ಬಿಎಂಟಿಸಿ ಬಸ್ಗೆ ನುಗ್ಗಿ ವ್ಯಕ್ತಿಗೆ ಚಾಕುವಿನಿಂದ ಇರಿದು ಕೊಲೆ
ಬೆಂಗಳೂರು, ಫೆಬ್ರವರಿ 21: ಚಲಿಸುತ್ತಿದ್ದ ಬಿಎಂಟಿಸಿ ಬಸ್ ನೊಳಗೆ ನುಗ್ಗಿ ವ್ಯಕ್ತಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಎಲೆಕ್ಟ್ರಾನಿಕ್ ಸಿಟಿಯ ಕೋನಪ್ಪನ ಅಗ್ರಹಾರದಲ್ಲಿ ಬುಧವಾರ ನಡೆದಿದೆ.
ಆನೇಕಲ್ ನಿಂದ ಬೆಂಗಳೂರು ಮಾರ್ಗವಾಗಿ ಬಿಎಂಟಿಸಿ ಬಸ್ ಒಂದು ಚಲಿಸುತ್ತಿತ್ತು. ಏಕಾಏಕಿ ಒಬ್ಬ ವ್ಯಕ್ತಿ ಓಡುತ್ತಾ ಬಂದು ಬಿಎಂಟಿಸಿ ಬಸ್ ಏರಿದ್ದಾನೆ ಅವನ ಹಿಂದೆಯೇ ಹಿಂಬಾಲಿಸಿಕೊಂಡು ಬಂದ ಮೂವರು ದುಷ್ಕರ್ಮಿಗಳು ಬಿಂಎಂಟಿಸಿ ಬಸ್ ಏರಿದ್ದಾರೆ. ನಂತರ ಮಾರಕಾಸ್ತ್ರಗಳಿಂದ ವ್ಯಕ್ತಿಯನ್ನು ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ.
ದುಷ್ಕರ್ಮಿಗಳು ಆಂಧ್ರ ಮೂಲದವರು ಎಂದು ತಿಳಿದುಬಂದಿದೆ. ಹಳೆ ದ್ವೇಷದ ಹಿನ್ನೆಲೆ ಕೃತ್ಯ ಎಸಗಿದ್ದಾರೆ ಎನ್ನಲಾಗಿದೆ. ವ್ಯಕ್ತಿಯ ಶವವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದೆ. ವ್ಯಕ್ತಿಯನ್ನು ಹತ್ಯೆ ಮಾಡಿದ ನಂತರ ಆತ ಸತ್ತಿರುವುದನ್ನು ಖಚಿತ ಪಡಿಸಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಬೆಂಗಳೂರು ಕ್ರೈಮ್ ಸಿಟಿ ಆಗುತ್ತಿರುವುದುಕ್ಕೆ ಮತ್ತೊಂದು ನಿದರ್ಶನ ಇಲ್ಲಿದೆ. ಬೆಂಗಳೂರಿನಲ್ಲಿ ಭದ್ರತೆ ಇಲ್ಲ ಎನ್ನುವುದಕ್ಕೆ ಈಗ ಮತ್ತೊಂದು ಕೊಲೆಯೇ ಸಾಕ್ಷಿಯಾಗಿದೆ.