ಅರಳಿ ಮರದಲ್ಲಿದ್ದ ಹಾವು 3 ತುಂಡು: ಸರ್ಪದೋಷದ ಭೀತಿ!
ಬೆಂಗಳೂರು, ಜುಲೈ 30: ಉದ್ದೇಶಪೂರ್ವಕವಾಗಿ ನಡೆಯದ ಘಟನೆಯೊಂದರಲ್ಲಿ, ದೇವಸ್ಥಾನದ ಆವರಣದಲ್ಲಿದ್ದ ಅರಳಿ ಮರದ ಕೊಂಬೆಯನ್ನು ತುಂಡರಿಸುವ ವೇಳೆ, ಹಾವೊಂದು ಮೂರು ತುಂಡಾದ ಘಟನೆ ನಡೆದಿದೆ.
ಯಶವಂತಪುರದ ಮುತ್ಯಾಲಮ್ಮ ದೇವಾಲಯದಲ್ಲಿ ಇನ್ನೂರು ವರ್ಷದ ಹಳೆಯ ಅರಳಿ ಮರದ ಕೊಂಬೆಯನ್ನು ತುಂಡರಿಸುತ್ತಿದ್ದ ವೇಳೆ, ಯಂತ್ರಕ್ಕೆ ಸಿಲುಕಿ ಹಾವು ಸಾವನ್ನಪ್ಪಿದೆ.
ಹಾವಿನ ದ್ವೇಷ ಹನ್ನೆರಡು ವರುಷ ಎನ್ನುವ ಆಡು ಮಾತಿನಂತೆ, ಈ ಘಟನೆ ಸ್ಥಳೀಯರಲ್ಲಿ ಸರ್ಪ ದೋಷದ ಆತಂಕ ಮೂಡಿಸಿದೆ. ಜೊತೆಗೆ ಬಿಬಿಎಂಪಿ ಹದಿನೇಳನೇ ವಾರ್ಡ್ (ಜೆ ಪಿ ಪಾರ್ಕ್) ಸದಸ್ಯೆ ಮಮತಾ ಅವರ ಪತಿ ವಾಸುದೇವ್ ಅವರ ವಿರುದ್ದ ಸ್ಥಳೀಯರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಸ್ಥಳೀಯರ ಮನವಿಯಂತೆ ಶಿಥಿಲಗೊಂಡಿದ್ದ ಮರದ ಕೊಂಬೆಯನ್ನು ತುಂಡರಿಸುತ್ತಿದ್ದ ವೇಳೆ, ಸಿಬ್ಬಂದಿಗಳ ಗಮನಕ್ಕೆ ಬಾರದೇ ಈ ಘಟನೆ ನಡೆದಿದೆ. ಇದರಲ್ಲಿ ಯಾರ ತಪ್ಪೂ ಇಲ್ಲ ಎಂದು ರಾಜರಾಜೇಶ್ವರಿ ನಗರ ವಲಯದ ಅರಣ್ಯಾಧಿಕಾರಿ ಸ್ಪಷ್ಟ ಪಡಿಸಿದ್ದಾರೆ.
ಜೂನ್ 29 ರಂದು ಸ್ಥಳೀಯ ಕಾರ್ಪೋರೇಟರ್ ಪತಿ ಮುಂದೆ ನಿಂತು, ಸಿಬ್ಬಂದಿಗಳಿಂದ ಮರದ ಕೊಂಬೆಗಳನ್ನು ಕಡಿಸುತ್ತಿದ್ದರು. ಆ ವೇಳೆ ಈ ಘಟನೆ ನಡೆದಿದೆ. ಬಿಬಿಎಂಪಿ ಸದಸ್ಯೆಯ ಪತಿ ವಿರುದ್ದ ಜಾಲಹಳ್ಳಿ ಠಾಣೆಯಲ್ಲಿ ದೂರು ದಾಖಲಾಗಿದೆ.
ಮರವಿದ್ದ ಜಾಗವನ್ನು ಅತಿಕ್ರಮಿಸಲು ಮರದ ಕೊಂಬೆಯನ್ನು ಕಡಿಯಲಾಗಿದೆ. ಹಾವು ಸತ್ತಿರುವುದು ನಮಗೆಲ್ಲಾ ಆತಂಕವನ್ನು ತಂದಿದೆ ಎನ್ನುವುದು ಸ್ಥಳೀಯರ ಅಭಿಪ್ರಾಯ.