ಅತ್ಯಾಚಾರ ಸಂತ್ರಸ್ತರಿಗೆ ಶೀಘ್ರ 'ಗೆಳತಿ' ವಿಶೇಷ ಚಿಕಿತ್ಸಾ ಘಟಕ
ಬೆಂಗಳೂರು. ಮಾರ್ಚ್ 08: ರಾಜ್ಯದ ಎಲ್ಲಾ 220 ತಾಲೂಕುಗಳಲ್ಲಿ ಅತ್ಯಾಚಾರ ಅಥವಾ ಲೈಂಗಿಕ ಶೋಷಣೆಗೆ ಒಳಗಾದವರಿಗೆ ಚಿಕಿತ್ಸೆ ನೀಡಲು ಗೆಳತಿ ವಿಶೇಷ ಚಿಕಿತ್ಸಾ ಘಟಕ ತೆರೆಯಲಾಗುವುದು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಉಮಾಶ್ರೀ ಹೇಳಿದರು.
ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮಹಿಳಾ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶೋಷಣೆಗೆ ಅಥವಾ ಅತ್ಯಾಚಾರಕ್ಕೆ ಒಳಗಾದ ಮಹಿಳೆಯರನ್ನು ಯಾವುದೇ ಆಸ್ಪತ್ರೆಗಳಲ್ಲಿ ತಕ್ಷಣಕ್ಕೆ ಅವರನ್ನು ದಾಖಲು ಮಾಡಿಕೊಳ್ಳಲು ಒಪ್ಪುವುದಿಲ್ಲ, ಬದಲಾಗಿ ಪೊಲೀಸರ ವಿಚಾರಣೆ ಬಳಿಕವೇ ಅವರನ್ನು ದಾಖಲು ಮಾಡಿಕೊಳ್ಳಲಾಗುವುದು ಎಂದು ಹೇಳಿದ ಎಷ್ಟೋ ನಿದರ್ಶನಗಳಿವೆ. ಆ ಸಂದರ್ಭದಲ್ಲಿ ಮಹಿಳೆಯರು ಸಮರ್ಪಕ ಚಿಕಿತ್ಸೆ ದೊರೆಯದೆ ಸಾವನ್ನಪ್ಪುತ್ತಿದ್ದಾರೆ.
ಜಿಲ್ಲಾ ಮಟ್ಟದಲ್ಲಿ ವಿಶೇಷ ಘಟಕಗಳಿವೆ, ಇದೀಗ ತಾಲೂಕುಗಳಲ್ಲಿ ಘಟಕ ಸ್ಥಾಪಿಸಲಾಗುತ್ತದೆ, ಶೀಘ್ರ ಮಹಿಳಾ ನೀತಿ ಕರಡು ಪ್ರಕಟಿಸಲಾಗುವುದು, ಇಲಾಖೆಗಳು ಮಹಿಳೆಯರಿಗಾಗಿ ಇರುವ ಯೋಜನೆ ರೂಪಿಸಲು ಈ ನೀತಿ ಸಹಕಾರಿಯಾಗಲಿದೆ ಎಂದರು. ಸಂದರ್ಭದಲ್ಲಿ 9ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಮಹಿಳಾ ತರಬೇತಿ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಕೇಂದ್ರ ಕಚೇರಿ ಕರ್ಮಣಿ ಸೌಧದ ಶಿಲಾನ್ಯಾಸ ನೆರವೇರಿಸಿದರು.