ಬೇಲೇಕೇರಿ ಬಂದರು ಎಸ್ ಐಟಿಯಿಂದ ಮರು ತನಿಖೆ
ಬೆಂಗಳೂರು, ನವೆಂಬರ್ 04: ಉತ್ತರಕನ್ನಡದ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಕಬ್ಬಿಣದ ಅದಿರನ್ನು ವಿದೇಶಕ್ಕೆ ಸಾಗಿಸಿದ ಪ್ರಕರಣದ ತನಿಖೆಯನ್ನು ವಿಶೇಷ ತನಿಖಾ ದಳಕ್ಕೆ (ಎಸ್ಐಟಿ) ಒಪ್ಪಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಮೂಲಕ ಬಿಜೆಪಿಯ ನಾಯಕರಿಗೆ ಸರಿಯಾದ ಆಘಾತ ಉಂಟು ಮಾಡಲು ಸಿದ್ದರಾಮಯ್ಯ ಸಿದ್ಧತೆ ನಡೆಸಿದ್ದಾರೆ.
ಅಕ್ರಮ ಗಣಿಗಾರಿಕೆ ಮತ್ತು ಅದಿರು ಸಾಗಣೆ ಪ್ರಕರಣದ ತನಿಖೆಯ ಮೇಲುಸ್ತುವಾರಿಗಾಗಿ ರಚಿಸಿರುವ ಸಚಿವ ಸಂಪುಟ ಉಪ ಸಮಿತಿ ಅಧ್ಯಕ್ಷ, ಪಂಚಾಯತ್ ರಾಜ್ ಸಚಿವ ಎಚ್.ಕೆ. ಪಾಟೀಲ ಈ ಸುಳಿವು ನೀಡಿದರು. ಶನಿವಾರ ಸಂಜೆ ವೇಳೆಗೆ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆಯಿದೆ.
ಅಕ್ರಮ ಗಣಿಗಾರಿಕೆ ಬಗ್ಗೆ ತನಿಖೆ ನಡೆಸಿದ್ದ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ, ಕರ್ನಾಟಕದಲ್ಲಿ ನಡೆದ ಅದಿರು ಲೂಟಿಯ ಬ್ರಹ್ಮಾಂಡವನ್ನು ಬಯಲಿಗೆ ಎಳೆದಿದ್ದರು. ಅವರ ವರದಿ ಆಧರಿಸಿ ಅನೇಕ ಪ್ರಕರಣಗಳನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು. 15 ಪ್ರಕರಣಗಳ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಈಗ ಎರಡು ಪ್ರಕರಣಗಳ ತನಿಖೆಯನ್ನು ಮುಕ್ತಾಯಗೊಳಿಸಿದೆ. ಇದರ ಬಗ್ಗೆ ಸಮಿತಿ ಸಭೆಯಲ್ಲಿ ಚರ್ಚಿಸಲಾಗಿದೆ. ಎಸ್ಐಟಿ ತನಿಖೆ ನಡೆಸುವ ಬಗ್ಗೆ ಸಚಿವ ಸಂಪುಟಕ್ಕೆ ಶಿಫಾರಸು ಮಾಡಲಾಗುವುದು ಎಂದು ಎಚ್.ಕೆ. ಪಾಟೀಲ ತಿಳಿಸಿದರು.
ಗಾಲಿ ಜನಾರ್ದನ ರೆಡ್ಡಿ ಆರೋಪಿ ನಂ.1
ಬೇಲೇಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರಥಮ ಆರೋಪಿ ಎಂದು ಸಿಬಿಐ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಶಾಸಕರಾದ ಸತೀಶ್ ಸೈಲ್, ನಾಗೇಂದ್ರ, ಸುರೇಶ್ಬಾಬು, ಆನಂದ್ಸಿಂಗ್ ವಿರುದ್ಧವೂ ಚಾರ್ಜ್ಶೀಟ್ ಸಲ್ಲಿಸಲಾಗಿತ್ತು. ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಸೇರಿದಂತೆ 18 ಮಂದಿಯನ್ನು ಇದರಲ್ಲಿ ಉಲ್ಲೇಖಿಸಲಾಗಿತ್ತು. ನಂತರ ಎಲ್ಲರಿಗೂ ಜಾಮೀನು ಸಿಕ್ಕಿದ್ದು, ಸಿಬಿಐ ಕೂಡಾ ಈ ಪ್ರಕರಣದ ತನಿಖೆ ಕೈಬಿಟ್ಟಿದೆ.
ಆಸ್ತಿ ಮುಟ್ಟುಗೋಲು ಹಾಕುವ ಸಾಧ್ಯತೆ
‘ಅಕ್ರಮವಾಗಿ ಅದಿರು ಸಾಗಿಸಿದ ಆರೋಪ ಹೊತ್ತಿರುವವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆಯೂ ಉಪ ಸಮಿತಿ ಚರ್ಚಿಸಿದೆ. ಮುಟ್ಟುಗೋಲು ಹಾಕಿಕೊಳ್ಳಲು ತಾಂತ್ರಿಕ ಹಾಗೂ ಕಾನೂನಾತ್ಮಕ ಅಡಚಣೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಹೀಗಾಗಿ, ಕಾನೂನು ಇಲಾಖೆಯಿಂದ ಅಭಿಪ್ರಾಯ ಕೇಳಲಾಗಿದ್ದು, ಕಾನೂನು ಇಲಾಖೆಯ ಅಭಿಪ್ರಾಯ ಆಧರಿಸಿ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ನಿರ್ಧರಿಸಲಾಗುತ್ತದೆ.
ಅಪಾರ ಪ್ರಮಾಣದ ಅಕ್ರಮ ಪತ್ತೆ
ನವ ಮಂಗಳೂರಿನ ಬಂದರಿನಿಂದ 54, ಬೇಲೇಕೇರಿ ಬಂದರಿನಿಂದ 76 ಒಟ್ಟು 130 ಕಂಪನಿಗಳು ಈ ಅಕ್ರಮದಲ್ಲಿ ಭಾಗಿಯಾಗಿದ್ದು, ಸುಮಾರು 5,000 ಕೋಟಿ ರು ಮೌಲ್ಯದ 3.65 ಲಕ್ಷ ಟನ್ ಗಳಷ್ಟು ಕಬ್ಬಿಣದ ಅದಿರು ವಿದೇಶಕ್ಕೆ ರಫ್ತಾಗಿದೆ. ಇದಕ್ಕೆ ಯಾವುದೇ ಲೈಸನ್ಸ್, ಪರ್ಮಿಟ್ ಇಲ್ಲ. ಸರಕು ಸಾಗಣೆ ಕಂಪನಿಗಳು ಕೂಡಾ ಬೇನಾಮಿ ಹೆಸರಿನಲ್ಲಿವೆ.
ವಿಜಯನಗರ ಶಾಸಕ ಆನಂದ್ಸಿಂಗ್
ವಿಜಯನಗರ ಶಾಸಕ ಆನಂದ್ಸಿಂಗ್ ಒಡೆತನದ ವೈಷ್ಣವಿ ಮಿನರಲ್ಸ್ ಅಕ್ರಮವಾಗಿ ಬೇಲೇಕೇರಿ ಬಂದರಿನಿಂದ ಅದಿರು ಸಾಗಣೆ ಮಾಡಿದ ಆರೋಪವಿದೆ. ಜನವರಿ 2009 ರಿಂದ ಮೇ 2010ರ ಅವಧಿಯಲ್ಲಿ ಬೆಲೇಕೇರಿ ಬಂದರಿನಿಂದ ಮುಖ್ಯವಾಗಿ ಚೀನಾ, ಸಿಂಗಪುರ ಸೇರಿದಂತೆ ವಿದೇಶಕ್ಕೆ ಕಬ್ಬಿಣದ ಅದಿರನ್ನು ಸಾಗಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎನ್ನಲಾಗಿದೆ.