ಕಳೆದ 59 ವರ್ಷಗಳಿಂದ ಇಲ್ಲಿ 'ಕಾಂಗ್ರೆಸ್' ನದ್ದೇ ಆಡಳಿತ!
ಬೆಂಗಳೂರು, ಜೂ. 06: ಅದು 2014 ರ ಲೋಕಸಭಾ ಚುನಾವಣಾ ಫಲಿತಾಂಶದ ಸಮಯ. ದೇಶದೆಲ್ಲೆಡೆ ಕಾಂಗ್ರೆಸ್ ನೆಲಕಚ್ಚಿತ್ತು. ಆದರೆ ಬೆಂಗಳೂರು ಬಸವನಗುಡಿಯ ಡಿವಿಜಿ ರಸ್ತೆಯಲ್ಲಿ ಮಾತ್ರ ಕಾಂಗ್ರೆಸ್ ಗೆ ಸ್ಷಷ್ಟ ಬಹುಮತ!
ಯಾಕೆ ಅರ್ಥವಾಗುತ್ತಿಲ್ಲವಾ? ಕೇಂದ್ರ ಮತ್ತು ರಾಜ್ಯದಲ್ಲಿ ಯಾವ ಸರ್ಕಾರಗಳು ಬರಲಿ, ಹೋಗಲಿ, ಇಲ್ಲಿ ಮಾತ್ರ ಕಾಂಗ್ರೆಸ್ ನದ್ದೇ ದರ್ಬಾರು .1956 ರಿಂದ ಕಾಂಗ್ರೆಸ್ ನಿರಂತರ ಆಳ್ವಿಕೆ ನಡೆಸಿಕೊಂಡು ಬಂದಿದೆ. ಹೌದು.. ಬಸವನಗುಡಿ ಡಿವಿಜಿ ರಸ್ತೆಯಲ್ಲಿರುವ ಶ್ರೀನಿವಾಸ ಬ್ರಾಹ್ಮಿನ್ಸ್ ಬೇಕರಿಯ ಕಾಂಗ್ರೆಸ್ ಕಡಲೆ ಕಾಳಿಗೆ ಯಾವಾಗಲೂ ಒಂದೇ ತೆರನಾದ ಬೇಡಿಕೆಯಿದೆ. [ಜೋಳದ ರೊಟ್ಟಿ ಎಣಗಾಯ್ ಪಲ್ಯ ಗುರೆಳ್ಳು ಚಟ್ನಿ, ವಾಹ್!]
ಕಳೆದ ಲೋಕಸಭಾ ಚುನಾವಣೆ ಫಲಿತಾಂಶದ ಸಮಯದಲ್ಲಿ ಇಂಥದ್ದೊಂದು ಮಾತು ಕೇಳಿಬಂದಿತ್ತಂತೆ. ಅಂದರೆ ಬೇಕರಿಯ ಜನಪ್ರಿಯತೆಯನ್ನು ಲೆಕ್ಕ ಹಾಕಿಕೊಳ್ಳಿ. ಡಿವಿಜಿ ರಸ್ತೆಯ ಮಧ್ಯಭಾಗದಲ್ಲಿರುವ ಬೇಕರಿಯಲ್ಲಿ ಸದಾ ಗ್ರಾಹಕರು ತುಂಬಿರುತ್ತಾರೆ. ವಿವಿಧ ನಮೂನೆಯ ಗುಣಮಟ್ಟದ ಬಿಸ್ಕೆಟ್ಸ್. ಕೇಕ್ ಗಳು, ಪಪ್ಸ್ ಗಳು ದೊರೆಯುತ್ತವೆ. ಕಾಂಗ್ರೆಸ್ ಕಡಲೆ ಬೀಜ, ನಿಪ್ಪಟ್ಟು, ರವೆ ಕೋಡ್ ಬಳೆ, ಕ್ಯಾಪ್ಸಿಕಂ ಪಪ್ಸ್ ಈ ಬೇಕರಿಯ ವಿಶೇಷ.
ಮಾಲಿಕ ರಾಮ್ ಪ್ರಸಾದ್ 1980 ರಿಂದ ಬೇಕರಿ ನಡೆಸಿಕೊಂಡು ಬಂದಿದ್ದಾರೆ. ಹಾಸನ ಮೂಲದ ರಾಮ್ ಪ್ರಸಾದ್ ಅವರ ತಂದೆ 1956 ರಲ್ಲಿ ಡಿವಿಜಿ ರಸ್ತೆಯಲ್ಲಿ ವ್ಯಾಪಾರ ಆರಂಭ ಮಾಡಿದರು. ಅಂದಿನಿಂದ ಇಂದಿನವರೆಗೆ ಒಂದೆ ಬಗೆಯ ಕ್ವಾಲಿಟಿ ಕಾಪಾಡಿಕೊಂಡು ಬಂದಿದ್ದಾರೆ.
ಎನ್ ಆರ್ ಐ ಗಳು ಭೇಟಿ ನೀಡುತ್ತಾರೆ
ವಿದೇಶಕ್ಕೆ ತೆರಳುವ ಎನ್ ಆರ್ ಐ ಗಳು, ಪ್ರವಾಸಕ್ಕೆ ತೆರಳುವ ಕುಟುಂಬಗಳು ಬೇಕರಿಗೆ ಭೇಟಿ ನೀಡಿ ಅವರಿಗೆ ಬೇಕಾದ ಆಹಾರ ವಸ್ತುಗಳನ್ನು ಕೊಂಡೊಯ್ಯುತ್ತಾರೆ. ವಿದ್ಯಾರ್ಥಿಗಳಿಗೂ ಸಹ ಬೇಕರಿ ಆಹಾ ಅಚ್ಚು ಮೆಚ್ಚು.
ಸದ್ಯ ಅಬಲಾಶ್ರಮದ ಕಟ್ಟಡದಲ್ಲಿದೆ
ಬೇಕರಿಯನ್ನು ನವೀಕರಣ ಮಾಡಲು ರಾಮ್ ಪ್ರಸಾದ್ ಮುಂದಾಗಿದ್ದು ಸದ್ಯ ಅಬಲಾಶ್ರಮದ ಕಟ್ಟಡದಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ. ಇನ್ನು ಒಂದೆರಡು ತಿಂಗಳಲ್ಲಿ ಬೇಕರಿಯನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರ ಮಾಡಲಾಗುವುದು.
ಎಷ್ಟು ಜನ ಕೆಲಸಗಾರರಿದ್ದಾರೆ?
ಬೇಕರಿ ನಿರ್ವಹಣೆ ಮತ್ತು ಆಹಾರ ತಯಾರಿಕೆ ಸೇರಿದಂತೆ ಒಟ್ಟು 20 ಅಧಿಕ ಕೆಲಸಗಾರರಿದ್ದಾರೆ. ಕೆಲಸಗಾರರಿಗೆ ಆರೋಗ್ಯ ವಿಮೆ ಮತ್ತು ಬೋನಸ್ ನೀಡಲಾಗುತ್ತಿದೆ. ಹಣಕಾಸು ಜವಾಬ್ದಾರಿಯನ್ನು ರಾಮ್ ಪ್ರಸಾದ್ ಮತ್ತು ಅವರ ಮಗಳು ವಹಿಸಿಕೊಂಡಿದ್ದಾರೆ.
ಬೇರೆ ಶಾಖೆ ಮಾಡಲ್ಲ: ರಾಮ್ ಪ್ರಸಾದ್
ಒಮ್ಮೆ ಬೇರೆ ಶಾಖೆ ಮಾಡುವ ಆಲೋಚನೆ ಬಂದಿತ್ತು. ಆದರೆ ಜನರ ಕೊರತೆಯಿಂದ ಕೈಬಿಟ್ಟಿದ್ದೇನೆ. ಇದ್ದ ಒಂದು ಅಂಗಡಿಯನ್ನು ನೋಡಿಕೊಂಡು ಹೋದರೆ ಸಾಕು ಎಂದು ರಾಮ್ ಪ್ರಸಾದ್ ಹೇಳುತ್ತಾರೆ.
ಸಸ್ಯಹಾರಕ್ಕೆ ಮಾತ್ರ ಅವಕಾಶ
ಇಲ್ಲಿ ಯಾವ ಮಾಂಸಹಾರಕ್ಕೆ ಸಂಬಂಧಿತ ಆಹಾರಗಳಿಗೆ ಅವಕಾಶವಿಲ್ಲ. ಸದಾ ತಾಜಾತನದಿಂದ ಕೂಡಿದ ಆಹಾರ ವಸ್ತುಗಳನ್ನು ಮಾರಾಟ ಮಾಡಲಾಗುತ್ತದೆ.
ಕಸ ವಿಲೇವಾರಿ ಕಟ್ಟುನಿಟ್ಟು
ರಾಮ್ ಪ್ರಸಾದ್ ಕಸ ವಿಲೇವಾರಿಯನ್ನು ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ. ಬೇಕರಿಯ ಎರಡೂ ಕಡೆಯಲ್ಲಿ ಕಸದ ತೊಟ್ಟಿ ಇಡಲಾಗಿದ್ದು ಸರಿಯಾದ ನಿರ್ವಹಣೆ ಮಾಡುತ್ತಿದ್ದಾರೆ.
ತೆಗೆದಿರುವ ವೇಳೆ?
ಬೆಳಗ್ಗೆ 9.30 ಕ್ಕೆ ಬೇಕರಿ ತೆರೆದರೆ ಮಧ್ಯಾಹ್ನ ಎರಡು ಗಂಟೆ ಬಿಡುವು ನೀಡಲಾಗುತ್ತದೆ. ನಂತರ 2.30ಕ್ಕೆ ಬೇಕರಿ ತೆರೆದರೆ ರಾತ್ರಿ 10 ಗಂಟೆವರೆಗೂ ವಹಿವಾಟು ನಡೆಯುತ್ತದೆ. ಸಂಜೆ ವೇಳೆ ಗ್ರಾಹಕರ ಭರಾಟೆ ಹೆಚ್ಚಿರುತ್ತದೆ.
ಬದಲಾದ ಬೆಂಗಳೂರು ಹೇಗಿದೆ?
ಬೆಂಗಳೂರು ಬದಲಾಗಿಲ್ಲ. ಜನಸಂಖ್ಯೆ ಏರಿಕೆಯಾಗಿದೆ. ಜನರಲ್ಲಿ ಸಮಾಜಿಕ ಹಿತಾಸಕ್ತಿ ಕಡಿಮೆಯಾಗಿದೆ. ಟ್ರಾಫಿಕ್ ನಿಯಮ ಪಾಲಿಸಲ್ಲ. ಎಲ್ಲೆಂದರೆಲ್ಲಿ ಕಸ ಎಸೆಯುತ್ತಾರೆ ಇದು ಬದಲಾಗಬೇಕು ಎಂದು ರಾಮ್ ಪ್ರಸಾದ್ ಹೇಳುತ್ತಾರೆ.
ಆವತ್ತಿನದು ಆವತ್ತೇ ಖಾಲಿ
ಬ್ಯುಗಲ್ ರಾಕ್ ಬಳಿ ನಮ್ಮ ಉತ್ಪನ್ನಗಳನ್ನು ತಯಾರು ಮಾಡುತ್ತೇವೆ. ಎಲ್ಲವೂ ಶುದ್ಧವಾಗಿರುವ ಕಾರಣಕ್ಕೆ ಗ್ರಾಹಕರು ನಮ್ಮ ಮೇಲೆ ಇನ್ನು ನಂಬಿಕೆ ಇರಿಸಿಕೊಂಡಿದ್ದಾರೆ ಎಂದು ರಾಮ್ ಪ್ರಸಾದ್ ಹೆಮ್ಮೆ ವ್ಯಕ್ತಪಡಿಸುತ್ತಾರೆ.
ಪ್ಲಾಸ್ಟಿಕ್ ಬಳಸಲ್ಲ
ಗ್ರಾಹಕರಿಗೆ ಬಟ್ಟೆ ಬ್ಯಾಗ್ ತರಲು ಹೇಳುತ್ತೇವೆ. ಪ್ಲಾಸ್ಟಿಕ್ ಬಳಕೆ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದ್ದು ಅದನ್ನು ಜನರಿಂದ ದೂರ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಅಗತ್ಯ ಎಂದು ಅನಿಸಿದಲ್ಲಿ ಮಾತ್ರ ಪ್ಲಾಸ್ಟಿಕ್ ಕವರ್ ನೀಡುತ್ತೇವೆ ಎಂದು ರಾಮ್ ಪ್ರಸಾದ್ ತಮ್ಮ ಪರಿಸರ ಕಾಳಜಿಯನ್ನು ತೋರಿಸುತ್ತಾರೆ.
ಶಾಪಿಂಗ್ ಬಂದಾಗ ಮರಿಬೇಡಿ
ಗಾಂಧಿ ಬಜಾರ್ ಅಥವಾ ಡಿವಿಜಿ ರಸ್ತೆಗೆ ಶಾಪಿಂಗ್ ಗೆಂದು ತೆರಳಿದಾಗ ಒಮ್ಮೆ ಶ್ರೀನಿವಾಸ ಬೇಕರಿಗೆ ತೆರಳಿ 'ಕಾಂಗ್ರೆಸ್' ರುಚಿ ನೋಡಬಹುದು. ನಗುಮುಖದ ಸೇವೆ ನಿಮ್ಮನ್ನು ಸದಾ ಸ್ವಾಗತಿಸುತ್ತಿರುತ್ತದೆ.