ಜನಸಂಖ್ಯೆಯಲ್ಲಿ ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದೆ ಭಾರತ!
ಬೆಂಗಳೂರು, ಜೂನ್ 29: ಭಾರತದ ಜನಸಂಖ್ಯೆ ಎಷ್ಟು ತೀವ್ರವಾಗಿ ಏರುತ್ತಿದೆಯೆಂದರೆ ನಾವು ವರ್ಷಕ್ಕೊಂದು ಶ್ರೀಲಂಕಾ ಸೃಷ್ಠಿಸುತ್ತಿದ್ದೇವೆ ಎಂದು ಎಫ್ಓಜಿಎಸ್ಐ ಅಧ್ಯಕ್ಷೆ ವೈದ್ಯೆ ಹೇಮಾ ದಿವಾಕರ್ ಕಳವಳಿ ವ್ಯಕ್ತಪಡಿಸಿದರು.
ಲೀಲಾ ಪ್ಯಾಲೆಸ್ ಅಲ್ಲಿ ಗ್ಲೋಬಲ್ ಹೆಲ್ತ್ ಸ್ಟ್ರಾಟಜೀಸ್ ಆಯೋಜಿಸಿದ್ದ ಕುಟುಂಬ ಯೋಜನೆ ಪ್ರಸಾರದಲ್ಲಿ ಮಾಧ್ಯಮಗಳ ಪಾತ್ರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕುಟುಂಬ ಯೋಜನೆ ಕುರಿತು ಬೆಂಗಳೂರಲ್ಲೊಂದು ಉಪಯುಕ್ತ ಕಾರ್ಯಕ್ರಮ
ಭಾರತದಲ್ಲಿ ವರ್ಷಕ್ಕೆ 30 ಮಿಲಿಯನ್ ಹೆರಿಗೆಗಳಾಗುತ್ತವೆ. ಹೆರಿಗೆ ಸಮಯದಲ್ಲಿ ಹಾಗೂ ಹೆರಿಗೆ ಸಮಸ್ಯೆಯಿಂದ ಮಹಿಳೆಯರು ಸಾವನ್ನಪ್ಪುವ ಪ್ರಮಾಣದಲ್ಲಿಯೂ ಕೂಡ ಭಾರತ ಮುಂದಿದೆ ಎಂದು ಅವರು ಮಾಹಿತಿ ನೀಡಿದರು.
ಅರಿವಿನ ಕೊರತೆಯಿಂದ ತಾಯಂದಿರ ಸಾವು
ಕುಟುಂಬ ಯೋಜನೆಯು ಭಾರತದ ಜನಸಂಖ್ಯೆ ನಿಯಂತ್ರಣದ ಜೊತೆಗೆ ಮಹಿಳೆ ಮತ್ತು ಮಕ್ಕಳ ಆರೋಗ್ಯ ಸುಧಾರಣೆಗೆ ಅತ್ಯಂತ ಅವಶ್ಯಕವಾಗಿದೆ ಎಂದು ಅವರು ಪ್ರತಿಪಾದಿಸಿದರು. ಕುಟುಂಬ ಯೋಜನೆಯ ಅರಿವಿನ ಕೊರತೆಯಿಂದಲೇ ಬಹಳಷ್ಟು ಮಹಿಳೆಯರು ಜೀವ ಕಳೆದುಕೊಳ್ಳುತ್ತಿದ್ದಾರೆ ಎಂದು ಅವರು ಹೇಳಿದರು.
ಮಕ್ಕಳ ನಡುವಿನ ಅಂತರ ಖಡ್ಡಾಯ
ಮಕ್ಕಳು ಆದಮೇಲೆ ಗರ್ಭಕೋಶದ ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳಬೇಕು ಎಂಬುದು ಎಲ್ಲ ಮಹಿಳೆಯರಿಗೆ ಗೊತ್ತಿದೆ ಆದರೆ ಒಂದು ಗರ್ಭಧಾರಣೆಯಿಂದ ಮತ್ತೊಂದಕ್ಕೆ ಎಷ್ಟು ಅಂತರವಿರಬೇಕು ಎಂಬ ಮಾಹಿತಿಯ ಕೊರತೆ ಮಹಿಳೆಯರಲ್ಲಿದೆ ಎಂದು ಅವರು ಹೇಳಿದರು.
ಗರ್ಭ ಧರಿಸುವುದು ಆಕೆಯ ಹಕ್ಕು
ಗರ್ಭ ಧರಿಸುವುದು ಆಕೆಯ ಹಕ್ಕು ಆದರೆ ಅದು ಅಕಸ್ಮಾತ್ ಆಗಿ ಆಗಬಾರದು ಆಕೆಯ ಇಚ್ಛೇಯಿಂದಲೇ ಆಗಬೇಕು. ಗರ್ಭಧಾರಣೆ ಸಮಯದಲ್ಲಿ ಮಗುವಿನ ಲಿಂಗದ ಬಗ್ಗೆಗಿಂತಲೂ ಆಕೆ ಮತ್ತು ಮಗುವಿನ ಆರೋಗ್ಯದ ಕಾಳಜಿ ಹೆಚ್ಚಿರಬೇಕು ಎಂದು ಅವರು ಹೇಳಿದರು.
ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ ಸುರಕ್ಷಿತ
ಸಮಾಜದಲ್ಲಿ ಗರ್ಭಕೋಶ ಶಸ್ತ್ರಚಿಕಿತ್ಸೆ ಕೇವಲ ಹೆಣ್ಣು ಮಕ್ಕಳೆ ಮಾಡಿಸಿಕೊಳ್ಳಬೇಕಂಬ ಕುರುಡು ಆಚರಣೆ ಬಹು ಕಾಲದಿಂದಲೂ ಬಂದುಬಿಟ್ಟಿದೆ. ಆದರೆ ವ್ಯಾಸಕ್ಟಮಿ (ಪುರುಷರ ಸಂತಾನ ಹರಣ ಶಸ್ತ್ರಚಿಕಿತ್ಸೆ) ಬಹಳ ಸುರಕ್ಷಿತವಾಗಿದ್ದರೂ ಸಹ ಇದರ ಬಗ್ಗೆ ಅರಿವು ಕಡಿಮೆ ಇದೆ ಎಂದು ಅವರು ಹೇಳಿದರು.