ಬೆಂಗಳೂರಲ್ಲಿ ಭೂಕಂಪ ಅನುಭವ: ಅಲ್ಲಗಳೆದ ಭೂಗರ್ಭ ತಜ್ಞರು
ಬೆಂಗಳೂರು, ಆಗಸ್ಟ್ 16: ಬೆಂಗಳೂರಿನಲ್ಲಿ ಗುರುವಾರ ಮಧ್ಯಾಹ್ನ ಬೆಂಗಳೂರು ದಕ್ಷಿಣ ಭಾಗದ ಹಲವು ಪ್ರದೇಶಗಳಲ್ಲಿ ಭೂಕಂಪನದ ಅನುಭವವಾಗಿದೆ ಎಂದು ನಾಗರಿಕರು ತಮ್ಮ ಅನುಭವವನ್ನು ಹೇಳಿಕೊಂಡಿದ್ದಾರೆ.
ಆದರೆ ರಿಕ್ಟರ್ ಮಾಪನದಲ್ಲಿ ಯಾವುದೇ ಭೂಕಂಪನ ಕಂಡುಬಂದಿಲ್ಲ ಎಂದು ಭೂಗರ್ಭ ಇಲಾಖೆ ಸ್ಪಷ್ಟಪಡಿಸಿದೆ.
ಆರ್ಆರ್ ನಗರದ ಹೋಟೆಲ್ ಒಂದರಲ್ಲಿ ಗ್ರಾಹಕರು ಭಾರಿ ಸದ್ದು ಕೇಳಿದ ಅನುಭವವಾಗಿ ಇದರ ಬೆನ್ನಲ್ಲೇ ಭೂಕಂಪ ವಾಗಿದೆ ಎನ್ನುವ ಸುದ್ದಿ ಹಬ್ಬಿತು, ಕತ್ರಿಗುಪ್ಪೆ, ಕೋಣನಕುಂಟೆ, ರಾಜರಾಜೇಶ್ವರಿನಗರ,ನಂದಿನಿ ಲೇಔಟ್, ಕೆಂಗೇರಿ, ಜ್ಞಾನಭಾರತಿ, ಕುಮಾರಸ್ವಾಮಿ ಲೇಔಟ್, ವಸಂತಪುರ, ಕುರುಬರಹಳ್ಳಿ, ಉತ್ತರಹಳ್ಳಿ, ಮತ್ತಿಕೆರೆ ಸೇರಿದಂತೆ ಹಲವಾರು ಪ್ರದೇಶದಲ್ಲಿ ಭೂಮಿ ನಡುಗಿದ ಅನುಭವವಾಗಿದೆ ಎಂದು ನಾಗರಿಕರು ತಿಳಿಸಿದ್ದಾರೆ.
ಈ ಬಗ್ಗೆ ಭೂಕಂಪ ಸಂಭವಿಸಿದ ಕೆಲವೇ ನಿಮಿಷಗಳಲ್ಲಿ ಫೇಸ್ಬುಕ್ ಸೇರಿದಂತೆ ಹಲವಾರು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರು ತಮ್ಮ ಅನುಭವ ಹಂಚಿಕೊಂಡರೆ ಇನ್ನೂ ಕೆಲವರು ಮನೆಯ ಹಾಗೂ ಕಚೇರಿಯ ಕಿಟಕಿ ಹಾಗೂ ಬಾಗಿಲುಗಳು ಅಲುಗಾಡಿದ ಅನುಭವವಾಗಿದೆ ಎಂದು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಸ್ಪಷ್ಟನೆ ನೀಡಿದ ಭೂಗರ್ಭ ಶಾಸ್ತ್ರಜ್ಞ ಜಗದೀಶ್ ರಿಕ್ಟರ್ ಮಾಪಕದಲ್ಲಿ ಬೆಂಗಳೂರಿನ ಯಾವುದೇ ಪ್ರದೇಶದಲ್ಲಿ ಭೂಕಂಪನ ಆಗಿರುವ ಬಗ್ಗೆ ದಾಖಲಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹೊಸಕೆರೆ ಹಳ್ಳಿಯ ವಾಸಿ ಆಕ್ಸೆಂಚರ್ ಉದ್ಯೋಗಿ ಕುಮಾರ್ 'ಒನ್ ಇಂಡಿಯಾ' ಕನ್ನಡ ಜತೆ ಮಾತನಾಡಿ, ತಮ್ಮ ಅನುಭವ ಹಂಚಿಕೊಂಡಿದ್ದು ಹೀಗೆ, ಜೋರಾಗಿ ಸಿಡಿಲು ಬಡಿದಾಗ ಎಂಥಾ ಅನುಭವವಾಗುತ್ತದೋ ಅಂಥದ್ದೇ ಅನುಭವ ಇಂದು ಆಯಿತು. ಆ ಸಂದರ್ಭದಲ್ಲಿ ಕಿಟಿಕಿಯ ಗಾಜುಗಳು ಸದ್ದಾದವು.
ಜೋರಾದ ಬಾಂಬ್ ಸಿಡಿದಂತೆಯೂ ಭಾಸವಾಯಿತು, ಆನಂತರ ನನ್ನ ಆಫೀಸ್ನಲ್ಲೂ ಕೆಲವರು ಕರೆ ಮಾಡಿ, ನೀವಿರುವ ಬಡಾವಣೆಯ ಸಮೀಪ ಯಂಥದ್ದೋ ಭಾರಿ ಸದ್ದಾಗಿದೆಯಂತೆ ಎಂದು ನನ್ನ ಹತ್ರ ಹೇಳಿದರು, ಸ್ವತಃ ನನಗೆ ಈ ಭಯಾನಕ ಅನುಭವವಾಗಿದ್ದರಿಂದ ಹಾಗೂ ನಾನು 'ಒನ್ ಇಂಡಿಯಾ' ಕನ್ನಡದ ಓದುಗನಾಗಿದ್ದರಿಂದ ಫೋನ್ ಮಾಡಿ ಅನುಭವ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದರು.