ದಕ್ಷಿಣ ಭಾರತದ ಮೊದಲ 'ಎಲಿವೇಟೆಡ್ ಸ್ಕೈವಾಕ್' ಜಯನಗರದಲ್ಲಿ ಉದ್ಘಾಟನೆ
ದಕ್ಷಿಣ ಭಾರತದ ಮೊತ್ತ ಮೊದಲ 'ಎಲಿವೇಟೆಡ್ ಸ್ಕೈವಾಕ್' ಜಯನಗರದ ಮೂರನೇ ಬಡಾವಣೆಯಲ್ಲಿ ಉದ್ಘಾಟನೆಯಾಗಿದೆ. ಇದರಲ್ಲಿ ಮೂರು ಲಿಫ್ಟ್ ಗಳಿವೆ.
ಬೆಂಗಳೂರು, ಜನವರಿ 31: ಜಯನಗರ ಮೂರನೇ ಬಡಾವಣೆಯಲ್ಲಿ ನಿರ್ಮಾಣವಾದ ಅತ್ಯಾಧುನಿಕ 'ದಾ.ರಾ.ಬೇಂದ್ರ ಗಗನ ಮಾರ್ಗ' ಮಂಗಳವಾರ ಉದ್ಘಾಟನೆಯಾಯಿತು. ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್ ಮತ್ತು ಮೇಯರ್ ಪದ್ಮಾವತಿ ಸ್ಕೈವಾಕ್ ಉದ್ಘಾಟನೆ ಮಾಡಿದರು.
ದಕ್ಷಿಣ ಭಾರತದ ಮೊದಲ 'ಎಲಿವೇಟೆಡ್ ಸ್ಕೈವಾಕ್' ಎಂಬ ಹೆಗ್ಗಳಿಕೆಗೆ ಈ ಗಗನಮಾರ್ಗ ಪಾತ್ರವಾಗಿದೆ. ಇಲ್ಲಿ ಮೂರು ಕಡೆಗಳಲ್ಲಿಯೂ ಹತ್ತಲು ಲಿಫ್ಟ್ ವ್ಯವಸ್ಥೆ ಇದೆ. ಜನರು ಮೆಟ್ಟಿಲು ಹತ್ತುವ ಬದಲು ಲಿಫ್ಟ್ ನಲ್ಲೇ ಹತ್ತಿ, ರಸ್ತೆ ದಾಟಿ ಮತ್ತೆ ಪುನಃ ಲಿಫ್ಟ್ ಮೂಲಕವೇ ಇಳಿಯಬಹುದಾಗಿದೆ.[ಈ ಟ್ರಾಫಿಕ್ ಪೊಲೀಸ್ ತೋರಿದ ಮಾನವೀಯತೆ ಎಂತದ್ದು ನೋಡಿ!]
ಬೆಂಗಳೂರಿನ ಹಲವು ಕಡೆಗಳಲ್ಲಿ ಸ್ಕೈವಾಕ್ ಗಳಿದ್ದು ಮೆಟ್ಟಿಲು ಹತ್ತಲು ಜನ ಹಿಂದೇಟು ಹಾಕುವುದರಿಂದ ಬಳಸದೇ ಹಾಗೇ ಪಾಳು ಬಿದ್ದಿವೆ. ಆದರೆ ಈ ಸ್ಕೈವಾಕ್ ನಲ್ಲಿ ಲಿಫ್ಟ್ ವ್ಯವಸ್ಥೆ ಇದ್ದು, ಹಿರಿಯರು ಮತ್ತು ವಿಶೇಷ ಚೇತನರಿಗೂ ಬಹಳ ಅನುಕೂಲವಾಗಿದೆ.
ಈ ಸ್ಕೈವಾಕ್ ನಿಂದ ಜಯನಗರದ ಜನತೆಗೆ ರಸ್ತೆ ದಾಟುವುದು ಸುಲಭವಾಗಿದ್ದು, 22ನೇ ಅಡ್ಡರಸ್ತೆ, 9ನೇ ಮುಖ್ಯರಸ್ತೆ ಮತ್ತು ಆನೆಬಂಡೆ (ಎಲಿಫೆಂಟ್ ರಾಕ್)ರಸ್ತೆ ದಾಟಲು ಅನುಕೂಲವಾಗಲಿದೆ. ಮೂರು ರಸ್ತೆಗಳನ್ನು ದಾಟಬಹುದಾದ ಬೆಂಗಳೂರಿನ ಮೊದಲ ಸ್ಕೈವಾಕ್ ಇದಾಗಿದೆ ಎಂದು ಕಾರ್ಪೊರೇಟರ್ ಎನ್.ಆರ್.ರಮೇಶ್ ಹೇಳಿದ್ದಾರೆ.[ನ್ಯಾಷನಲ್ ಕಾಲೇಜು ಬಳಿಯ ಮೇಲ್ಸೇತುವೆಯ ದುರಸ್ತಿ ಹೇಗೆ ನಡೆದಿದೆ?]
ಈ ಗಗನ ಮಾರ್ಗವನ್ನು ಪ್ರಕಾಶ್ ಆರ್ಟ್ಸ್ ಸಂಸ್ಥೆ ಬಿಬಿಎಂಪಿಯ ಬೂಟ್ (BOOT) ಯೋಜನೆಯಡಿಯಲ್ಲಿ ನಿರ್ಮಾಣ ಮಾಡಿದೆ. ಸ್ಕೈವಾಕ್ ನಿರ್ಮಾಣಕ್ಕೆ ಸುಮಾರು 2 ಕೋಟಿ ಖರ್ಚು ಮಾಡಲಾಗಿದ್ದು ವರಕವಿ ದಾ. ರಾ. ಬೇಂದ್ರೆಯವರ ಹೆಸರು ಇಡಲಾಗಿದೆ.
ದಾ.ರಾ ಬೇಂದ್ರೆಯವರ 121 ಜನ್ಮ ದಿನಾಚರಣೆಯಂದೇ ಗಗನಮಾರ್ಗ ಉದ್ಘಾಟನೆಯಾಗಿದ್ದು, ವರಕವಿ ಸ್ಮರಣಾರ್ಥ ಸ್ಥಳದಲ್ಲಿ ಕಂಚಿನ ಪುತ್ಥಳಿಯನ್ನೂ ಸ್ಥಾಪಿಸಲಾಗಿದೆ.