ರಾಜ್ಯ ಬಜೆಟ್ ನಂತರ ಕೆಂಪೇಗೌಡ ಬಡಾವಣೆ ನಿವೇಶನ ಹಂಚಿಕೆ
ಬೆಂಗಳೂರು, ಜೂನ್ 29: ನಾಡಪ್ರಭು ಕೆಂಪೇಗೌಡ ಬಡಾವಣೆಯ ಎರಡನೇ ಬಾರಿಯ ನಿವೇಶನ ಹಂಚಿಕೆ ಪ್ರಕ್ರಿಯೆ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಿಂತಿತ್ತು. ನಿವೇಶನ ಹಂಚಿಕೆ ಕರಡನ್ನು ರಾಜ್ಯ ಬಜೆಟ್ ಬಳಿಕ ಪ್ರಕಟಿಸುವ ನಿರೀಕ್ಷೆ ಇದೆ.
ಮೊದಲು ವಿಧಾನಸಭೆ ಚುನಾವಣೆ ನೀತಿ ಸಂಹಿತೆ ಹಿನ್ನೆಲೆಯಲ್ಲಿ ಮುಂದೂಡಲಾಗಿತ್ತು, ನಂತರ ಆರ್ಆರ್ ನಗರ, ಜಯನಗರ ಚುನಾವಣೆಯ ಕಾರಣ ನೀಡಲಾಗಿತ್ತು. ಇದೀಗ ಎಲ್ಲಾ ಅಡ್ಡಿಗಳು ನಿವಾರಣೆಯಾಗಿದೆ. ಶೀಘ್ರ ಪಟ್ಟಿಯನ್ನು ಬಿಡುಗಡೆ ಮಾಡಲು ಪ್ರಾಧಿಕಾರ ನಿರ್ಧರಿಸಿದೆ.
ಕೆಂಪೇಗೌಡ ಬಡಾವಣೆ: ನಿವೇಶನ ಹಂಚಿಕೆ ಪ್ರಕ್ರಿಯೆ ಮತ್ತಷ್ಟು ವಿಳಂಬ
ಈಗಾಗಲೇ ಅರ್ಜಿ ಪರಿಶೀಲನೆ ನಡೆಸುತ್ತಿದೆ., ಹಂಚಿಕೆ ಸಮಿತಿ ಒಪ್ಪಿಗೆ ನೀಡಿದೆ. ಇದಕ್ಕೆ ಮಂಡಳಿ ಸಭೆಯಲ್ಲೂ ಅನುಮೋದನೆ ಪಡೆದಿದ್ದು, ಕೊನೆಯ ಹಂತದ ಕೆಲಸ ಶೀಘ್ರ ಪೂರ್ಣಗೊಳ್ಳಲಿದೆ. ವಾರದೊಳಗೆ ಕರಡು ಪಟ್ಟಿ ಪ್ರಕಟಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವರ್ಷದಿಂದ ಅರ್ಜಿಗಳ ಪರಿಶೀಲನೆಗೆ ದೀರ್ಘ ಸಮಯ ಹಿಡಿದಿದೆ. ಅರ್ಜಿದಾರರು ಠೇವಣಿ ಹಣ ಪಾವತಿಸಿದ್ದರೂ, ಕಾಲಮಿತಿಯಲ್ಲಿ ಹಂಚಿಕೆ ಪ್ರಕ್ರಿಯೆ ಪೂರ್ಣಗೊಳಿಸಲು ಪ್ರಾಧಿಕಾರಕ್ಕೆ ಸಾಧ್ಯವಾಗಿರಲಿಲ್ಲ, ಮೊದಲ ಹಂತದಲ್ಲಿ ಐದು ಸಾವಿರ ನಿವೇಶನ ಹಂಚಿಕೆಗೆ ಎರಡು ವರ್ಷ ಹಿಡಿದಿತ್ತು.
ಎರಡನೇ ಹಂತದಲ್ಲೂ ಅಷ್ಟೇ ಸಂಖ್ಯೆಯ ಸೈಟ್ ಹಂಚಿಕೆ ವೇಳೆ ವಿಳಂಬ ಮಾಡುವುದಿಲ್ಲ ಎಂಬ ವಾಗ್ದಾನ ಹುಸಿಯಾಗಿದೆ. ವಿಳಂಬಕ್ಕಾಗಿ ಸಾರ್ವಜನಿಕರು ಕಚೇರಿಗೆ ಕರೆ ಮಾಡಿದರೂ ಸರಿಯಾದ ಉತ್ತರ ಸಿಗುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರೆ.