ಶಿಕ್ಷಣ ತಜ್ಞ ವೆಂಕಟರತ್ನಂ ನಾಯ್ಡು ಸಮಗ್ರ ಕೃತಿಗಳ ಬಿಡುಗಡೆ
ಬೆಂಗಳೂರು, ನವೆಂಬರ್24 : ಶಿಕ್ಷಣ ತಜ್ಞ ಸರ್. ಆರ್. ವೆಂಕಟರತ್ನಂ ನಾಯ್ಡು ಅವರ ಸಮಗ್ರ ಕೃತಿಗಳ ಬಿಡುಗಡೆ ಸಮಾರಂಭ ನವೆಂಬರ್ 27ರಂದು ಸೋಮವಾರ ಬೆಳಗ್ಗೆ 10ಗಂಟೆಗೆ ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆಯಲಿದೆ.
ಶೇಷಾದ್ರಿಪುರಂ ಶಿಕ್ಷಣ ದತ್ತಿ ಸಂಸ್ಥೆ ಹಾಗೂ ಬೆಂಗಳೂರು ಬ್ರಹ್ಮ ಸಮಾಜದ ಆಶ್ರಯದಲ್ಲಿ ಈ ಕಾರ್ಯಕ್ರಮ ನಡೆಯಲಿದ್ದು , ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಅವರು ಕೃತಿಗಳನ್ನು ಬಿಡುಗಡೆ ಮಾಡಲಿದ್ದಾರೆ.
ಡಾ. ರಘುಪತಿ ವೆಂಕಟರತ್ನಂ ನಾಯ್ಡು ಅವರು 20ನೇ ಶತಮಾನದ ಕಾಲಘಟ್ಟದಲ್ಲಿ ಸಮಾಜ ಸುಧಾರಕರಾಗಿ, ಶಿಕ್ಷಣ ತಜ್ಞರಾಗಿ, ಮದರಾಸು ವಿವಿಯಲ್ಲಿ ಪ್ರಥಮ ಕುಲಪತಿಗಳಾಗಿದ್ದರು. ಸಾಮಾಜಿಕ ಸುಧಾರಣೆ, ಶಿಕ್ಷಣ ಮೌಲ್ಯ, ಬ್ರಹ್ಮ ಸಮಾಜದ ಧರ್ಮೋಪದೇಶದ ಕುರಿತು ಸಾಕಷ್ಟು ಲೇಖನಗಳಿಂದ ಜನರ ಮನಸ್ಸಿನಲ್ಲಿ ನೆಲೆಸಿದ್ದಾರೆ.
ಜೀವಿತಾವಧಿಯಲ್ಲಿ9 ಸಂಪುಟಗಳಲ್ಲಿ ಪ್ರಕಟಗೊಂಡಿದ್ದ ಅವರ ಲೇಖನಗಳು ನಮಗೆ ಈಗ ಅಲಭ್ಯ, ಅವರ ದತ್ತು ಪುತ್ರಿ ಡಾ. ಟಿ. ರಾಜಲಕ್ಷ್ಮೀ ಅವರ ಬಳಿ ಇದ್ದ ಅಪರೂಪದ ಪ್ರತಿಯನ್ನು ಸಂಶೋಧಿಸಿ ಮೂರು ಸಂಪುಟಗಳಲ್ಲಿ ಮೌಲಿಕವಾದ ಈ ಯೋಜನೆಗೆ ಯುಜಿಸಿ ಪ್ರಾಯೋಜಕತ್ವದಲ್ಲಿ ದೊರೆತಿದ್ದು ಬ್ರಹ್ಮ ಸಮಾಜ ಇದರ ಪ್ರಕಟಣೆಗೆ ಮುಂದಾಗಿದೆ.
ಕರ್ನಾಟಕ ಸಂಸ್ಕೃತ ವಿವಿ ವಿಶ್ರಾಂತ ಕುಲಪತಿ ಪ್ರೊ. ಮಲ್ಲೇಪುರಂ ಜಿ. ವೆಂಕಟೇಶ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಅಧ್ಯಕ್ಷತೆಯನ್ನು ಶೇಷಾದ್ರಿಪುರಂ ಶಿಕ್ಷಣ ದತ್ತಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ ವಹಿಸಲಿದ್ದಾರೆ.