆಡ್ಡಿ
ಬೆಂಗಳೂರು, ಆಗಸ್ಟ್ 15: ನಗರದ ಕೆಲವು ಭಾಗಗಳಲ್ಲಿರುವ ಉದ್ಯಾನವನಗಳು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿವೆ. ನಗರದ ಜನತೆಯ ಆರೋಗ್ಯದ ದೃಷ್ಟಿಯಿಂದ ಬಹಳಷ್ಟು ಮಹತ್ವ ಪಡೆದಿರುವ ಇವುಗಳ ಅಭಿವೃದ್ದಿಯತ್ತ ಬಿಬಿಎಂಪಿ ಹಾಗೂ ಸರಕಾರ ಹೆಚ್ಚಿನ ಗಮನ ನೀಡುತ್ತಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದ ಕೋರಮಂಗಲದಲ್ಲಿ ಸ್ಟೇಫಿಟ್ ವಾಕಥಾನ್ ನ ಎರಡನೇ ಆವೃತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿನಿತ್ಯ ಕೆಲವು ಗಂಟೆಗಳ ನಡಿಗೆ ಆರೋಗ್ಯಕರ ಜೀವನಕ್ಕೆ ಸಹಕಾರಿ. ಯುವಕರು ಅಲ್ಲದೆ ವಯಸ್ಸಾದವರೂ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ನಡಿಗೆಯನ್ನು ಒಂದು ಭಾಗವಾಗಿ ಮಾಡಿಕೊಳ್ಳುವುದು ಅತ್ಯವಶ್ಯ ಎಂದರು.
ನಗರದಲ್ಲಿ ಇತ್ತೀಚಿಗೆ ಬೆಳವಣಿಗೆಯಾಗಿರುವ ಲೇಔಟ್ ಗಳಲ್ಲಿ ಉದ್ಯಾನವನಗಳಂತಹ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಈ ಬಗ್ಗೆ ಸರಕಾರ ಹಾಗೂ ಬಿಬಿಎಂಪಿ ಗಮನ ಹರಿಸಿದ್ದು, ಪಾರ್ಕ್ಗಳಲ್ಲಿ ಅಗತ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸುವತ್ತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಬೆಂಗಳೂರು ನಗರ ಉದ್ಯಾನಗಳ ನಗರ ಎಂಬ ಹೆಸರನ್ನು ಮತ್ತೊಮ್ಮೆ ಸಾಬೀತು ಪಡಿಸುವತ್ತ ಸರಕಾರ ಅಗತ್ಯ ಕ್ರಮಕೈಗೊಳ್ಳುತ್ತಿದೆ ಎಂದರು.
ಬಿಬಿಎಂಪಿ ಮೇಯರ್ ಮಂಜುನಾಥ್ ರೆಡ್ಡಿ ಮಾತನಾಡಿ, ಸ್ಟೇಫಿಟ್ ನಂತಹ ಸಂಸ್ಥೆಗಳು ಇಂತಹ ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಾಗರೀಕರಲ್ಲಿ ನಡಿಗೆಯ ಹಲವು ಉಪಯೋಗಗಳ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ. ನಡಿಗೆಯಿಂದ ಬಿಪಿ, ಸಕ್ಕರೆ ಕಾಯಿಲೆಯಂತಹ ಹಲವಾರು ರೋಗಗಳನ್ನು ದೂರವಿಡಬಹುದು. ಅಲ್ಲದೆ, ಇಂತಹ ಕಾಯಿಲೆಗಳನ್ನು ಸರಿಯಾಗಿ ನಿರ್ವಹಣೆ ಮಾಡಬಹುದಾಗಿದೆ. ಆದ್ದರಿಂದ ಜನರು ತಮ್ಮ ಜೀವನದಲ್ಲಿ ಆರೋಗ್ಯಕರ ಚಟುವಟಿಕೆಯನ್ನು ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.
ಈ ವಾಕಥಾನ್ ಬಗ್ಗೆ ಮಾಹಿತಿ ನೀಡಿದ ಸ್ಟೇಫಿಟ್ ಸಿಇಒ ಗುರುಕುಲಂ ರಾಮಪ್ರಸಾದ್ ರೆಡ್ಡಿ ಅವರು, 'ಹೆಚ್ಚು ಹೆಚ್ಚು ಜನರು ಆರೋಗ್ಯವಂತರಾಗಿ ದೈಹಿಕ ಮತ್ತು ಮಾನಸಿಕವಾಗಿ ಸಮರ್ಥಜೀವನ ಸಾಗಿಸುವುದನ್ನು ನಾವು ನೋಡಬೇಕು. ಉತ್ತಮ ಆರೋಗ್ಯ ನಿರ್ಮಾಣಕ್ಕೆ ಮೊದಲ ಹೆಜ್ಜೆಯೇ ವಾಕಿಂಗ್. ವಾಕಿಂಗ್ ಪ್ರತಿದಿನದ ಅಂಗವಾಗಿರಬೇಕು.
ಈ ನಿಟ್ಟಿನಲ್ಲಿ ನಾವು ಈ ರೀತಿಯ ವಾಕಥಾನ್ನಂತಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ವಾಕಿಂಗ್ ಅನ್ನು ಉತ್ತೇಜಿಸಿ ಜನರಲ್ಲಿ ಉತ್ತಮ ಆರೋಗ್ಯ ಸ್ಥಾಪನೆ ಮಾಡಲು ಪ್ರಯತ್ನಿಸುತ್ತಿದ್ದೇವೆ. ಈ ಮೂಲಕ ಆರೋಗ್ಯವಂತ ದೇಶ ನಿರ್ಮಾಣಕ್ಕೆ ಕಟಿಬದ್ಧತೆ ತೋರುತ್ತಿದ್ದೇವೆ'' ಎಂದು ತಿಳಿಸಿದರು.
ಬೆಂಗಳೂರು ವಾರ್ಡ್ ನಂ 151 ರ ಬಿಬಿಎಂಪಿ ಕಾಪೋರೇಟರ್ ಎಂ. ಚಂದ್ರಪ್ಪ, ಕಾಂಗ್ರೆಸ್ ನಗರ ಜಿಲ್ಲೆಯ ಉಪಾಧ್ಯಕ್ಷ ಎನ್ ರವೀಂದ್ರ, ಸ್ಟೇಫೀಟ್ ಸಿಎಂಡಿ ಗಣೇಶ್ ರೆಡ್ಡಿ ಸೇರಿದಂತೆ ನೂರಾರು ಸಾರ್ವಜನಿಕರು 5 ಕಿಲೋಮೀಟರ್ ವಾಕಥಾನ್ ಲ್ಲಿ ಪಾಲ್ಗೊಂಡಿದ್ದರು.