ಜನಾರ್ದನ ರೆಡ್ಡಿ ಪ್ರಕರಣದ ಎಫೆಕ್ಟ್: ಸಿಸಿಬಿಯ ಮೂವರು ಎಸಿಪಿಗಳ ಎತ್ತಂಗಡಿ
ಬೆಂಗಳೂರು, ನವೆಂಬರ್ 15: ಆಂಬಿಡೆಂಟ್ ಚಿಟ್ ಫಂಡ್ ಹಗರಣದಲ್ಲಿ ನ್ಯಾಗಾಂಗ ಬಂಧನಕ್ಕೊಳಗಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಜಾಮೀನು ದೊರೆತ ಬೆನ್ನಲ್ಲೇ ಆ ಪ್ರಕರಣ ತನಿಖಾ ತಂಡದಲ್ಲಿದ್ದ ಸಿಸಿಬಿಯ ಮೂವರು ಎಸಿಪಿಗಳನ್ನು ಬುಧವಾರ ದಿಢೀರ್ ಎತ್ತಂಗಡಿ ಮಾಡಲಾಗಿದೆ.
ರಾಜ್ಯ ಪೊಲೀಸ್ ಮಹಾನಿರ್ದೇಶಕರು ಸಿಸಿಬಿಯ ಎಸಿಪಿಗಳಾದ ಪಿ.ಟಿ, ಸುಬ್ರಹ್ಮಣ್ಯ, ಎಂಎಚ್, ಮಂಜುನಾಥ್ ಚೌಧರಿ ಹಾಗೂ ಮರಿಯಪ್ಪ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದ್ದಾರೆ.
ಆಂಬಿಡೆಂಟ್ ಪ್ರಕರಣ: ಜನಾರ್ದನ ರೆಡ್ಡಿಗೆ ಜಾಮೀನು ಮಂಜೂರು
ಅವರಿಂದ ತೆರವಾದ ಸ್ಥಾನಗಳಿಗೆ ಎಸಿಪಿಗಳಾಗಿ ಬಿ ಬಾಲರಾಜು, ಶೋಭಾ ಕಟಾವ್ಕರ್, ಬಿಆರ್ ವೇಣುಗೋಪಾಲ್ ಹಾಗೂ ಇನ್ಸ್ಪೆಕ್ಟರ್ ಗಳಾದ ಸಿ. ನಿರಂಜನ್ ಕುಮಾರ್ ಮತ್ತು ಕೆ ಅಂಜನ್ ಕುಮಾರ್ ಅವರನ್ನು ನೇಮಕಗೊಳಿಸಿ ರಾಜ್ಯ ಪೊಲೀಸ್ ಮಹಾನಿರ್ದೇಶಕಿ ನೀಲಮಣಿ ಎನ್ ರಾಜು ಆದೇಶಿಸಿದ್ದಾರೆ.
ಬೆಂಗಳೂರಲ್ಲಿ ಮೂರು ವರ್ಷಕ್ಕಿಂತ ಹೆಚ್ಚಿನ ಅವಧಿ ಕಾರ್ಯ ನಿರ್ವಹಿಸಿದ ಕಾರಣಕ್ಕೆ ಎಸಿಪಿಗಳ ವರ್ಗಾವಣೆಯಾಗಿದೆ. ಹೀಗಾಗಿ ಅಧಿಕಾರಿಗಳ ವರ್ಗಾವಣೆಗೂ ತನಿಖೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಅಲೋಕ್ ಕುಮಾರ್ರನ್ನು ಕಾಶ್ಮೀರಕ್ಕೆ ಕಳುಹಿಸಿ : ಜನಾರ್ದನ ರೆಡ್ಡಿ
ಆದರೆ ಈ ಪ್ರಕರಣವು ತನಿಖಾ ಹಂತದಲ್ಲಿರುವಾಗಲೇ ತನಿಖಾ ತಂಡದಲ್ಲಿನ ಅಧಿಕಾರಿಗಳ ಬದಲಾವಣೆಯೂ ಚರ್ಚೆಗೆ ಕಾರಣವಾಗಿದೆ.
ಮಂಜುನಾಥ್ ಚೌಧರಿ ಬಳ್ಳಾರಿಯ ರೆಡ್ಡಿ ಮನೆ ಮೇಲೆ ದಾಳಿ ಮಾಡಿದ್ದರು
ಎಸಿಪಿಗಳಾದ ಪಿಟಿ ಸುಬ್ರಹ್ಮಣ್ಯ, ಎಂಎಚ್ ಮಂಜುನಾಥ್ ಚೌಧರಿ ಹಾಗೂ ಮರಿಯಪ್ಪ ಅವರು ಮಾಜಿ ಸಚಿವ ಜನಾರ್ದನ ರೆಡ್ಡಿ ಬಂಧನ ಕಾರ್ಯಾಚರಣೆಗೆ ರಚಿಸಲಾಗಿದ್ದ ದಳಗಳ ನೇತೃತ್ವವಹಿಸಿದ್ದರು. ಈ ಪೈಕಿ ಮಂಜುನಾಥ್ ಚೌಧರಿ ಅವರು ಬಳ್ಳಾರಿಯಲ್ಲಿರುವ ಜನಾರ್ದನ ರೆಡ್ಡಿ ಮನೆ ಹಾಗೂ ಕಚೇರಿ ಮೇಲೆ ದಾಳಿ ನಡೆಸಿದ್ದರು.
ಅಲೋಕ್ ಕುಮಾರ್ ಕಾಶ್ಮೀರಕ್ಕೆ ಕಳುಹಿಸಿ ಎಂದಿದ್ದರು ರೆಡ್ಡಿ
ಮಾಜಿ ಸಚಿವ ಜನಾರ್ದನ ರೆಡ್ಡಿಯನ್ನು ಆಂಬಿಡೆಂಟ್ ಚಿಟ್ ಫಂಡ್ ವಂಚನೆ ಹಗರಣದಲ್ಲಿ ಮೂರು ದಿನಗಳ ಕಾಲ ನ್ಯಾಯಾಂಗ ಬಂಧನದಲ್ಲಿಡಲಾಗಿತ್ತು, ಜಾಮೀನು ಪಡೆದ ಬಳಿಕ ಅವರು ಮಾತನಾಡಿ ಸಿಸಿಬಿಯ ಹೆಚ್ಚುವರಿ ಪೊಲೀಸ್ ಆಯುಕ್ತ ಅಲೋಕ್ ಕುಮಾರ್ ಅವರನ್ನು ಕಾಶ್ಮೀರಕ್ಕೆ ಕಳುಹಿಸಿ ಎಂದು ವ್ಯಂಗ್ಯದ ಮಾತುಗಳನ್ನಾಡಿದ್ದರು.
ಜನಾರ್ದನ ರೆಡ್ಡಿಗೆ ಆಂಬಿಡೆಂಟ್ 20 ಕೋಟಿ ಕೊಟ್ಟಿದ್ದೇಕೆ? ಡೀಟೇಲ್ಸ್ ಇಲ್ಲಿದೆ
ಜನಾರ್ದನ ರೆಡ್ಡಿಗೆ ಜಾಮೀನು
ಆಂಬಿಡೆಂಟ್ ಪ್ರಕರಣದಲ್ಲಿ ಲಂಚ ಪಡೆದ ಹಾಗೂ ಅಧಿಕಾರಿಗಳಿಗೆ ಲಂಚ ನೀಡಿದ ಆರೋಪದಲ್ಲಿ ಸಿಸಿಬಿಯಿಂದ ಬಂಧಿಸಲಾಗಿದ್ದ ಮಾಜಿ ಸಚಿವ ಜನಾರ್ದನ ರೆಡ್ಡಿಗೆ ಇಂದು ಜಾಮೀನು ದೊರೆತಿದೆ. ಸಿಸಿಬಿ ಮುಂದೆ ನವೆಂಬರ್ 10 ರಂದು ವಿಚಾರಣೆಗೆ ಹಾಜರಾಗಿದ್ದ ಜನಾರ್ದನ ರೆಡ್ಡಿ ಅವರನ್ನು ಸಿಸಿಬಿಯು ಭಾನುವಾರ ನವೆಂಬರ್ 11 ರಂದು ಬಂಧಿಸಿತ್ತು. ಒಂದನೇ ಎಸಿಎಂಎಂ ನ್ಯಾಯಾಲಯವು ರೆಡ್ಡಿ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿತ್ತು.
ಏನಿದು ಆಂಬಿಡೆಂಟ್ ಚಿಟ್ ಫಂಡ್ ಹಗರಣ
ಆಂಬಿಡೆಂಟ್ ಮಾರ್ಕೆಟಿಂಗ್ ಪ್ರೈವೈಟ್ ಲಿಮಿಟೆಡ್ ಎಂಬ ಈ ಕಂಪನಿಯನ್ನು ಸೈಯದ್ ಅಹಮದ್ ಫರೀದ್ ನಡೆಸುತ್ತಿದ್ದ, ಈತ ಸಾರ್ವಜನಿಕರಿಗೆ 4 ತಿಂಗಳ ಅವಧಿಗೆ ಶೇ. 40 ನಿಂದ ಶೇ. 50 ಬಡ್ಡಿ ಹಣವನ್ನು ನೀಡುವುದಾಗಿ ನಂಬಿಸಿ 600 ಕೋಟಿಗೂ ಹೆಚ್ಚು ಹಣ ಹೂಡಿಕೆ ಮಾಡಿಸಿಕೊಂಡು ಸುಮಾರು 15 ಸಾವಿರಕ್ಕೂ ಹೆಚ್ಚು ಜನರಿಗೆ ವಂಚನೆ ಮಾಡಿದ್ದಾರೆ.. ಈತನಿಂದ ವಂಚನೆಗೊಳಗಾದವರ ಪೈಕಿ ಸರ್ಫರಾಜ್ ಆಲಂ ತಬರೇಜ್ ರವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಂತೆ ಮೊ.ಸಂ. 137/2018 ಕಲಂ 420, ಐಪಿಸಿ. ಕಲಂ 4, 5, 6, ಪ್ರೈಜ್ ಚಿಟ್ & ಮನಿ ಸರ್ಕೂಲೇಷನ್ ಸ್ಕೀಮ್ ಬ್ಯಾನಿಂಗ್ ಆಕ್ಟ್ 1978. ಪ್ರಕಾರ 2018ರ ಮೇ ತಿಂಗಳಲ್ಲಿ ಪ್ರಕರಣಗಳು ದಾಖಲಾಗಿದೆ.