6 ತಿಂಗಳ ಬಳಿಕ ಮೋದಿ ಒಬ್ಬ ಸಾಮಾನ್ಯ ಸಂಸದ ಅಷ್ಟೇ: ಪ್ರಕಾಶ್ ರೈ
ಬೆಂಗಳೂರು, ಜನವರಿ 18: 'ಇನ್ನೂ 50 ವರ್ಷಗಳವರೆಗೂ ತಾವೇ ಅಧಿಕಾರದಲ್ಲಿ ಇರುತ್ತೇವೆ ಎಂದು ಬಿಜೆಪಿಯವರು ಹೇಳಿಕೊಳ್ಳುವ ದಾರ್ಷ್ಟ್ಯ ಪ್ರದರ್ಶಿಸುತ್ತಾರೆ. ಅವರು ಯಾರು? ದೇಶದ ಪ್ರಜೆಗಳು ನಿರ್ಧರಿಸುತ್ತಾರೆ' ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಲೋಕಸಭೆ ಚುನಾವಣೆಗೆ ಸ್ವತಂತ್ರ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದಾಗಿ ಪ್ರಕಟಿಸಿರುವ ಪ್ರಕಾಶ್ ರೈ, ಆಮ್ ಆದ್ಮಿ ಪಕ್ಷದ ಬೆಂಬಲ ಪಡೆದುಕೊಂಡಿದ್ದಾರೆ.
ಪ್ರಕಾಶ್ ರೈ ಪರವಾಗಿ ಎಎಪಿ ಕಾರ್ಯಕರ್ತರು ಕೆಲಸ ಮಾಡಲು ಆರಂಭಿಸಿದ್ದಾರೆ. ತಮ್ಮ ಸೈದ್ಧಾಂತಿಕ ದೃಷ್ಟಿಕೋನವು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರೊಂದಿಗೆ ಹೊಂದಾಣಿಕೆಯಾಗುತ್ತದೆ ಎಂದು ಪ್ರಕಾಶ್ ರೈ ಹೇಳಿಕೊಂಡಿದ್ದಾರೆ. ರೈ ಮತ್ತು ಕೇಜ್ರಿವಾಲ್ ಜ.10ರಂದು ಭೇಟಿಯಾಗಿದ್ದರು.
ಲೋಕಸಭಾ ಚುನಾವಣೆಗೆ ಸ್ಪರ್ಧೆ: ಕ್ಷೇತ್ರ ಫೈನಲ್ ಮಾಡಿದ ಪ್ರಕಾಶ್ ರೈ
ತಮ್ಮ ಅಭ್ಯರ್ಥಿತನ, ಸಿದ್ಧಾಂತ ಹಾಗೂ ರಾಜಕೀಯ ಅಭಿಪ್ರಾಯಗಳ ಬಗ್ಗೆ ಪ್ರಕಾಶ್ ರೈ 'ದಿ ಪ್ರಿಂಟ್' ಮಾಧ್ಯಮದೊಂದಿಗೆ ನಡೆಸಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ. ಆ ಸಂದರ್ಶನದ ಆಯ್ದ ಭಾಗ ಇಲ್ಲಿದೆ.
ಜಾತ್ಯಾತೀತರೆನಿಸಿದವರು ಬೆಂಬಲಿಸಬಹುದು
ದೇಶದ ರಾಜಕಾರಣಿಗಳಿಗೆ ತಾವು ಜನರಿಗೆ ಹೊಣೆಗಾರರಾಗಿದ್ದೇವೆ ಎಂಬುದು ತಿಳಿಯುವ ಸಮಯ ಈಗ ಬಂದಿದೆ.
ಜಾತ್ಯತೀಯರೆನಿಸಿದ ಯಾರೇ ಆದರೂ ನನ್ನನ್ನು ಬೆಂಬಲಿಸಬಹುದು. ಆದರೆ, ಪಕ್ಷಕ್ಕೆ ಸೇರ್ಪಡೆಯಾಗುವಂತೆ ಆಹ್ವಾನಿಸುವ ಮೂಲಕ ನನ್ನ ಅಸ್ಮಿತೆಯನ್ನು (ಐಡೆಂಟಿಟಿ) ಕಿತ್ತುಕೊಳ್ಳಲು ಪ್ರಯತ್ನಿಸಬೇಡಿ ಎಂದು ಪ್ರಕಾಶ್ ರೈ ಹೇಳಿದ್ದಾರೆ.
ಪ್ರಕಾಶ್ ರಾಜ್ ಸ್ಪರ್ಧೆ : ಬೆಂಗಳೂರು ಸೆಂಟ್ರಲ್ನ ರಾಜಕೀಯ ಚಿತ್ರಣ
ಮೋದಿ ಆರು ತಿಂಗಳ ಬಳಿಕ ಸಂಸದ
ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಜೆಪಿ ವಿರುದ್ಧ ಬಹಿರಂಗವಾಗಿ ನಿರಂತರ ವಾಗ್ದಾಳಿ ನಡೆಸಿದ್ದ ಪ್ರಕಾಶ್ ರೈ, ತಾವು ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿರುವುದು ಜನರು ತಮ್ಮ ಧ್ವನಿ ಎತ್ತಲು ಮತ್ತು ಸರ್ಕಾರವನ್ನು ಯಾವುದೇ ಭಯವಿಲ್ಲದೆ ಪ್ರಶ್ನಿಸಲು ನೆರವಾಗಲಿದೆ ಎಂದಿದ್ದಾರೆ.
'ಇದು ಮೋದಿ ಅವರ ಬಗ್ಗೆ ಅಲ್ಲ. ಯಾರು ಅವರು? ಆರು ತಿಂಗಳು ಕಳೆದ ಬಳಿಕ ಅವರು ಕೇವಲ ಮತ್ತೊಬ್ಬ ಸಂಸದನಾಗಿರುತ್ತಾರಷ್ಟೇ. ಬಿಜೆಪಿಯವರಲ್ಲಿ ಇನ್ನೂ ಐವತ್ತು ವರ್ಷ ಇಲ್ಲಿ ಆಳ್ವಿಕೆ ನಡೆಸುತ್ತೇವೆ ಎನ್ನುವ ದಾರ್ಷ್ಟ್ಯತನವಿದೆ. ಅವರು ಯಾರು? ದೇಶದ ನಾಗರಿಕರು ಅದನ್ನು ನಿರ್ಧರಿಸುತ್ತಾರೆ' ಎಂದಿದ್ದಾರೆ.
ಮೋದಿ ವಿರುದ್ಧದ ತಮ್ಮ ಹೇಳಿಕೆಗಳು ವೈಯಕ್ತಿಕವಲ್ಲ ಎಂದು ರೈ ತಿಳಿಸಿದ್ದಾರೆ.
ಮಹಿಳೆಯರ ಬಗ್ಗೆ ರಾಹುಲ್ ಗಾಂಧಿ ಹೇಳಿಕೆಗೆ ವಾಗ್ದಾಳಿ; ಬೆಂಬಲಕ್ಕೆ ನಿಂತ ಪ್ರಕಾಶ್ ರೈ
ಮೋದಿಯನ್ನು ಪ್ರಶ್ನಿಸಿದ ರೈ
ಅವರನ್ನು ಚುನಾಯಿಸಿದಾಗ ನಮಗೆ ಅವರು ಇಷ್ಟವಾಗಲಿಲ್ಲ. ಅಂದರೆ, ಅವರು ಪ್ರಧಾನಿಯಾದಾಗ ನಾವು ದ್ವೇಷಿಸಿದ್ದೇವೆ ಎಂದಲ್ಲ. ಆದರೆ, ಅವರು ಭರವಸೆ ನೀಡಿದ ಉದ್ಯೋಗಗಳಿಗೆ ಏನಾದವು? ಕೃಷಿಯ ಸಮಸ್ಯೆಗಳು ಮತ್ತು ಅಪನಗದೀಕರಣದ ಬಗ್ಗೆ ಏನು? ಸೂಕ್ತವಾದ ಸಿದ್ಧತೆಯಿಲ್ಲದೆ ಜಿಎಸ್ಟಿಯನ್ನು ಏಕೆ ಜಾರಿಗೊಳಿಸಲಾಯಿತು? ನಾವು ಅದನ್ನು ತಪ್ಪು ಎಂದು ಹೇಳುತ್ತಿಲ್ಲ. ಆದರೆ ಅವರು ಅದನ್ನು 200 ಬಾರಿ ಬದಲಿಸಿದ್ದಾರೆ ಎಂದು ರೈ ಕಿಡಿಕಾರಿದರು.
ತನ್ನ ನಿರ್ಧಾರಗಳ ಮೂಲಕ ಬಿಜೆಪಿ ಜನರ ಬದುಕಿನ ಮೇಲೆ ಪ್ರಯೋಗ ನಡೆಸುತ್ತಿದೆ. ನಮಗೆ ಪರಿಹಾರಗಳು ಬೇಕು. ನಮಗೆ ವೈಜ್ಞಾನಿಕ ಮನೋಭಾವ ಬೇಕು. ಈಗಾಗಲೇ ಹಾಳುಗೆಡುವುದನ್ನು ಮಾಡಿಯಾಗಿದೆ.
ಬೆಂಗಳೂರು ಕೇಂದ್ರ ಕ್ಷೇತ್ರ ಏಕೆ?
ನಾನು ಇಲ್ಲಿ ಹುಟ್ಟಿದೆ ಎಂಬ ಕಾರಣಕ್ಕೆ ಬೆಂಗಳೂರು ಕೇಂದ್ರ ಕ್ಷೇತ್ರವನ್ನು ಆಯ್ದುಕೊಳ್ಳಲಿಲ್ಲ. ಆದರೆ, ಅದು ನನಗೆ ಮಿನಿ ಭಾರತ ಇದ್ದ ಹಾಗೆ. ಇಲ್ಲಿ ಮುಸ್ಲಿಮರು, ಕ್ರೈಸ್ತರು, ದಲಿತರು, ಹಿಂದೂ ಧರ್ಮೀಯರು ಮತ್ತು ಕನ್ನಡ, ತಮಿಳು, ಮಲಯಾಳಂ ಹಾಗೂ ತೆಲುಗು ಭಾಷಿಕ ಜನರಿದ್ದಾರೆ. ಅವರು ನನ್ನನ್ನು ಕೇವಲ ನಟನನ್ನಾಗಿ ನೋಡಿಲ್ಲ. ಸಾಮಾಜಿಕ ವಿಚಾರಗಳಲ್ಲಿ ನಾನು ಹೇಗೆ ಹೆಜ್ಜೆ ಇರಿಸಿದ್ದೇನೆ ಎಂಬುದನ್ನು ಕೂಡ ಅವರು ನೋಡಿದ್ದಾರೆ. ನಾನು ಅವರಿಗೆ ನಟನಾಚೆಗೂ ಇದ್ದೇನೆ.
ಸಾಲಮನ್ನಾದಿಂದ ಹಾನಿಯೇ ಹೆಚ್ಚು
ರೈತರ ಸಾಲಮನ್ನಾವು ಸೋಗಿನ ಮತ್ತು ಓಲೈಕೆಯ ತೀರ್ಮಾನ. ಇದರಿಂದ ರೈತರಿಗೆ ಆಗುವ ಹಾನಿಯೇ ಹೆಚ್ಚು. ನಾವು ನಮ್ಮ ರೈತರನ್ನು ಸಬಲರನ್ನಾಗಿ ಮಾಡಬೇಕು. ನೀವೇಕೆ ಇನ್ನೂ ಶೈತ್ಯಾಗಾರಗಳನ್ನು ಹಾಗೂ ಕೃಷಿ ಕಾಲೋನಿಗಳನ್ನು ತಂದಿಲ್ಲ? ಕೃಷಿ ಸಮಸ್ಯೆಯು ಕೇವಲ ಬೆಳೆಯುವುದಕ್ಕೆ ಸಂಬಂಧಿಸಿದ್ದಲ್ಲ. ಆರೋಗ್ಯ, ಶಿಕ್ಷಣದಂತಹ ಸಮಸ್ಯೆಗಳೂ ರೈತನೊಂದಿಗಿದೆ. ಇದು ನೀರು ಅಥವಾ ಮಳೆಯಷ್ಟೇ ಅಲ್ಲ.
ತೆಲಂಗಾಣದಲ್ಲಿ ಮುಖ್ಯಮಂತ್ರಿ ಕೆ.ಸಿ. ಚಂದ್ರಶೇಖರ್ ರಾವ್ ರೈತರಿಗೆ ಕುರಿಗಳನ್ನು ನೀಡಿದ್ದಾರೆ. ನಾಲ್ಕು ವರ್ಷಗಳಲ್ಲಿ ರಾಜ್ಯವು ಕುರಿಗಳನ್ನು ಆಮದು ಮಾಡಿಕೊಳ್ಳುವುದನ್ನು ನಿಲ್ಲಿಸಿ ರಫ್ತು ಮಾಡುವುದನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಸುವ ಮಾದರಿ ಇದು ಎಂದು ರೈ ಹೇಳಿದ್ದಾರೆ.