ಕಟ್ಟುವುದಕ್ಕೆ ಮುಂಚೆ ಕುಸಿದು ಬಿದ್ದ ಬೆಂಗಳೂರು ಸೇತುವೆ!
ವಿವಾದಿತ ಉಕ್ಕಿನ ಮೇಲ್ಸೇತುವೆ ಯೋಜನೆಯನ್ನು ರದ್ದುಗೊಳಿಸಿ ಸಿದ್ದರಾಮಯ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ.
ಬೆಂಗಳೂರು, ಮಾರ್ಚ್ 02: ನಗರದ ಟ್ರಾಫಿಕ್ ಸಮಸ್ಯೆಗೆ ಪರಿಹಾರ ನೀಡಲು ಬಸವೇಶ್ವರ ಸರ್ಕಲ್ (ಚಾಲುಕ್ಯ ವೃತ್ತ) ನಿಂದ ಹೆಬ್ಬಾಳದ ಎಸ್ಟೀಮ್ ಮಾಲ್ ವರೆಗೆ ಸ್ಟೀಲ್ ಬ್ರಿಡ್ಜ್ ನಿರ್ಮಿಸಲು ಮುಂದಾಗಿದ್ದ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಿಂದೆ ಸರಿದಿದೆ. ಉಕ್ಕಿನ ಮೇಲ್ಸೇಸುವೆ ಯೋಜನೆ ರದ್ದುಗೊಳಿಸಲಾಗಿದೆ.
ಈ ಬಗ್ಗೆ ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರು ಸಚಿವ ಸಂಪುಟ ಸಭೆ ನಡೆಸಿ ಅಧಿಕೃತ ಘೋಷಣೆ ಮಾಡಿದ್ದಾರೆ. ಸುಮಾರು 1200 ಕೋಟಿ ವೆಚ್ಚದ ಈ ಯೋಜನೆಯ ಕಾಮಗಾರಿಗೆ ಹಸಿರು ಪ್ರಾಧಿಕಾರ ಕೂಡಾ ತಾತ್ಕಾಲಿಕ ತಡೆ ನೀಡಿತ್ತು. ಪರಿಸರವಾದಿಗಳು, ನಾಗರಿಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. [ಏನಿದು ಉಕ್ಕಿನ ಮೇಲ್ಸೇತುವೆ ಯೋಜನೆ? ಏಕೆ ವಿರೋಧ?]
ಆದರೆ, ತೀವ್ರ ವಿರೋಧದ ನಡುವೆಯೂ ಕಾಮಗಾರಿಗೆ ಚಾಲನೆ ನೀಡಲಾಗಿತ್ತು. ಹಸಿರು ಪ್ರಾಧಿಕಾರದಲ್ಲಿ ವಿಚಾರಣೆ ಜಾರಿಯಲ್ಲಿದೆ. ಈ ಸಂದರ್ಭದಲ್ಲಿ ಏಕಾಏಕಿ ನಿರ್ಣಯ ಅಚ್ಚರಿಯಾದರೂ ಸ್ವಾಗತಾರ್ಹವಾಗಿದೆ. ಯೋಜನೆ ರದ್ದುಗೊಳಿಸಲು ಏನು ಕಾರಣ? [6 ಎಲಿವೇಟೆಡ್ ಕಾರಿಡಾರ್, ಬಿಡದಿಯಲ್ಲಿ ಸ್ಮಾರ್ಟ್ ಸಿಟಿ: ಜಾರ್ಜ್]
ಟೆಂಡರ್ ಅಕ್ರಮ? ಮರಗಳ ಮಾರಣಹೋಮ? ಯೋಜನಾ ವೆಚ್ಚ ಏರಿಕೆ? ಅಥವಾ ಇತ್ತೀಚಿನ ಡೈರಿ ಹಗರಣ? ಸ್ಟೀಲ್ ಬ್ರಿಡ್ಜ್ ಯೋಜನೆ ರದ್ದಾದರೆ ಯಾರಿಗೆ ನಷ್ಟ ಮುಂದೆ ಓದಿ...
ಡೈರಿ ಹಗರಣದ ಪರಿಣಾಮವೇ?
ಎಂಎಲ್ ಸಿ ಗೋವಿಂದರಾಜು ಅವರ ಡೈರಿಯಲ್ಲಿ ಉದ್ದೇಶಿತ ಸ್ಟೀಲ್ ಫ್ಲೈಓವರ್ ಬಗ್ಗೆ ಕೂಡಾ ಪ್ರಸ್ತಾಪಿಸಲಾಗಿತ್ತು. ಈ ಯೋಜನೆಯಲ್ಲಿ 65 ಕೋಟಿ ರು ಕಿಕ್ ಬ್ಯಾಕ್ ಪಡೆಯಲಾಗಿದೆ ಎಂದು ಆರೋಪಿಸಲಾಗಿತ್ತು. ಇದರಿಂದ ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿದ್ದರಾಮಯ್ಯ ಸರ್ಕಾರ ತೀವ್ರ ಮುಜುಗರ ಅನುಭವಿಸಿತ್ತು.
ಜಾರ್ಜ್ ಗಾಗಿ ಯೋಜನೆ
ಯೋಜನೆಯ ಟೆಂಡರ್ ಹಾಗೂ ಯೋಜನಾ ವೆಚ್ಚದ ಬಗ್ಗೆ ಅಕ್ಷೇಪ, ಆರೋಪ, ಪ್ರತಿಭಟನೆ ಕೇಳಿ ಬಂದ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯ ಅವರು ಈ ಯೋಜನೆ ರದ್ದುಗೊಳಿಸಲು ಮುಂದಾಗಿದ್ದರು ಎನ್ನಲಾಗಿದೆ. ಆದರೆ, ನಗರಾಭಿವೃದ್ಧಿ ಸಚಿವ ಕೆಜೆ ಜಾರ್ಜ್ ಅವರ ಮಹತ್ವಾಕಾಂಕ್ಷಿ ಯೋಜನೆ ಪರ ಸಿಎಂ ಕೂಡಾ ಸಮರ್ಥನೆ ನೀಡಿದ್ದರು. ಕಾಮಗಾರಿಗೆ ಚಾಲನೆ ನೀಡಲಾಗಿತ್ತು.
ಯಾವ ಕಂಪನಿಗೆ ಆರ್ಡರ್
ಆಂಧ್ರಪ್ರದೇಶದಲ್ಲಿ ಕಪ್ಪು ಪಟ್ಟಿಗೆ ಸೇರಿರುವ ನಿರ್ಮಾಣ ಸಂಸ್ಥೆ ನಾಗಾರ್ಜುನ ಹಾಗೂ ಎಲ್ ಅಂಡ್ ಟಿಗೆ ಈ ಯೋಜನೆಗೆ ಕಾಮಗಾರಿಗೆ ವರ್ಕ್ ಆರ್ಡರ್ ನೀಡಲಾಗಿತ್ತು. ಬಿಡಿಎ ಕೂಡಾ ಅನೇಕ ಬಾರಿ ಟೆಂಡರ್ ಪ್ರಕ್ರಿಯೆ ಪಾರದರ್ಶಕವಾಗಿದೆ ಎಂದು ಸ್ಪಷ್ಟಪಡಿಸಿತ್ತು. ಇದಕ್ಕೂ ಮುನ್ನ ಮೆಸರ್ಸ್ STUP ಕನ್ಸಲ್ಟಂಟ್ಸ್ ಪ್ರೈ ಲಿಮಿಟೆಡ್ ಗೆ 1791 ಕೋಟಿ ರೂ. ವೆಚ್ಚದಲ್ಲಿ ಯೋಜನೆ ಅಂತಿಮಗೊಳಿಸಲಾಗಿತ್ತು.
ರದ್ದುಗೊಳಿಸಿದ್ದು ಏಕೆ?
ಬೆಂಗಳೂರು ದಾರ್ಶನಿಕ ಗುಂಪಿನ (Bengaluru Vision Group) 120 ಕಿ. ಮೀ ಎಲಿವೇಟೆಡ್ ಕಾರಿಡಾರ್ ನ ಒಂದು ಭಾಗವಾಗಿ ಈ ಉಕ್ಕಿನ ಸೇತುವೆ ಯೋಜನೆಯನ್ನು ಸೇರಿಸಿಕೊಂಡಿದ್ದಾರೆಸಾರ್ವಜನಿಕ ಅಭಿಪ್ರಾಯ ಪಡೆದಾಗ ಶೇ 73ರಷ್ಟು ಮಂದಿ ಯೋಜನೆಯನ್ನು ಬೆಂಬಲಿಸಿದ್ದಾರೆ. ಸಾವಿರ ಮರಗಳನ್ನು ಕಡಿದರೆ, 60,000 ಸಸಿಗಳನ್ನು ನೆಡುವ ಮೂಲಕ ಪರಿಹಾರ ಕಂಡುಕೊಳ್ಳಲಾಗುತ್ತದೆ. ಯೋಜನೆ ಪೂರ್ಣಗೊಂಡ ಬಳಿಕ ಟ್ರಾಫಿಕ್ ಸಮಸ್ಯೆ ಇಲ್ಲದಿರುವಾಗ ವಾಯು ಹಾಗೂ ಶಬ್ದ ಮಾಲಿನ್ಯವೂ ತಗ್ಗಲಿದೆ ಎಂದು ಸರ್ಕಾರ ಸಮರ್ಥಿಸಿಕೊಂಡಿತ್ತು.