ಪಕ್ಷದ ಕಾರ್ಯಕರ್ತರಿಗೆ ಧೃತಿಗೆಡಬೇಡಿ ಎಂದ ಸಿದ್ದರಾಮಯ್ಯ
ಬೆಂಗಳೂರು, ಜು.21: ವಿಧಾನಸಭೆ ಚುನಾವಣೆ ಸೋಲಿನಿಂದ ಧೃತಿಗೆಡಬೇಡಿ. ಮುಂಬರುವ ಲೋಕಸಭೆ ಚುನಾವಣೆಗೆ ಸನ್ನದ್ಧರಾಗಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರದೇಶ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳಿಗೆ ಕರೆ ನೀಡಿದರು.
ನಗರದ ಗುರುನಾನಕ್ ಭವನದಲ್ಲಿ ಶನಿವಾರ ಆಯೋಜಿಸಿದ್ದ ಕೆಪಿಸಿಸಿ ಪದಾಧಿಕಾರಿಗಳ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗೆಲ್ಲುವ ವಿಶ್ವಾಸ ನೂರಕ್ಕೆ ನೂರರಷ್ಟು ಇತ್ತು. ಆದರೆ ಬಿಜೆಪಿಯವರು ಮಾಡಿದ ಅಪಪ್ರಚಾರದಿಂದಾಗಿ ನಮಗೆ ಸೋಲಾಯಿತು. ಶೇಕಡಾವಾರು ಮತಗಳಿಕೆಯಲ್ಲಿ ನಾವು ಬಿಜೆಪಿಗಿಂತ ಮುಂದೆ ಇದ್ದೇವೆ. ಆದರೂ ಹೆಚ್ಚು ಸ್ಥಾನಗಳನ್ನು ಗಳಿಸಲು ಆಗಿಲ್ಲ ಎಂದರು.
ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಸಿದ್ದರಾಮಯ್ಯ ಸ್ಪಷ್ಟನೆ
ಮುಂಬರುವ ಲೋಕಸಭೆ ಚುನಾವಣೆಗೆ ನಾವು ಈಗಿನಿದಲೇ ಸಜ್ಜಾಗೋಣ. ಆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸುವುದೇ ನಮ್ಮ ಗುರಿ ಆಗಬೇಕು ಎಂದು ಹೇಳಿದರು. ಹಿಂದಿನ ಸರ್ಕಾರ ಜನರಿಗಾಗಿ ಹಲವಾರು ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿತ್ತು. ಆದರೆ ಬಿಜೆಪಿಯವರು ಹಿಂದುತ್ವದ ಬಗ್ಗೆ ಹೆಚ್ಚು ಪ್ರಚಾರ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರ ವೈಫಲ್ಯಗಳನ್ನು ಪಟ್ಟಿ ಮಾಡಿ ಹೇಳಿದರೂ ಪ್ರಯೋಜನವಾಗಲಿಲ್ಲ ಎಂದು ತಿಳಿಸಿದರು.
ಆದರೆ ಲೋಕಸಭೆ ಚುನಾವಣೆ ವೇಳೆ ಆ ರೀತಿ ಆಗುವುದಿಲ್ಲ. ನರೇಂದ್ರ ಮೋದಿಯವರು ಕಳೆದ ಐದು ವರ್ಷದಲ್ಲಿ ಹೇಳಿದ್ದೇನು, ಮಾಡಿದ್ದೇನು ಎಂಬುದನ್ನು ಜನರಿಗೆ ವಿವರಿಸುವ ಕೆಲಸವನ್ನು ನಮ್ಮ ಕಾರ್ಯಕರ್ತರು ಮಾಡಬೇಕು.
ಎಲ್ಲ ವರ್ಗದವರ ಪರವಾಗಿ ಕೆಲಸ ಮಾಡಿದ ಸರ್ಕಾರ ನಮ್ಮದಾಗಿತ್ತು. ಆದರೆ ಬಿಜೆಪಿಯವರು ಎಲ್ಲ ವರ್ಗದವರ ಪರವಾಗಿ ಇಲ್ಲ. ಸಾಮಾಜಿಕ ನ್ಯಾಯದಲ್ಲಿ ಅವರಿಗೆ ನಂಬಿಕೆಯೇ ಇಲ್ಲ. ಸಾಮಾಜಿಕ ನ್ಯಾಯವನ್ನು ಪ್ರತಿಪಾದಿಸುವ ಏಕೈಕ ಪಕ್ಷ ಕಾಂಗ್ರೆಸ್ ಎಂದರು.
ಬಿಜೆಪಿಗೆ ಒಂದು ಸಿದ್ಧಾಂತವೇ ಇಲ್ಲ. ಕೇವಲ ಭಾವನಾತ್ಮಕ ವಿಚಾರಗಳನ್ನು ದೊಡ್ಡದಾಗಿ ಬಿಂಬಿಸಿ ಆ ಮೂಲಕ ಗಲಭೆ ಸೃಷ್ಟಿಮಾಡುವುದೇ ಅವರ ಕೆಲಸ ಎಂದ ಅವರು, ಪ್ರಧಾನಿ ನರೇಂದ್ರ ಮೋದಿ ಒಬ್ಬ ನಾಟಕಕಾರ. ಅಂತಹ ನಾಟಕಕಾರರನ್ನು ನಾನು ನೋಡಿಯೇ ಇಲ್ಲ. ಆದರೆ, ಮಾತುಗಳಿಂದ ಜನರನ್ನು ಹೆಚ್ಚು ದಿನ ಮರಳು ಮಾಡಲು ಸಾಧ್ಯವಿಲ್ಲ. ಏಕೆಂದರೆ ಜನರಿಗೆ ಬೇಕಾಗಿರುವುದು ಕಾಮ್ ಕೀ ಬಾತ್. ಮನ್ ಕೀ ಬಾತ್ ಅಲ್ಲವೇ ಅಲ್ಲ ಎಂದರು.