ನಿರುದ್ಯೋಗ ಮುಕ್ತ ಜಯನಗರಕ್ಕೆ ಸೌಮ್ಯ ರೆಡ್ಡಿ ಸಂಕಲ್ಪ
ಬೆಂಗಳೂರು, ಏಪ್ರಿಲ್ 21: ಜಯನಗರದ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು 'ನಿರುದ್ಯೋಗ ಮುಕ್ತ ಜಯನಗರ' ಎಂಬ ಅಭಿಯಾನದಡಿ ಯುವಕ ಯುವತಿಯರಿಗಾಗಿ ನೆರವು ನೀಡುತ್ತಿರುವ, ಉದ್ಯೋಗ ಯೋಜನೆ ಕುರಿತಂತೆ ಸಾಕ್ಷ್ಯಚಿತ್ರದ ಮೂಲಕ ಭರದಿಂದ ಪ್ರಚಾರ ನಡೆಸಿದ್ದಾರೆ.
ಮೂರು ನಿಮಿಷ 40 ಸೆಕೆಂಡುಗಳ ಸಾಕ್ಷ್ಯಚಿತ್ರದಲ್ಲಿ ಎಲಿವೇಟ್ ಲೈಫ್ ಎನ್ನುವ ಸಂಸ್ಥೆ ನಿರುದ್ಯೋಗಿ ಯುವಕರಿಗಾಗಿ ರೂಪಿಸಿರುವ ಹಲವಾರು ತರಬೇತಿ ಕಾರ್ಯಕ್ರಮಗಳು ಹಾಗೂ ಗ್ರಾಮೀಣ ಪ್ರದೇಶದಿಂದ ಬಂದು ಬೆಂಗಳೂರಲ್ಲಿ ಸಣ್ಣ-ಪುಟ್ಟ ಕೆಲಸ ಮಾಡಿಕೊಂಡಿರುವ ಯುವಕರಿಗೆ ಕೌಶಲ್ಯಾಭಿವೃದ್ಧಿ ತರಬೇತಿ ನೀಡುವ ಮೂಲಕ ಸ್ವಾವಲಂಬಿ ಜೀವನ ನಡೆಸಲು ಎಲೆವೇಟ್ ಲೈಫ್ ಸಂಸ್ಥೆ ಪ್ರಯತ್ನಿಸುತ್ತಿದೆ.
ಕುಟುಂಬ ರಾಜಕಾರಣದಿಂದ ಯಾರಿಗೆ ಸಿಕ್ತು ಟಿಕೆಟ್?
ಆ ಸಂಸ್ಥೆಗೆ ಕಾಂಗ್ರೆಸ್ ಅಭ್ಯರ್ಥಿ ಸೌಮ್ಯ ರೆಡ್ಡಿಯವರು ನೆರವು ನೀಡಿ ಮತ್ತಷ್ಟು ವಿಸ್ತೃತವಾಗಿ ಯುವಕರಿಗೆ ತರಬೇತಿ ನೀಡುವ ಕಾರ್ಯಕ್ರಮವನ್ನು ಈ ಸಂಸ್ಥೆಯ ಮೂಲಕ ನೀಡಲಾಗುತ್ತಿದೆ. ಎಲಿವೇಟ್ ಲೈಫ್ ಎನ್ನುವ ಖಾಸಗಿ ಸಂಸ್ಥೆ ಈ ಬಾರಿ ಚುನಾವಣೆಯಲ್ಲಿ ತನ್ನ ಬೆಂಬಲವನ್ನು ಸೌಮ್ಯ ರೆಡ್ಡಿಯವರಿಗೆ ನೀಡಿದ್ದು, ಯಾವ ಕಾರಣಗಳಿಗಾಗಿ ಸೌಮ್ಯ ರೆಡ್ಡಿಯವರನ್ನು ಬೆಂಬಲಿಸುತ್ತಿದೆ ಎಂಬುದನ್ನು ಸಾಕ್ಷ್ಯಚಿತ್ರ ಬಿಂಬಿಸುತ್ತದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹಳ್ಳಿಯಿಂದ ಬಂದ ಯುವಕನೊಬ್ಬ ಬೆಂಗಳೂರಿನಲ್ಲಿ ಕಾರ್ ಡ್ರೈವರ್ ಆಗಿ ಕೆಲಸ ಮಾಡುತ್ತಿರುವಾಗ ಎಲಿವೇಟ್ ಲೈಫ್ ಸಂಸ್ಥೆಯ ಸಿಬ್ಬಂದಿ ಆತನನ್ನು ಕರೆತಂದು ತರಬೇತಿ ನೀಡಿ ಆತನನ್ನು ಎಂಜಿನಿಯರ್ ಆಗಿ ಪರಿವರ್ತಿಸುತ್ತಾರೆ. ಆ ಯುವಕನ ಯಶೋಗಾಥೆಯನ್ನು ಮುಂದಿಟ್ಟುಕೊಂಡು ಈ ಸಾಕ್ಷ್ಯಚಿತ್ರವನ್ನು ನಿರ್ಮಿಸಲಾಗಿದ್ದು ಸೌಮ್ಯ ರೆಡ್ಡಿಯವರನ್ನು ಚುನಾವಣೆಯಲ್ಲಿ ಆಯ್ಕೆ ಮಾಡಿದರೆ ಜಯನಗರ ಸಂಪೂರ್ಣ ನಿರುದ್ಯೋಗಮುಕ್ತವಾಗುತ್ತದೆ ಎಂಬ ಸಂದೇಶವನ್ನು ಸಾರುತ್ತದೆ.