ನಟ ಯಶ್ ಬೊಮ್ಮನಹಳ್ಳಿಯಲ್ಲಿ ಸತೀಶ್ ರೆಡ್ಡಿ ಪರ ಪ್ರಚಾರ
ಬೆಂಗಳೂರು, ಮೇ 5: ಕನ್ನಡ ಚಿತ್ರರಂಗದ ನಟ ಯಶ್ ಶುಕ್ರವಾರ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಪರವಾಗಿ ಬೊಮ್ಮನಹಳ್ಳಿಯಲ್ಲಿ ರೋಡ್ ಶೋ ನಡೆಸಿದರು.
ಮೇ 12 ರಂದು ಸಾರ್ವತ್ರಿಕ ಚುನಾವಣೆ ನಡೆಯುವ ಹಿನ್ನೆಲೆಯಲ್ಲಿ ಎಲ್ಲಾ ಪಕ್ಷದ ಅಭ್ಯರ್ಥಿಗಳು ಮತಯಾಚನೆಯಲ್ಲಿ ತೊಡಗಿದ್ದಾರೆ. ಜನರ ಮತವನ್ನು ಸೆಳೆಯುವ ನಿಟ್ಟಿನಲ್ಲಿ ಸಿನಿಮಾ ನಟ ನಟಿಯರನ್ನು ಕರೆತರಂದು ಪ್ರಚಾರ ಮಾಡಿಸುತ್ತಿದ್ದಾರೆ.
ಬೊಮ್ಮನಹಳ್ಳಿ ಮತಕ್ಷೇತ್ರದ ಪ್ರಮುಖ ಬೀದಿಗಳಲ್ಲಿ ಭರ್ಜರಿ ರೋಡ್ ಶೋ ನಡೆಸಿದ ಅವರು ಶಾಸಕ ಸತೀಶ್ ರೆಡ್ಡಿ ಪರ ಮತಯಾಚಿಸಿದರು. ರೋಡ್ ಶೋ ನಲ್ಲಿ ಮಾತನಾಡಿದ ಅವರು, ಸತೀಶ್ ರೆಡ್ಡಿಯವರು ನನ್ನ ಆತ್ಮೀಯ ಸ್ನೇಹಿತರು.
ಕಳೆದ 10 ವರ್ಷಗಳಿಂದ ಶಾಸಕರಾಗಿರುವ ಅವರು ಮಳೆ ಬಂದ ಸಂದರ್ಭದಲ್ಲಿ ತಾವೇ ಬೀದಿಗಿಳಿದು ರಕ್ಷಣಾ ಕಾರ್ಯಾಚರಣೆ ಕೈಗೊಂಡಿದ್ದನ್ನು ಗಮನಿಸಿದ್ದೇನೆ. ಅಲ್ಲದೆ, ಗಾರ್ಮೆಂಟ್ಸ್ ನೌಕರರ ಸಮಸ್ಯೆಗಳಿಗೆ ಸ್ಪಂದಿಸುವ ರೀತಿಯು ನನಗೆ ಗೊತ್ತಿದೆ.
ಈ ಎಲ್ಲಾ ಒಳ್ಳೆಯ ಗುಣಗಳನ್ನು ಹೊಂದಿರುವ ಇವರಂತಹ ಒಳ್ಳೆಯ ಜನಪ್ರತಿನಿಧಿಗಳನ್ನು ಬೆಂಬಲಿಸುವುದು ನನ್ನ ಕರ್ತವ್ಯ.ಯಾವುದೇ ಪಕ್ಷದ ಪರವಾಗಿಯೂ ನನ್ನ ಪ್ರಚಾರ ವಿರುವುದಿಲ್ಲ. ನಾನು ಕೇವಲ ನನ್ನ ಗೆಳೆಯರಾದ ಸತೀಶ್ ರೆಡ್ಡಿಯವರ ಪರವಾಗಿದ್ದೇನೆ ಎಂದರು.
ಗಾರ್ಮೆಂಟ್ ಫ್ಯಾಕ್ಟರಿಗಳಲ್ಲಿ ಪ್ರಚಾರ ನಡೆಸಿದ ಅವರು, ನ್ಯಾಯಯುತ ಜೀವನ ನಡೆಸುತ್ತಿರುವ ನೀವೇಲ್ಲಾ ಮಹಾನ್ ಆತ್ಮಗಳೂ. ಯಾವುದೇ ಕೆಲಸವೂ ಕೂಡಾ ಸಣ್ಣದಲ್ಲ. ದುಡಿದು ಮನೆ ಸಾಕುವ ನಿಮ್ಮ ಉತ್ಸಾಹಕ್ಕೆ ನನ್ನ ಸಲಾಂ ಎಂದರು.
ನಿಮ್ಮ ಯಾವುದೇ ಸಮಸ್ಯೆಗಳಿಗೂ ಕೂಡಾ ಶಾಸಕ ಸತೀಶ್ ರೆಡ್ಡಿ ಪ್ರತಿಕ್ರಿಯಿಸದಿದ್ದರೆ ನಾನು ಮುಂದೆ ನಿಂತು ಸಮಸ್ಯೆಗಳ ಪರಿಹಾರ ಮಾಡಿಸಿಕೊಡುವುದಾಗಿ ಭರವಸೆ ನೀಡಿದರು. ಅಲ್ಲದೆ, ಈ ಬಾರಿ ಚುನಾವಣೆಯಲ್ಲಿ ಗೆದ್ದು ಹ್ಯಾಟ್ರಿಕ್ ಬಾರಿಸಲಿದ್ದಾರೆ ಎಂದರು.
ಶಾಸಕ ಹಾಗೂ ಬೊಮ್ಮನಹಳ್ಳಿ ಬಿಜೆಪಿ ಅಭ್ಯರ್ಥಿ ಸತೀಶ್ ರೆಡ್ಡಿ ಮಾತನಾಡಿ, ಕಳೆದ 10 ವರ್ಷಗಳಿಂದ ಕ್ಷೇತ್ರದ ಅಭಿವೃದ್ದಿಗೆ ಸಾಕಷ್ಟು ಶ್ರಮಿಸಿದ್ದೇನೆ. ಅದರಲ್ಲೂ ಗಾರ್ಮೆಂಟ್ಸ್ ಫ್ಯಾಕ್ಟರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಹಿಳೆಯರ ಸಮಸ್ಯೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದೇನೆ.
ಪ್ರತಿಯೊಂದು ಗಾರ್ಮೆಂಟ್ ಫ್ಯಾಕ್ಟರಿಗೂ ಕೂಡಾ ನೂರಾರು ಬಾರಿ ಭೇಟಿ ನೀಡಿದ್ದೆನೆ. ಈ ಕ್ಷೇತ್ರದ ಅಭಿವೃದ್ದಿಗೆ ಶ್ರಮಿಸುವುದು ನನ್ನ ಆದ್ಯ ಕರ್ತವ್ಯವಾಗಿದೆ ಎಂದರು. ಈ ಬಾರಿ ಕೂಡಾ ನಿಮ್ಮ ಬೆಂಬಲದ ಅಗತ್ಯತೆ ಇದ್ದು ಇನ್ನೊಮ್ಮೆ ನಿಮ್ಮ ಸೇವೆಗೆ ಅನುವು ಮಾಡಿ ಕೊಡಿ ಎಂದು ಮನವಿ ಮಾಡಿದರು.
ಬೊಮ್ಮನಹಳ್ಳಿ ಮುಖ್ಯರಸ್ತೆಯಲ್ಲಿ ಪ್ರಾರಂಭವಾದ ಈ ರೋಡ್ ಶೋ ಬೊಮ್ಮನಹಳ್ಳಿಯ ಮುಖ್ಯರಸ್ತೆಯಲ್ಲಿ ಸಂಚರಿಸಿತು. ಅಲ್ಲದೆ ಹತ್ತಕ್ಕೂ ಹೆಚ್ಚು ಗಾರ್ಮೆಂಟ್ ಫ್ಯಾಕ್ಟರಿಗೆ ಭೇಟಿ ನೀಡಿದರು. ಈ ರೋಡ್ ಶೋ ನಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ ಮೋಹನ್ ರಾಜ್ ಸೇರಿದಂತೆ ಸಾವಿರಾರು ಜನ ಕಾರ್ಯಕರ್ತರು ಭಾಗವಹಿಸಿದ್ದರು.
ಈಗಾಗಲೇ ನಟ ಯಶ್ ಎರಡು ದಿನಗಳ ಹಿಂದೆ ಕೆಆರ್ ಕ್ಷೇತ್ರ ವ್ಯಾಪ್ತಿಯ ಅಗ್ರಹಾರ ವೃತ್ತದಲ್ಲಿ ರೋಡ್ ಶೋ ನಡೆಸುವ ಮೂಲಕ ಬಿಜೆಪಿ ಅಭ್ಯರ್ಥಿ ಎಸ್.ಎ. ರಾಮದಾಸ್ ಮರ ಮತ ಯಾಚನೆ ಮಾಡಿದರು.
ಇನ್ನು ಕೆಆರ್ ನಗರ ವ್ಯಾಪ್ತಿಯಲ್ಲಿ ಜೆಡಿಎಸ್ ಅಭ್ಯರ್ಥಿ ಸಾರಾ ಮಹೇಶ್ ಅವರ ಪರವಾಗಿ ರೋಡ್ ಶೋ ನಡೆಸಿದ್ದಾರೆ. ಹಾಸನದಲ್ಲಿ ಜೆಡಿಎಸ್ ಅಭ್ಯರ್ಥಿ ಎಚ್.ಎಸ್. ಪ್ರಕಾಶ್ ಅವರ ಪರ ರೋಡ್ ಶೋ ನಡೆಸಿದ್ದಾರೆ. ಮೇ 15ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ. ಬೊಮ್ಮನಹಳ್ಳಿಯಲ್ಲಿರುವ ಗಾರ್ಮೆಂಟ್ಸ್ ನೌಕಕರ ಬಳಿ ಚರ್ಚೆ ನಡೆಸಿದರು, ಅವರ ಕುಂದುಕೊರತೆಗಳನ್ನು ಆಲಿಸಿದರು.