ಬೆಳ್ಳಂದೂರು ಕೆರೆ ಸ್ವಚ್ಛತೆ ಕೆಲಸ ತ್ವರಿತವಾಗಲಿ: ಸಿದ್ದರಾಮಯ್ಯ
ಬೆಳ್ಳಂದೂರು ಕೆರೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಕೆರೆಯ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದ್ದು, ಎನ್ ಜಿಟಿ ಬಳಿ ಹೆಚ್ಚಿನ ಕಾಲಾವಕಾಶವನ್ನು ರಾಜ್ಯ ಸರ್ಕಾರ ಕೇಳಿದೆ ಎಂದರು.
ಬೆಂಗಳೂರು, ಮೇ 16: ಬೆಂಗಳೂರಿನ ಬೆಳ್ಳಂದೂರು ಕೆರೆ ಸ್ವಚ್ಛತೆಗೆ ರಾಷ್ಟ್ರೀಯ ಹಸಿರು ಪ್ರಾಧಿಕಾರ (ಎನ್ ಜಿಟಿ) ನೀಡಿರುವ ಗಡುವು ಇನ್ನೆರಡು ದಿನಗಳಲ್ಲಿ ಮುಗಿಯುತ್ತಿದೆ. ಹೀಗಿರುವಾಗ ನಿನ್ನೆ (ಮೇ 15) ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಳ್ಳಂದೂರು ಕೆರೆಗೆ ಭೇಟಿ ನೀಡಿ ಸ್ವಚ್ಛತಾ ಕಾರ್ಯದ ಸ್ಥಿತಿಗತಿಯನ್ನು ಪರಿಶೀಲಿಸಿದರು.
ಕೆರೆಯ ಸ್ವಚ್ಛತಾ ಕಾರ್ಯದ ಕುರಿತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ರಾಕೇಶ್ ಸಿಂಗ್ ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು. ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಸರ್ಕಾರ ಎನ್ ಜಿಟಿ ಆದೇಶಕ್ಕೂ ಮೊದಲೇ ಕೆರೆ ಅಭಿವೃದ್ಧಿಗಾಗಿ ತಜ್ಞರ ಸಮಿತಿಯೊಂದನ್ನು ರಚಿಸಿತ್ತು. ಇದೀಗ ಸ್ವಚ್ಛತಾ ಕಾರ್ಯ ಭರದಿಂದ ಸಾಗುತ್ತಿದ್ದು, ಎನ್ ಜಿಟಿ ಬಳಿ ಹೆಚ್ಚಿನ ಕಾಲಾವಕಾಶವನ್ನು ರಾಜ್ಯ ಸರ್ಕಾರ ಕೇಳಿದೆ ಎಂದರು.[ಶುರುವಾಗುತ್ತಿದೆ ಬೆಂಗಳೂರು ಕೆರೆ ಉಳಿಸುವ ಅಭಿಯಾನ]
ಕೆರೆ 900 ಎಕೆರೆ ಜಾಗವನ್ನು ಆವರಿಸಿರುವುದರಿಂದ ಕೆಲವೇ ದಿನಗಳಲ್ಲಿ ಕೆರೆಯನ್ನು ಸ್ವಚ್ಛಗೊಳಿಸುವುದು ಸಾಧ್ಯವಿಲ್ಲ. ಈಗಾಗಲೇ ಕಳೆ ತೆಗೆಯುವ ಕೆಲಸ ಮುಗಿದಿದ್ದು, ಹೂಳೆತ್ತುವ ಕೆಲಸವೂ ನಡೆಯುತ್ತಿದೆ. ಚರಂಡಿ ನೀರು ಕೆರೆಗೆ ಬಾರದಂತೆ ಎಚ್ಚರಿಕೆ ವಹಿಸಬೇಕಿದೆ. ಆದ್ದರಿಂದ ಎನ್ ಜಿಟಿಯ ಡೆಡ್ ಲೈನ್ ತಲುಪುವುದಕ್ಕೆ ಸಾಧ್ಯವಿಲ್ಲ. ಕಾಲಾವಕಾಶ ಪಡೆದು ಬೆಳ್ಳಂದೂರು ಕೆರೆಯನ್ನು ಮಾಲಿನ್ಯಮುಕ್ತಗೊಳಿಸಲಾಗುವುದು ಎಂದು ಸಿದ್ದರಾಮಯ್ಯ ಭರವಸೆ ನೀಡಿದ್ದಾರೆ.[ಬೆಳ್ಳಂದೂರು ಕೆರೆ ಸ್ವಚ್ಛವಾಗೋದು 2020 ಕ್ಕೆ!]