ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಪಣತೊಟ್ಟ ಸಿದ್ದು
ಬೆಂಗಳೂರು,ಮಾರ್ಚ್,21: ಮುಂದಿನ ದಿನಗಳಲ್ಲಿ ಮೌಢ್ಯ ನಿಷೇಧ ಕಾನೂನು ಜಾರಿಗೆ ತರಲು ಬದ್ಧವಾಗಿದ್ದು, ಈ ವಿಚಾರದಲ್ಲಿ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ಸೋಮವಾರ ಹೇಳಿದರು.
ಕ್ರಾಂತಿಯೋಗಿ ಬಸವಣ್ಣನವರು ಜಾತಿ ನಿವಾರಣೆ, ಮೌಢ್ಯ ನಿಷೇಧವಾಗಬೇಕು ಎಂದು ಪ್ರತಿಪಾದಿಸಿದ್ದರು. ಆದರೆ ಸಮಾಜದಲ್ಲಿ ಇನ್ನೂ ಜೀವಂತವಾಗಿರುವ ಜಾತಿ, ಮೌಢ್ಯವನ್ನು ನಿಯಂತ್ರಿಸಿ ಜಾಗೃತಿ ಮೂಡಿಸಬೇಕಾಗಿದೆ. ಆದ್ದರಿಂದ ಕೆಲವೇ ದಿನಗಳಲ್ಲಿ ಮೌಢ್ಯ ನಿಷೇಧ ಕಾನೂನು ಜಾರಿಗೆ ತರುವುದು ಶತಃಸಿದ್ಧ ಎಂದು ಭರವಸೆ ನೀಡಿದರು.[ಮೂಢನಂಬಿಕೆ ಮಸೂದೆ: ಮಠಾಧೀಶರ ಮಹತ್ವದ ನಿರ್ಣಯಗಳು]
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನ ಸಭೆ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಅವರು, 'ಯಾವುದೇ ಕಾನೂನು ಜಾರಿಗೆ ತರುವ ಮೊದಲು ಜನರಲ್ಲಿ ಜಾಗೃತಿ ಮೂಡಿಸಬೇಕು.
ಅದರಲ್ಲೂ ಮುಖ್ಯವಾಗಿ ಮೌಢ್ಯ ನಿಷೇಧದಂತಹ ಕಾನೂನನ್ನು ಜಾರಿಗೆ ತರುವ ಮುನ್ನ ಜನಜಾಗೃತಿ ಮೂಡಿಸಬೇಕಿತ್ತು. ಜನಜಾಗೃತಿ ಮೂಡಿಸುವ ಮುನ್ನವೇ ಸರಕಾರ ಕಾನೂನುಗಳನ್ನು ಜಾರಿಗೆ ತಂದರೆ ಅದನ್ನು ಸಮಾಜ ಒಪ್ಪುವುದಿಲ್ಲ ಎಂದರು.[ಭಕ್ತಿಯ ಅತಿರೇಕವೋ, ಮೂಢತನದ ಪರಮಾವಧಿಯೋ?]
ಈ ಸಂದರ್ಭದಲ್ಲಿ ವಿಧಾನ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಕಾನೂನು ಸಚಿವ ಟಿ.ಬಿ.ಜಯಚಂದ್ರ ಹೀಗೆ ನಾನಾ ಮುಖಂಡರುಗಳು ಪಾಲ್ಗೊಂಡು ಮೌಢ್ಯ ನಿಷೇಧ ಕಾಯ್ದೆ ಬಗ್ಗೆ ತಮ್ಮ ವಿಚಾರ ಮಂಡಿಸಿ ವಾದ ಪ್ರತಿವಾದ ನಡೆಸಿದ್ದಾರೆ.