ಡಿ.17ರಂದು ಎಸ್. ಆರ್. ರಾಮಸ್ವಾಮಿಯವರ 'ದೀಪ್ತಶೃಂಗಗಳು' ಲೋಕಾರ್ಪಣೆ
ಬೆಂಗಳೂರು, ಡಿಸೆಂಬರ್ 17: ಕನ್ನಡ ಸಾಹಿತ್ಯ ಲೋಕಕ್ಕೆ ತಮ್ಮದೇ ಆದ ಕೊಡುಗೆ ನೀಡಿದ ಎಸ್.ಆರ್.ರಾಮಸ್ವಾಮಿಯವರ 'ದೀಪ್ತಶೃಂಗಗಳು' ಕೃತಿ ಡಿ.17 ರ ಭಾನುವಾರ ಬಿಡುಗಡೆಯಾಗಲಿದೆ.
ಮಕ್ಕಳ ಮನಸೂರೆಗೊಳ್ಳುವ ಸುಧಾ ಮೂರ್ತಿ ಅವರ ಹೊಸ ಕೃತಿ
ಬಸವನಗುಡಿಯ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ಬೆಳಗ್ಗೆ 10.30 ಕ್ಕೆ ಪುಸ್ತಕ ಲೋಕಾರ್ಪಣ ಕಾರ್ಯಕ್ರಮವಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿರುವ ಕರ್ನಾಟಕ ಉಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ಎನ್ . ಕುಮಾರ್ ಅವರು ಪುಸ್ತಕಲೋಕಾರ್ಪಣೆಗೊಳಿಸಲಿದ್ದಾರೆ. ಸಂಸ್ಕೃತ ವಿದ್ವಾಂಸರೂ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ನ ಕಾರ್ಯದರ್ಶಿಗಳೂ ಆಗಿರುವ ಡಾ. ಆರ್. ಎನ್. ನಾಗರಾಜ್ ಅವರು ಗ್ರಂಥಪರಿಚಯ ಮಾಡಿಕೊಡಲಿದ್ದಾರೆ.
ಬೇರೆಯವರಿಂದ ಮನ್ನಣೆಯನ್ನಾಗಲಿ, ಪದವಿಯನ್ನಾಗಲಿ ಎದುರುನೋಡದೆ ಸದಾ ಲೋಕಹಿತಕ್ಕಾಗಿ ಶ್ರಮಿಸುವ ಪ್ರವೃತ್ತಿ ಬೆಳೆಸಿಕೊಂಡ ಹಲವರನ್ನು ಪರಿಚಯಿಸುವ ಪ್ರಯತ್ನವೇ ಈ 'ದೀಪ್ತಶೃಂಗಗಳು.'
ಡಿವಿಜಿಯವರೊಂದಿಗೆ ಬಹುಕಾಲ ಒಡನಾಟ ಹೊಂದಿದ್ದ, ಜ್ಞಾಪಕಚಿತ್ರಶಾಲೆಯೂ ಸೇರಿದಂತೆ ಅವರ ಬಹುತೇಕ ಬರಹಗಳನ್ನು ಪುಸ್ತಕರೂಪಕ್ಕೆ ತಂದ ಎಸ್. ಆರ್. ರಾಮಸ್ವಾಮಿಯವರ ' ದೀವಟಿಗೆಗಳು' , ' ದೀಪ್ತಿಮಂತರು' ಕೃತಿಗಳು ಕೂಡ ಜ್ಞಾಪಕಚಿತ್ರಶಾಲೆಯನ್ನೇ ಹೋಲುವ ಪುಸ್ತಕಗಳಾಗಿವೆ. ಅದು ಡಿವಿಜಿ, ವಿಸೀ, ರಾಳ್ಲಪಲ್ಲಿ ಅನಂತಕೃಷ್ಣ ಶರ್ಮಾ, ಪಿ. ಕೋದಂಡರಾವ್, ಚನ್ನಕೇಶವಯ್ಯ, ಎಸ್. ಶ್ರೀಕಂಠಶಾಸ್ತ್ರೀ , ವೀರಕೇಸರಿ ಸೀತಾರಾಮ ಶಾಸ್ತ್ರೀ , ಯಾದವರಾವ್ ಜೋಶಿ, ತಿ. ತಾ. ಶರ್ಮಾ, ಮಾಗಡಿ ಲಕ್ಷ್ಮೀನರಸಿಂಹ ಶಾಸ್ತ್ರೀ , ಶೇಷಾದ್ರಿ ಗವಾಯಿ , ರಾಮರಾವ್ ನಾಯಕ್, ವಿ. ಎಸ್. ಕೌಶಿಕ್ , ಎಂ . ಎಚ್ . ಮರಿಗೌಡ ಮೊದಲಾದ ವಿವಿಧ ಜೀವನಕ್ಷೇತ್ರಗಳಿಗೆ ಸಂಬಂಧಿಸಿದ ವ್ಯಕ್ತಿಗಳನ್ನು ಪರಿಣಾಮಕಾರಿಯಾಗಿ ಪರಿಚಯಿಸಿವೆ; ಸಾಹಿತ್ಯಕವಲಯದಲ್ಲಿ ಮೆಚ್ಚುಗೆಯನ್ನೂ ಪಡೆದಿವೆ. ಇದೀಗ 'ದೀವಟಿಗೆಗಳು' , 'ದೀಪ್ತಿಮಂತರು' ಸರಣಿಯ ಮೂರನೆ ಕೃತಿಯಾಗಿ 'ದೀಪ್ತಶೃಂಗಗಳು' ಪುಸ್ತಕವನ್ನು ಎಸ್. ಆರ್. ರಾಮಸ್ವಾಮಿಯವರು ರಚಿಸಿದ್ದಾರೆ.
ಈ ಕೃತಿಯಲ್ಲಿ ರಾಮಸ್ವಾಮಿಯವರು ವಿದ್ವಾನ್ ಎನ್. ರಂಗನಾಥಶರ್ಮಾ, ಎಸ್. ಕೆ. ರಾಮಚಂದ್ರರಾವ್, ವೇದಾಂತ ಸುಬ್ಬಯ್ಯ, ಬೆಳಗೆರೆ ಕೃಷ್ಣಶಾಸ್ತ್ರೀ, ಟಿ. ಆರ್. ಶಾಮಣ್ಣ, ಎಸ್ . ವಿ. ನಾರಾಯಣಸ್ವಾಮಿರಾವ್, ಎಸ್. ಆರ್. ರಂಗನಾಥನ್ - ಈ ಏಳು ಜನ ಮಹನೀಯರ ವ್ಯಕ್ತಿತ್ವವನ್ನು ತಮ್ಮದೇ ಆದ ವಿಶಿಷ್ಟ ಶೈಲಿಯಲ್ಲಿ ಚಿತ್ರಿಸಿದ್ದಾರೆ.