ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ವಿವಿ ಸ್ಥಾಪನೆಗೆ ಸ್ಮೃತಿ ಸಮ್ಮತಿ
ಬೆಂಗಳೂರು, ಮಾರ್ಚ್ 11: ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಕಿಡಿಕಾರಿದ ಸ್ಮೃತಿ, ಕರ್ನಾಟಕದಲ್ಲಿ ಪೊಲೀಸರ ಹೆಂಡತಿಗೇ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದರು.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ ವಿಶ್ವವಿದ್ಯಾಲಯವನ್ನು ಆರಂಭಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ಕೇಂದ್ರ ರಸಗೊಬ್ಬರ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಅನಂತಕುಮಾರ್ ತಿಳಿಸಿದ್ದಾರೆ.
ಬೊಮ್ಮನಹಳ್ಳಿಯಲ್ಲಿ ನೂರಾರು ಮರಗಳ ಸ್ಥಳಾಂತರ : ಅನಂತಕುಮಾರ್
ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮಹಿಳಾ ಮೋರ್ಚಾದ ವತಿಯಿಂದ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಈ ವಿಷಯ ತಿಳಿಸಿದ ಅವರು, ಗಾರ್ಮೆಂಟ್ಸ್ ಹೆಚ್ಚಿರುವ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗಾರ್ಮೆಂಟ್ಸ್ ವಿಶ್ವವಿದ್ಯಾಲಯವನ್ನು ಆರಂಭಿಸಲು ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಸಮ್ಮತಿ ಸೂಚಿಸಿದ್ದಾರೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯೆ ತಾರಾ, ಬಿಜೆಪಿ ಮುಖಂಡರಾದ ಕೆ.ಶಿವರಾಮ್, ಕಾರ್ಪೊರೇಟರ್ ರಾಮಮೋಹನ್ ರಾಜು ಸೇರಿದಂತೆ ಹಲವಾರು ಗಣ್ಯರು ಇದ್ದರು.
ಕಾಂಗ್ರೆಸ್ ಮುಕ್ತ ಭಾರತ ಆಗಬೇಕು
ನನ್ನನ್ನು ಆಯ್ಕೆ ಮಾಡಿ ಲೋಕಸಭೆಗೆ ಕಳುಹಿಸಿ, ಕೇಂದ್ರ ಸರ್ಕಾರದಲ್ಲಿ ಮಂತ್ರಿಯಾಗಲು ಕಾರಣರಾಗಿರುವ ಎಲ್ಲಾ ಮತದಾರರ ಸೇವೆಯನ್ನು ಕೊನೆ ಉಸಿರು ಇರುವವರೆಗೆ ಮಾಡುತ್ತೇನೆ ಎಂದು ಹೇಳಿದ ಅವರು, ಕಾಂಗ್ರೆಸ್ ಮುಕ್ತ ಭಾರತ ಆಗಬೇಕೆಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.
ಇದಕ್ಕಾಗಿ ಕಾಂಗ್ರೆಸ್ ಮುಕ್ತ ಬೊಮ್ಮನಹಳ್ಳಿ, ಕಾಂಗ್ರೆಸ್ ಮುಕ್ತ ಬೆಂಗಳೂರು ಮತ್ತು ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡಬೇಕಿದೆ. ಅದೇ ರೀತಿ, ಉತ್ತರಪ್ರದೇಶದಲ್ಲಿ ರಾಹುಲ್ಗಾಂಧಿ ಮುಕ್ತ ಅಮೇಥಿಯನ್ನು ಮಾಡಬೇಕಿದೆ ಎಂದು ಕರೆನೀಡಿದರು.
ಸತೀಶ್ರೆಡ್ಡಿ ಇಟಲಿಯಲ್ಲಿ ಹುಟ್ಟಿಲ್ಲ. ಬೊಮ್ಮನಹಳ್ಳಿಯಲ್ಲಿ ಹುಟ್ಟಿ ಬೆಳೆದವರು. ದೇಶದಲ್ಲಿ ವಂಶಪಾರಂಪರ್ಯ ಆಡಳಿತ ಬೇಡವಾಗಿದೆ. ಥಾಯ್ಲೆಂಡಿಗೆ ಧ್ಯಾನ ಮಾಡಲು ಹೋಗಿದ್ದೆ ಎಂದು ರಾಹುಲ್ ಗಾಂಧಿ ಹೇಳಿಕೆ ನೀಡಿದ್ದರು. ಆದರೆ, ಥಾಯ್ಲೆಂಡ್, ಸಿಂಗಾಪೂರಕ್ಕೆ ಹೋಗುವುದು ಮಜಾ ಮಾಡಿ ಬರಲು ಎಂದು ಅನಂತಕುಮಾರ್ ವ್ಯಂಗ್ಯವಾಡಿದರು.
ಇಂದು ಮಹಿಳೆಯರಿಗೆ ರಕ್ಷಣೆಗೆ ಬಾರದ ಸಿದ್ದರಾಮಯ್ಯ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಗೆಯಬೇಕಿದೆ. ಜನರ ಸೇವೆಗಾಗಿ ಇರುವ ನರೇಂದ್ರ ಮೋದಿ, ಯಡಿಯೂರಪ್ಪ, ಅಶೋಕ, ನಾನು ಸೇರಿದಂತೆ ಇಡೀ ಬಿಜೆಪಿ ಟೊಂಕ ಕಟ್ಟಿ ನಿಂತಿದೆ. ಅದೇರೀತಿ ರಾಜ್ಯಾದ್ಯಂತ ಬಿಜೆಪಿ ಪರವಾದ ಅಲೆ ಇದೆ. ಈ ಹಿನ್ನೆಲೆಯಲ್ಲಿ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬೆಂಗಳೂರಿನಲ್ಲಿ 25 ಸೀಟು, ರಾಜ್ಯದಲ್ಲಿ ೧೫೦ ಸೀಟು ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.
ತಲೆ ತಗ್ಗಿಸುವ ವಿಚಾರ
ಕೇಂದ್ರ ಜವಳಿ ಖಾತೆ ಸಚಿವೆ ಸ್ಮೃತಿ ಇರಾನಿ ಅವರು ಮಾತನಾಡಿ, ಕರ್ನಾಟಕದಲ್ಲಿ ಪೊಲೀಸರ ಹೆಂಡತಿಗೇ ರಕ್ಷಣೆ ಇಲ್ಲದಂತಹ ಪರಿಸ್ಥಿತಿ ನಿರ್ಮಾಣವಾಗಿರುವುದು ಎಲ್ಲರೂ ತಲೆ ತಗ್ಗಿಸುವಂತಹ ವಿಚಾರವಾಗಿದೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
ಕಾಂಗ್ರೆಸ್ನ ಹಿರಿಯ ನಾಯಕರಾಗಿದ್ದ ಜವಾಹರ್ಲಾಲ್ ನೆಹರೂ ಅವರು ಅಮೇಥಿಯಲ್ಲಿ ಲೋಕಸಭೆ ಚುನಾವಣೆ ವೇಳೆ ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿ ರೈಲು ಸಂಚಾರ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು. ಮತದಾರರಿಂದ ಮತವನ್ನೂ ಪಡೆದು ಗೆದ್ದರು. ಆದರೆ, ರೈಲು ಬರಲಿಲ್ಲ. ನಂತರ ಇಂದಿರಾಗಾಂಧಿ ಅವರು ಬಂದು ರೈಲು ಕೊಡುತ್ತೇನೆ ಎಂದು ಗೆಲುವು ಸಾಧಿಸಿದರು.
ಆದರೆ, ರೈಲಂತೂ ಬರಲೇ ಇಲ್ಲ. ಇದೀಗ ರಾಹುಲ್ ಗಾಂಧಿ ಅವರೂ ಇದೇ ಭರವಸೆ ಹೇಳಿದ್ದರು. ಅವರೂ ರೈಲು ಕೊಡಲಿಲ್ಲ. ಅಮೇಥಿಗೆ ರೈಲು ಸಂಚಾರ ಬರಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರೇ ಬರಬೇಕಾಯಿತು ಎಂದು ಪರೋಕ್ಷವಾಗಿ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
7 ವರ್ಷಗಳಲ್ಲಿ ಒಂದೇ ಒಂದು ಮಾರ್ಗವನ್ನು ಆರಂಭಿಸಲು ಕಾಂಗ್ರೆಸ್ ಪಕ್ಷಕ್ಕೆ ಸಾಧ್ಯವಾಗಲಿಲ್ಲ ಎಂದು ಹೇಳಿದ ಸ್ಮೃತಿ ಇರಾನಿ, ಇದು ಕಾಂಗ್ರೆಸ್ ಪಕ್ಷದ ಆಡಳಿತ ವ್ಯವಸ್ಥೆ ಎಂದು ವ್ಯಂಗ್ಯವಾಡಿದರು.
ಮಹಿಳೆಯರನ್ನು ಗೌರವಿಸುವುದು ಬಿಜೆಪಿಯ ಸಂಸ್ಕಾರ
ಮಹಿಳೆಯರನ್ನು ಗೌರವಿಸುವುದು ನಮ್ಮ ಬಿಜೆಪಿಯ ಸಂಸ್ಕಾರವಾಗಿದೆ. ಗುಜರಾತ್ ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಶಾಸಕರು ಬೆಂಗಳೂರಿನ ರೆಸಾರ್ಟ್ನಲ್ಲಿ ಬಂದು ಮೋಜು ಮಾಡಿದ್ದರು. ಅಲ್ಲಿ ಗುಜರಾತಿನಲ್ಲಿ ನಮ್ಮ ಕಾರ್ಯಕರ್ತರು ಹಳ್ಳಿ ಹಳ್ಳಿಗಳಿಗೆ ಹೋಗಿ ಜನ ಸಾಮಾನ್ಯರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು ಎಂದು ಹೇಳಿದರು.
ಪೊಲೀಸರ ಹೆಂಡತಿಯ ಸರವನ್ನೇ ಕಿತ್ತುಕೊಂಡು ಹೋಗಿದ್ದಾರೆ. ಇಲ್ಲಿ ಜನಸಾಮಾನ್ಯರಿಗೆ ರಕ್ಷಣೆ ನೀಡುವ ಪೊಲೀಸರಿಗೇ ರಕ್ಷಣೆ ಇಲ್ಲದಂತಾಗಿದೆ. ಇಂತಹ ಪರಿಸ್ಥಿತಿಯನ್ನು ಸೃಷ್ಟಿಸಿರುವ ಕಾಂಗ್ರೆಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಬೇಕಾಗಿದೆ. ಇದಕ್ಕಾಗಿ ಎಲ್ಲರೂ ಕೈಜೋಡಿಸಿ ಎಂದು ಕರೆ ನೀಡಿದರು.
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಐತಿಹಾಸಿಕ ತ್ರಿವಳಿ ತಲಾಖ್ ನಿಷೇಧಿಸುವ ಮೂಲಕ ದೇಶದಲ್ಲಿ ಶೋಷಣೆಗೆ ಒಳಗಾಗಿದ್ದ ನಮ್ಮ ಮುಸ್ಲಿಂ ಸಹೋದರಿಯರ ನೆರವಿಗೆ ಬಂದಿದೆ.
ಲೋಕಸಭೆಯಲ್ಲಿ ಅನುಮೋದನೆಗೊಂಡ ತ್ರಿವಳಿ ತಲಾಖ್ ಮಸೂದೆಗೆ ರಾಹುಲ್ ಗಾಂಧಿ ನೇತೃತ್ವದ ಕಾಂಗ್ರೆಸ್ ಪಕ್ಷ ರಾಜ್ಯಸಭೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದುದು ವಿಷಾದನೀಯ ಎಂದರು.
ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ ಅವರು ಮಾತನಾಡಿ, ನಾವು ಬಿಜೆಪಿಗೋಸ್ಕರ ಪಾದಯಾತ್ರೆ ಮಾಡುತ್ತಿಲ್ಲ. ನಗರದಲ್ಲಿ ಮಹಿಳೆಯರಿಗೆ ರಕ್ಷಣೆ ಇಲ್ಲದಂತಾಗಿದೆ. ಮಹಿಳೆಯರಿಗಷ್ಟೇ ಅಲ್ಲ. ಪೊಲೀಸರಿಗೂ ರಕ್ಷಣೆ ಇಲ್ಲದಂತಹ ಪರಿಸ್ಥಿತಿಯನ್ನು ರಾಜ್ಯದ ಕಾಂಗ್ರೆಸ್ ಸರ್ಕಾರ ತಂದೊಡ್ಡಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ರಕ್ಷಣೆಗಾಗಿ ಬಿಜೆಪಿ ಬೆಂಗಳೂರು ರಕ್ಷಿಸಿ ಎಂಬ ಪಾದಯಾತ್ರೆಯನ್ನು ನಡೆಸುತ್ತಿದೆ.
ಎಲ್ಲರಿಗೂ ರಕ್ಷಣೆ ನೀಡಲು ಬಿಜೆಪಿ ಬದ್ಧತೆ
ನಗರದಲ್ಲಿ ಮಹಿಳೆಯರು ಸೇರಿದಂತೆ ಎಲ್ಲಾ ಜನರು ನೆಮ್ಮದಿಯ ಜೀವನ ನಡೆಸಬೇಕೆಂಬುದು ನಮ್ಮ ಆಶಯವಾಗಿದೆ. ಮೊಹ್ಮದ್ ನಲಪಾಡ್, ಪೆಟ್ರೋಲ್ ನಾರಾಯಣಸ್ವಾಮಿ ಅವರಂತಹ ಪ್ರಕರಣಗಳನ್ನು ಗಮನಿಸಿದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸರ್ಕಾರ ಎಂತಹ ಗೂಂಡಾಗಿರಿ ಸರ್ಕಾರ ಎಂಬುದು ತಿಳಿಯುತ್ತದೆ. ಹೀಗಾಗಿ ರಕ್ಷಣೆ ಕೊಡದ ಇಂತಹ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯಬೇಕಿದೆ. ಎಲ್ಲರಿಗೂ ರಕ್ಷಣೆ ನೀಡಲು ಬಿಜೆಪಿ ಬದ್ಧತೆ ಹೊಂದಿರುವ ಬಿಜೆಪಿಗೆ ಮತ ನೀಡಿ ಗೆಲ್ಲಿಸಬೇಕಾದ ಹೊಣೆ ನಿಮ್ಮದಾಗಿದೆ ಎಂದು ಮನವಿ ಮಾಡಿದರು.
ಶಾಸಕ ಸತೀಶ್ರೆಡ್ಡಿ ಮಾತನಾಡಿ, ಕಳೆದ ೩೦-೪೦ ವರ್ಷಗಳಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದಂತಹ ಕೆಟ್ಟ ಸರ್ಕಾರವನ್ನು ನೋಡಿಯೇ ಇಲ್ಲ. ಬೊಮ್ಮನಹಳ್ಳಿ ಜನತೆ ಕಷ್ಟದಲ್ಲಿದ್ದಾಗ ಬಿಜೆಪಿ ಶಾಸಕರು ಮತ್ತು ಕಾರ್ಪೊರೇಟರ್ಗಳು ಇದ್ದಾರೆ ಎಂಬ ಕಾರಣಕ್ಕೆ ಕಾಂಗ್ರೆಸ್ ಸರ್ಕಾರ ಅನುದಾನ ಮತ್ತು ಇತರೆ ಯೋಜನೆಗಳನ್ನು ನೀಡುವಲ್ಲಿ ತಾರತಮ್ಯ ಮಾಡಿದೆ ಎಂದು ಆರೋಪಿಸಿದರು.
ಸಿದ್ದರಾಮಯ್ಯ ಸರ್ಕಾರ ಜನರ ಶ್ರೇಯೋಭಿವೃದ್ಧಿಗೆ ಹಣ ಖರ್ಚು ಮಾಡುವ ಬದಲು ಜಾಹೀರಾತಿಗೆಂದು ಕೋಟಿಗಟ್ಟಲೆ ಹಣ ವ್ಯಯ ಮಾಡುತ್ತಿದೆ ಎಂದು ಆರೋಪಿಸಿದ ಅವರು, ಮಹಿಳೆಯರ ಸಬಲೀಕರಣ ಮತ್ತು ಭದ್ರತೆ ನಮ್ಮ ಪಕ್ಷದ ಉದ್ದೇಶವಾಗಿದೆ. ಈ ಕಾರಣದಿಂದ ಕಾಂಗ್ರೆಸ್ ಮುಕ್ತ ಕರ್ನಾಟಕ ನಿರ್ಮಾಣ ಮಾಡಬೇಕಾದರೆ ಬಿಜೆಪಿಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ತಿನ ಸದಸ್ಯೆ ತಾರಾ, ಬಿಜೆಪಿ ಮುಖಂಡರಾದ ಕೆ.ಶಿವರಾಮ್, ಕಾರ್ಪೊರೇಟರ್ ರಾಮಮೋಹನ್ ರಾಜು ಸೇರಿದಂತೆ ಹಲವಾರು ಗಣ್ಯರು ಇದ್ದರು.