ಸಿದ್ದು, ಡಿಕೆಶಿ ಮೇಲೆ 417 ಕೋಟಿ ಅವ್ಯವಹಾರ ಆರೋಪ ಮಾಡಿದ ಬಿಎಸ್ ವೈ
ಬೆಂಗಳೂರು, ಅಕ್ಟೋಬರ್ 21 : ಕರ್ನಾಟಕ ಪವರ್ ಕಾರ್ಪೋರೇಷನ್ ಲಿಮಿಟೆಡ್ (ಕೆಪಿಸಿಎಲ್) ನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಸೇರಿ 417 ಕೋಟಿ ರುಪಾಯಿಯ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಶನಿವಾರ ದಾಖಲೆ ಬಿಡುಗಡೆ ಮಾಡಿದ್ದಾರೆ.
ಸುಳ್ಳು ಹೇಳುವುದರಲ್ಲಿ ಯಡಿಯೂರಪ್ಪನವರನ್ನೂ ಮೀರಿಸುವ ಸಿದ್ದರಾಮಯ್ಯ
ನನ್ನ ರಾಜಕೀಯ ಜೀವನದಲ್ಲೇ ನೋಡಿದ ಅತಿ ದೊಡ್ಡ ಸಾರ್ವಜನಿಕರ ಹಣದ ಲೂಟಿ ಇದು ಎಂದು ಯಡಿಯೂರಪ್ಪ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದಾರೆ. ಖಾಸಗಿ ಕಂಪನಿ ಪಾವತಿಸಬೇಕಿದ್ದ 417 ಕೋಟಿ ರುಪಾಯಿಯನ್ನು ಕೆಪಿಸಿಎಲ್ ಪಾವತಿಸಿದೆ. ಇದರಲ್ಲಿ ಕಿಕ್ ಬ್ಯಾಕ್ ಒಳಗೊಂಡಿದೆ ಎಂಬುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.
ಮುಖ್ಯಮಂತ್ರಿಗಳು ಏಕೆ ಖಾಸಗಿ ಕಂಪನಿ ಏಜೆಂಟರಂತೆ ವರ್ತಿಸಿದ್ದಾರೆ? ಈಗಾದರೂ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡುತ್ತಾರಾ ಎಂದು ಪ್ರಶ್ನಿಸಿದ್ದಾರೆ. ಆದರೆ ಈ ಆರೋಪವನ್ನು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ನಿರಾಕರಿಸಿದ್ದಾರೆ.
2002ರಲ್ಲಿ ಕೆಪಿಸಿಎಲ್ ಕೋಲ್ಕತ್ತಾ ಮೂಲದ ಈಸ್ಟರ್ನ್ ಮಿನರಲ್ಸ್ ಮತ್ತು ಟ್ರೇಡಿಂಗ್ ಕಂಪನಿ (ಈಎಂಟಿಎ) ಜತೆಗೆ ಜಾಯಿಂಟ್ ವೆಂಚರ್ ಮಾಡಿತ್ತು. ಮಹಾರಾಷ್ಟ್ರದಲ್ಲಿ ಆರು ಕಲ್ಲಿದ್ದಲು ಗಣಿ ಮಂಜೂರಾಗಿತ್ತು. 2014ರಲ್ಲಿ ಸುಪ್ರೀಂ ಕೋರ್ಟ್ ಹಲವು ಕಲ್ಲಿದ್ದಲು ಗಣಿಯನ್ನು ರದ್ದುಪಡಿಸಿತ್ತು. ಅದರಲ್ಲಿ ಕೆಪಿಸಿಎಲ್ ಹಾಗೂ ಈಎಂಟಿಎ ಜಂಟಿಯಾಗಿ ಕೈಗೊಂಡಿದ್ದ ಗಣಿಯೂ ಸೇರಿತ್ತು.
ಗಣಿಗಾರಿಕೆ ಮಾಡಿದ ಕಲ್ಲಿದ್ದಲಿಗೆ ಮೆಟ್ರಿಕ್ ಟನ್ ಗೆ 295 ರುಪಾಯಿಯಂತೆ ದಂಡ ಪಾವತಿಸುವಂತೆ ಸುಪ್ರೀಂ ಕೋರ್ಟ್ ಸೂಚನೆ ನೀಡಿತ್ತು. ಆ ಪ್ರಕಾರ ಹೆಚ್ಚುವರಿಯಾಗಿ 417 ಕೋಟಿ ರುಪಾಯಿ ಪಾವತಿಸಬೇಕಾಯಿತು. ಇದನ್ನು ಈಎಂಟಿಎ ಪಾವತಿಸಬೇಕಿತ್ತು. ಆದರೆ ರಾಜ್ಯ ಸರಕಾರ ನೀಡಿದೆ ಎಂಬುದು ಯಡಿಯೂರಪ್ಪ ಅವರ ಆರೋಪ.