ಸ್ಪೈಸ್ಜೆಟ್ ಹಾರಾಟ ದಿಢೀರ್ ರದ್ದು, ಪ್ರಯಾಣಿಕ ಕಂಗಾಲು
ಬೆಂಗಳೂರು, ಡಿ. 17: ತೀವ್ರ ಆರ್ಥಿಕ ಸಂಕಟದಲ್ಲಿ ಸಿಕ್ಕಿಬಿದ್ದಿರುವ ಸ್ಪೈಸ್ ಜೆಟ್ ವಿಮಾನಯಾನ ಸಂಸ್ಥೆಗೆ ಇಂಧನ ಪೂರೈಸಲು ತೈಲ ಕಂಪನಿಗಳು ನಿರಾಕರಿಸಿವೆ. ಸರ್ಕಾರಿ ಒಡೆತನದ ತೈಲ ಕಂಪನಿಗಳೂ ಇಂಧನ ಪೂರೈಸಲು ತಯಾರಿಲ್ಲ. ಇದರಿಂದ ಸ್ಪೈಸ್ ಜೆಟ್ ಸಂಸ್ಥೆಯು ಹಾರಾಟಗಳನ್ನು ಬುಧವಾರ ದಿಢೀರ್ ಸ್ಥಗಿತಗೊಳಿಸಿದೆ.
ಯಾವುದೇ ಮುನ್ಸೂಚನೆ ನೀಡದೆ ಕಂಪನಿ ಕೈಗೊಂಡಿರುವ ಈ ದಿಢೀರ್ ತೀರ್ಮಾನದಿಂದ ಸಾಕಷ್ಟು ಪ್ರಯಾಣಿಕರು ಪರದಾಡುತ್ತಿದ್ದಾರೆ. ಮಗನ ಚಿಕಿತ್ಸೆಗಾಗಿ ಸ್ಪೈಸ್ ಜೆಟ್ ವಿಮಾನ ಪ್ರಯಾಣದ ಟಿಕೆಟ್ ಬುಕ್ ಮಾಡಿದ್ದ ವ್ಯಕ್ತಿ ಪ್ರಯಾಣವನ್ನು ದಿಢೀರ್ ರದ್ದು ಮಾಡಿದ್ದಕ್ಕೆ ಅಸಹಾಯಕತೆ ವ್ಯಕ್ತಪಡಿಸಿದರು. [ಮೈಸೂರಿಗೆ ಕೈಕೊಟ್ಟ ಸ್ಪೈಸ್ ಜೆಟ್]
100ಕ್ಕೂ ಹೆಚ್ಚು ಪ್ರಯಾಣಿಕರು : ಮಂಗಳವಾರವೂ ಸೇರಿದಂತೆ ಎರಡು ದಿನಗಳಿಂದ ಅನೇಕ ಪ್ರಯಾಣಗಳನ್ನು ಸಂಸ್ಥೆಯು ರದ್ದುಪಡಿಸಿದೆ. ಈ ಹಿನ್ನೆಲೆಯಲ್ಲಿ 100ಕ್ಕೂ ಹೆಚ್ಚು ಪ್ರಯಾಣಿಕರು ಕರ್ನಾಟಕದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಗೆ ಅಸಹಾಯಕತೆಯಿಂದ ಕಾಯುತ್ತಿರುವುದು ಕಂಡುಬಂತು. ಮಂಗಳವಾರ ಸಂಚರಿಸಬೇಕಿದ್ದ ಪ್ರಯಾಣಿಕರಿಗೆ ಕನಿಷ್ಠ ಬೋರ್ಡಿಂಗ್ ಪಾಸ್ ಕೂಡ ನೀಡದ ಸಂಸ್ಥೆ, ಹೊರಗೆ ಕಾಯಿರಿ ಎಂದಷ್ಟೇ ಹೇಳಿ ಕೈತೊಳೆದುಕೊಂಡಿದೆ.
ಮಗನ ಚಿಕಿತ್ಸೆಗೆ ತಂದೆಯ ಪರದಾಟ : ಸಕಾರ ಆಸ್ಪತ್ರೆಯಿಂದ ನವದೆಹಲಿಗೆ ಮಗನನ್ನು ಚಿಕಿತ್ಸೆಗಾಗಿ ಕರೆದೊಯ್ಯುತ್ತಿದ್ದ ಮೋಹಿತ್ ಎಂಬುವರು ಸಂಸ್ಥೆಯ ದಿಢೀರ್ ನಿರ್ಧಾರದಿಂದ ಆತಂಕಗೊಂಡಿದ್ದಾರೆ. ತಮ್ಮ ದುಃಖವನ್ನು ಮಾಧ್ಯಮದೊಂದಿಗೆ ತೋಡಿಕೊಂಡ ಅವರು "ನನ್ನ ಸ್ಪೈಸ್ ಜೆಟ್ ವಿಮಾನ ಪ್ರಯಾಣ ರದ್ದಾಗಿದೆ. ನನ್ನ ಮಗನ ಆರೋಗ್ಯ ಪರಿಸ್ಥಿತಿ ಅತ್ಯಂತ ಗಂಭೀರವಾಗಿದ್ದರೂ, ಪರ್ಯಾಯ ವ್ಯವಸ್ಥೆ ಕಲ್ಪಿಸಿಲ್ಲ. ಈಗ ಏನು ಮಾಡಬೇಕೆಂದು ತಿಳಿಯುತ್ತಿಲ್ಲ" ಎಂದು ಹೇಳಿದ್ದಾರೆ. [ಸೆಪ್ಟೆಂಬರ್ ನಿಂದ ಸ್ಪೈಸ್ ಜೆಟ್ ಹಾರಾಟವಿಲ್ಲ]
"ಇತರ ಕಂಪನಿಗಳ ವಿಮಾನ ಪ್ರಯಾಣ ದರ ನನ್ನ ಕೈಗೆಟುಕುವಂತಿಲ್ಲ. ನನ್ನ ಮಗನ ಪರಿಸ್ಥಿತಿ ನೋಡಿಯಾದರೂ ನನಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು" ಎಂದು ಅಂಗಲಾಚಿದರು.
ಸ್ಪಷ್ಟ ಮಾಹಿತಿ ನೀಡದ ಕಂಪನಿ : ಇನ್ನೋರ್ವ ಪ್ರಯಾಣಿಕ ರವಿ ಶಂಕರ್ ಸ್ಪೈಸ್ ಜೆಟ್ ಸಂಸ್ಥೆಯ ನಿರ್ಲಕ್ಷಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. "ನನ್ನ ಪ್ರಯಾಣ ಮೂರು ಬಾರಿ ಮುಂದೂಡಲ್ಪಟ್ಟಿದೆ. ಆದರೆ, ಇದುವರೆಗೂ ರದ್ದಾಗಿದೆ ಎಂದು ಹೇಳಲು ಸಂಸ್ಥೆ ತಯಾರಿಲ್ಲ" ಎಂದು ಆರೋಪಿಸಿದ್ದಾರೆ. [1,800ಕ್ಕೂ ಹೆಚ್ಚು ದೇಶೀಯ ಸ್ಪೈಸ್ ಜೆಟ್ ಹಾರಾಟ ರದ್ದು]
ತೀವ್ರ ಆರ್ಥಿಕ ಸಮಸ್ಯೆ ಎದುರಿಸುತ್ತಿರುವ ಸ್ಪೈಸ್ ಜೆಟ್ ಸಂಸ್ಥೆಗೆ ಅಲ್ಲದೆ, ಯಾವುದೇ ಬ್ಯಾಂಕ್ ಕೂಡ ಸಾಲ ನೀಡಲು ಮುಂದೆ ಬರುತ್ತಿಲ್ಲ. ಆದ್ದರಿಂದ ಸ್ಪೈಸ್ ಜೆಟ್ ಅಸಹಾಯಕತೆ ಎದುರಿಸುತ್ತಿದೆ ಎನ್ನಲಾಗಿದೆ.