ಸಿಎಂ ಕುಮಾರಸ್ವಾಮಿಗೆ ಕಿರುಕುಳ ನೀಡುತ್ತಿರುವ ಕಾಂಗ್ರೆಸ್ ನಾಯಕರ್ಯಾರು?!
Recommended Video
ಬೆಂಗಳೂರು, ಜುಲೈ 17: 'ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಅವರಿಗೆ ಕೆಲವು ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ' ಎಂದು ಕಾಂಗ್ರೆಸ್ ನ ಹಿರಿಯ ನಾಯಕ ಕೆಬಿ ಕೋಳಿವಾಡ ಆರೋಪಿಸಿದ್ದಾರೆ.
'ರಾಜ್ಯದ ಅತ್ಯುನ್ನತ ಹುದ್ದೆಯಲ್ಲಿದ್ದರೂ ಅವರು ಸಂತೋಷವಾಗಿಲ್ಲ' ಎಂದು ಕೋಳಿವಾಡ ಹೇಳಿದ್ದಾರೆ. 'ನಾನು ವಿಷಕಂಠ, ಎಲ್ಲಾ ಕಷ್ಟವನ್ನೂ ನುಂಗಿಕೊಂಡು ಆಡಳಿತ ನಡೆಸುತ್ತಿದ್ದೇನೆ' ಎಂದು ಇತ್ತೀಚೆಗಷ್ಟೇ ಕುಮಾರಸ್ವಾಮಿ ಹೇಳಿಕೆ ನೀಡಿದ್ದರು.
ಹಾಗಾದ್ರೆ.. ಮುಖ್ಯಮಂತ್ರಿ ಕುಮಾರಸ್ವಾಮಿ ಕಣ್ಣೀರಿಗೆ ಅಸಲಿ ಕಾರಣಕರ್ತರಾರು?
'ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿ ಆವರಿಗೆ ಸರಿಯಾಗಿ ಆಡಳಿತ ನಡೆಸಲು ಸಾಧ್ಯವಾಗುತ್ತಿಲ್ಲ. ಅವರಿಗೆ ಕೆಲವು ಕಾಂಗ್ರೆಸ್ ನಾಯಕರು ಕಿರುಕುಳ ನೀಡುತ್ತಿದ್ದಾರೆ. ಆದರೆ ಅವರ ಹೆಸರನ್ನು ಹೇಳಲು ನಾನು ಇಷ್ಟಪಡುವುದಿಲ್ಲ' ಎಂದು ಕೋಳಿವಾಡ ಹೇಳಿದ್ದಾರೆ.
ಕೋಳಿವಾಡ ಬಾಣದ ಗುರಿ ಯಾರೆಡೆಗೆ?!
"ನಾನು ಹೆಸರನ್ನು ಹೇಳಲು ಬಯಸುವುದಿಲ್ಲ" ಎಂಬ ಕೋಳಿವಾಡ ಅವರ ಹೇಳಿಕೆಯ ಅರ್ಥವೇನು? ಅವರ ಮಾತಿನ ಬಾಣ ಗುರಿ ಇಟ್ಟಿದ್ದು ಯಾರೆಡೆಗೆ ಎಂಬುದು ಈಗಿರುವ ಪ್ರಶ್ನೆ. 2018 ರ ವಿಧಾನಸಭೆ ಚುನಾವಣೆಯಲ್ಲಿ ರಾಣೆಬೆನ್ನೂರು ಕ್ಷೇತ್ರದಲ್ಲಿ ಸೋಲುಂಡ ನಂತರ 'ತಮ್ಮ ಸೋಲಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಕಾರಣ. ಅವರು ಇಲ್ಲಿ ಪ್ರಚಾರಕ್ಕೆ ಬಂದಿರಲಿಲ್ಲ' ಎಂಬ ಹೇಳಿಕೆ ನೀಡಿದ್ದರು. ಕುಮಾರಸ್ವಾಮಿಯವರಿಗೆ ಆಡಳಿತ ನಡೆಸಲು ಸಹಕಾರ ನೀಡದೆ ಇರುವವರು ಸಿದ್ದರಾಮಯ್ಯನವರೇ? ಎಂಬ ಅನುಮಾನ ಕೋಳಿವಾಡ ಹೇಳಿಕೆಯಿಂದ ವ್ಯಕ್ತವಾಗಿದೆ.
ಸಹಕಾರ ನೀಡುತ್ತಿರುವವರು ಯಾರು?
ಕಾಂಗ್ರೆಸ್ಸಿನ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಉಪಮುಖ್ಯಮಂತ್ರಿ ಜಿ ಪರಮೇಶ್ವರ್ ಅವರು ಮೈತ್ರಿ ಸರ್ಕಾರಕ್ಕೆ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ. ಅವರ ಬಗ್ಗೆ ನಾನು ಚಕಾರವೆತ್ತೋಲ್ಲ ಎಂದು ಕೋಳಿವಾಡ ಇದೇ ಸಂದರ್ಭದಲ್ಲಿ ಹೇಳಿದ್ದಾರೆ.
ಸಿದ್ದರಾಮಯ್ಯ ಮೇಲೆ ಮಾತಿನ ದಾಳಿ
ತಮ್ಮ ಸೋಲಿನ ನಂತರ ಪ್ರತಿಕ್ರಿಯೆ ನೀಡಿದ್ದ ಕೋಳಿವಾಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡಿದ್ದರು. ಅವರ ಮೇಲೆ ನೇರವಾಗಿ ಮಾತಿನ ದಾಳಿ ನಡೆಸಿದ್ದ ಕೋಳಿವಾಡ, 'ಸಿದ್ದರಾಮಯ್ಯ ಕಾಂಗ್ರೆಸ್ಸಿನಲ್ಲಿ ಸರ್ವಾಧಿಕಾರಿಯಂತೇ ವರ್ತಿಸುತ್ತಿದ್ದಾರೆ. ತಾನು ಸೋಲುವುದಕ್ಕೂ ಅವರ ಈ ವರ್ತನೆಯೇ ಕಾರಣ. ಪಕ್ಷದ ಕಳಪೆ ಸಾಧನೆಗೂ ಅವರೇ ಕಾರಣ' ಎಂದಿದ್ದರು.
ಬೆಂಬಲ ನೀಡಿದ್ದು ಹೈಕಮಾಂಡ್ ಒತ್ತಡದಿಂದ!
ಮೇ 12 ರಂದು ವಿಧಾನಸಭೆ ಚುನಾವಣೆಯ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಅತಂತ್ರ ವಿಧಾನಸಭೆ ತಲೆದೋರುತ್ತಿದ್ದಂತೆಯೇ, 'ಜೆಡಿಎಸ್ ಪಕ್ಷ ಕಾಂಗ್ರೆಸ್ ಬೆಂಬಲದಿಂದ ಅಧಿಕಾರ ನಡೆಸಲು ನಾವು ಸಹಕಾರ ನೀಡುತ್ತೇವೆ' ಎಂದು ಸ್ವತಃ ಸಿದ್ದರಾಮಯ್ಯ ಹೇಳಿದ್ದರು. ಎಂದೂ ಇಲ್ಲದಂತೆ ಕೈಕಟ್ಟಿ ನಿಂತ ಸಿದ್ದರಾಮಯ್ಯ ಬಾಯಲ್ಲಿ ಉಲಿದ ಈ ಮಾತು ಅವರದಾಗಿರಲಿಲ್ಲ. ಹೈಕಮಾಂಡ್ ಒತ್ತಡದಿಂದ ಅವರು ಈ ಮಾತನ್ನು ಹೇಳಿದ್ದರಷ್ಟೇ ಎಂದು ಸಹ ಕೋಳಿವಾಡ ನೆನಪಿಸಿದ್ದಾರೆ.