ಸಿದ್ದರಾಮಯ್ಯ- ಅಂಬರೀಷ್ ಭೇಟಿಯ ಹಿಂದಿನ ಗುಟ್ಟೇನು?
ಮುಂಬರುವ ವಿಧಾನಸಭೆ ಚುನಾವಣೆ ದೃಷ್ಟಿಯಿಂದ ತ ಮ್ಮೊಂದಿಗೆ ಮುನಿಸಿಕೊಂಡಿರುವ, ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನ ಕೆಲ ಹಿರಿಯ ನಾಯಕರನ್ನೂ ಭೇಟಿ ಮಾಡುವ ಕಾಯಕಕ್ಕೆ ಚಾಲನೆ ನೀಡಿದ್ದಾರೆಂಬ ಮಾತುಗಳು ಕೇಳಿಬರುತ್ತಿವೆ.
ಬೆಂಗಳೂರು, ಏಪ್ರಿಲ್ 21: ಇತ್ತೀಚೆಗೆ ನಡೆದ ಉಪಚುನಾವಣೆ ಫಲಿತಾಂಶವು ಕಾಂಗ್ರೆಸ್ ಪಕ್ಷದಲ್ಲಿ ಹೊಸ ಹುಮ್ಮಸ್ಸು ತಂದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಇದರಿಂದ ಉತ್ತೇಜಿತರಾಗಿದ್ದಾರೆ.
ಹಾಗಾಗಿ, ಮುಂದಿನ ವರ್ಷ ನಡೆಯಲಿರುವ ವಿಧಾನಸಭೆ ಚುನಾವಣೆಗಾಗಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮಾಡಲು ನಿರ್ಧರಿಸಿರುವ ಅವರು ಅದಕ್ಕೆ ಕೈ ಹಾಕಿದ್ದಾರೆ.[ಸಿಎಂ ಅನುಪಸ್ಥಿತಿಯಲ್ಲಿ ಅಧಿಕಾರಿಗಳ ಸಭೆ ನಡೆಸಿದ ಪುತ್ರ!]
ಅದರ ಜತೆಯಲ್ಲೇ , ತಮ್ಮೊಂದಿಗೆ ಮುನಿಸಿಕೊಂಡಿರುವ, ಭಿನ್ನಾಭಿಪ್ರಾಯ ಹೊಂದಿರುವ ಕಾಂಗ್ರೆಸ್ ನ ಕೆಲ ಹಿರಿಯ ನಾಯಕರನ್ನೂ ಭೇಟಿ ಮಾಡುವ ಕಾಯಕಕ್ಕೆ ಚಾಲನೆ ನೀಡಿದ್ದಾರೆಂದು ಕೆಲ ಮೂಲಗಳು ತಿಳಿಸಿವೆ.
ಅದರ ಒಂದು ಭಾಗವಾಗಿ, ಮಾಜಿ ಸಚಿವ ಹಾಗೂ ಚಿತ್ರ ನಟ ಅಂಬರೀಷ್ ಅವರನ್ನು ಭೇಟಿಯಾಗಿ ಅವರು ಮಾತುಕತೆ ನಡೆಸಿಯಾಗಿದೆ. ಅಂಬರೀಶ್ ಅವರನ್ನು, ಸಚಿವ ಸಂಪುಟದಿಂದ ಕೈಬಿಟ್ಟ ಬಳಿಕ ಅವರಿಬ್ಬರ ನಡುವೆ ಭಾರೀ ಮನಸ್ತಾಪ ಉಂಟಾಗಿತ್ತು.[ಬೆಂಗಳೂರು: ಪ್ರಮಾಣ ವಚನ ಸ್ವೀಕರಿಸಿದ ಉಪಚುನಾವಣಾ ವಿಜೇತರು]
ಅಲ್ಲಿಂದ ಇಲ್ಲಿಯವರೆಗೆ ಅವರಿಬ್ಬರ ಭೇಟಿ ನಡೆದಿರಲಿಲ್ಲ. ಆದರೆ, ಎರಡು ದಿನಗಳ ಹಿಂದೆಯೇ ಇಬ್ಬರೂ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ತಮ್ಮೊಂದಿಗೆ, ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮತ್ತು ಜಲಸಂಪನ್ಮೂಲ ಸಚಿವ ಎಂ.ಬಿ. ಪಾಟೀಲ್ ಅವರನ್ನೊ ಕೊಂಡೊಯ್ದ ಸಿದ್ದರಾಮಯ್ಯ ಮಾತುಕತೆ ನಡೆಸಿದ್ದಾರೆ.
ಮತ್ತೆ ಕೆಲವು ಮೂಲಗಳ ಪ್ರಕಾರ, ಅಂಬರೀಷ್ ಅವರನ್ನು ಪುನಃ ಸಂಪುಟಕ್ಕೆ ಸೇರಿಸಿಕೊಳ್ಳುವ ಇರಾದೆ ಸಿದ್ದರಾಮಯ್ಯ ಅವರಿಗಿದೆ ಎಂದು ಹೇಳಲಾಗಿದೆ.[ನಂಜನಗೂಡು: ಕಾಂಗ್ರೆಸ್ ಗೆದ್ದಿದ್ದೆಲ್ಲಿ? ಬಿಜೆಪಿ ಸೋತಿದ್ದೆಲ್ಲಿ?]
ಇತ್ತೀಚೆಗೆ, ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರಿದಾಗ ಅಂಬರೀಷ್ ಸಹಾ ಕೃಷ್ಣ ಅವರನ್ನು ಹಿಂಬಾಲಿಸುತ್ತಾರೆ ಎಂದು ಅನುಮಾನಿಸಲಾಗಿತ್ತು. ಆದರೆ, ಅಂಬರೀಶ್ ಅದಕ್ಕೆ ಸ್ಪಷ್ಟ ಉತ್ತರ ಕೊಟ್ಟು ತಾವು ಕಾಂಗ್ರೆಸ್ ತೊರೆಯುವುದಿಲ್ಲ ಎಂದು ಹೇಳಿದ್ದರು.
ಇದರಿಂದ ಸಂತುಷ್ಟರಾಗಿರುವ ಸಿಎಂ, ಈಗ ಅಂಬರೀಶ್ ಅವರ ಬಗ್ಗೆ ಒಲವು ತೋರಿದ್ದಾರೆನ್ನಲಾಗಿದೆ. ಅಂಬರೀಷ್ ಅವರಿಗೆ ಸಚಿವ ಸ್ಥಾನ ನೀಡುವ ಮೂಲಕ ಕೃಷ್ಣ ಅವರ ವಲಸೆಯಿಂದ ಮೈಸೂರು ಸುತ್ತಮುತ್ತಲಿನ ಪ್ರಾಂತ್ಯದಲ್ಲಿರುವ ಗೌಡರ ಬಲವು ಬಿಜೆಪಿಗೆ ತಿರುಗುವುದನ್ನು ತಪ್ಪಿಸಲು ಅಂಬರೀಷ್ ಅವರಿಗೆ ಪುನಃ ಮಂತ್ರಿಮಂಡಲದಲ್ಲಿ ಸ್ಥಾನ ಕೊಡಲು ಸಿದ್ದರಾಮಯ್ಯ ನಿರ್ಧರಿಸಿದ್ದಾರೆಂದು ಹೇಳಲಾಗುತ್ತಿದೆ.