ಮೋದಿ ಕಾರ್ಯಕ್ರಮಕ್ಕೆ ಸಿದ್ದರಾಮಯ್ಯಗೆ ಆಹ್ವಾನವಿಲ್ಲ, ಕಾಂಗ್ರೆಸ್ ಕಿಡಿ
Recommended Video
ಬೆಂಗಳೂರು, ಫೆಬ್ರವರಿ 17: ನಾಳೆ (ಫೆ.18) ಮೈಸೂರಿಗೆ ಬರುತ್ತಿರುವ ಪ್ರಧಾನಿ ಮೋದಿ ಮಂಗಳವಾರ (ಫೆ.19) ಮೈಸೂರಿನಲ್ಲಿ ಎರಡು ಸರ್ಕಾರಿ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ, ಆದರೆ ಈ ಕಾರ್ಯಕ್ರಮಗಳಿಗೆ ರಾಜ್ಯದ ಮುಖ್ಯಮಂತ್ರಿಗಳಿಗೆ ಆಹ್ವಾನ ನೀಡಲಾಗಿಲ್ಲ.
ಪ್ರಧಾನಿ ಅವರು ಮಂಗಳವಾರದಂದು ಬೆಂಗಳೂರು-ಮೈಸೂರು ದ್ವಿಪಥ ರೈಲ್ವೆ ಹಾಗೂ ಇಎಸ್ಐ ಆಸ್ಪತ್ರೆ ಸೇವೆ ಉದ್ಘಾಟನೆ ಮಾಡಲಿದ್ದಾರೆ. ಇವೆರಡೂ ಸರ್ಕಾರಿ ಕಾರ್ಯಕ್ರಮಗಳಾಗಿದ್ದು ಎರಡೂ ಕಾರ್ಯಕ್ರಮಕ್ಕೆ ಶಿಷ್ಟಾಚಾರದ ಅನ್ವಯ ಮುಖ್ಯಮಂತ್ರಿಗಳಿಗೆ ಆಹ್ವಾನ ಇರಬೇಕಿತ್ತು. ಆದರೆ ಆಹ್ವಾನ ಪತ್ರದಲ್ಲಿ ಮುಖ್ಯಮಂತ್ರಿಗಳ ಹೆಸರಿಲ್ಲ.
ಸ್ಥಳೀಯ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರು ಮುಖ್ಯಮಂತ್ರಿಗಳಿಗೆ ಅವಮಾನ ಮಾಡಲೆಂದೇ ಈ ರೀತಿ ಮಾಡಿದ್ದು, ಇದಕ್ಕೆ ಮೋದಿ ಅವರ ಕುಮ್ಮಕ್ಕೂ ಇದೆ ಎಂದು ಕಾಂಗ್ರೆಸ್ ಮುಖಂಡರು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹಾಗೂ ಪ್ರಧಾನಿ ಮೋದಿ ಅವರ ಮೇಲೆ ಆರೋಪ ಹೊರಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಮಡೂರಾವ್ ಅವರು 'ಸರ್ಕಾರಿ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳನ್ನು ಕರೆಯದೇ ಇರುವುದು ಮೋದಿ ಅವರ ಸಣ್ಣತನ ತೋರಿಸುತ್ತದೆ' ಎಂದಿದ್ದಾರೆ.
ಮುಖ್ಯಮಂತ್ರಿಗಳನ್ನು ಕಾರ್ಯಕ್ರಮದಿಂದ ಹೊರಗಿಟ್ಟಿರುವ ಬಗ್ಗೆ ಮಾತನಾಡಿರುವ ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ 'ಮುಖ್ಯಮಂತ್ರಿಗಳಷ್ಟು ಶಿಷ್ಟಾಚಾರ ಉಲ್ಲಂಘಿಸುವವರು ಬೇರೆ ಯಾರೂ ಇಲ್ಲ, ಅವರಿಗೆ ಇದರ ಬಗ್ಗೆ ಪ್ರಶ್ನೆ ಕೇಳುವ ನೈತಿಕತೆ ಇಲ್ಲ' ಎಂದಿದ್ದಾರೆ.