ಸಿದ್ದಗಂಗಾಶ್ರೀಗಳಿಗೆ ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ
ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಈಗ ಸ್ಥಿರವಾಗಿದೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಶ್ರೀಮಠದ ಸಿಬ್ಬಂದಿ ಹೇಳಿದ್ದಾರೆ.
ಬೆಂಗಳೂರು, ಮೇ 12: ನಡೆದಾಡುವ ದೇವರು, ತ್ರಿವಿಧ ದಾಸೋಹಿ ಸಿದ್ದಗಂಗಾ ಮಠ ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಈಗ ಸ್ಥಿರವಾಗಿದೆ, ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಬಿಜಿಎಸ್ ಗ್ಲೋಬಲ್ ಆಸ್ಪತ್ರೆಗೆ ಸೇರಿಸಲಾಗಿದೆ ಎಂದು ಶ್ರೀಮಠದ ಸಿಬ್ಬಂದಿ ಹೇಳಿದ್ದಾರೆ.
110 ವರ್ಷ ವಯಸ್ಸಿನ ಶ್ರೀಗಳಿಗೆ ಗುರುವಾರ ಬೆಳಗ್ಗೆ ಜ್ವರದಿಂದ ಬಳಲುತ್ತಿದ್ದರು. ಸಂಜೆ ವೇಳೆಗೆ ಆರೋಗ್ಯ ಸುಧಾರಿಸಿತು. ಆಂಟಿಬಯೋಟಿಕ್ಸ್ ನೀಡಲಾಗುತ್ತಿದೆ.
ಹೆಚ್ಚಿನ ಚಿಕಿತ್ಸೆಗಾಗಿ ತುಮಕೂರಿನಿಂದ ಬೆಂಗಳೂರಿಗೆ ಕರೆದೊಯ್ಯಲು ನಿರ್ಧರಿಸಲಾಯಿತು. ಶುಕ್ರವಾರ ಬೆಳಗ್ಗೆ 5 ಗಂಟೆಗೆ ಎದ್ದು ನಿತ್ಯಪೂಜೆ ಪೂರೈಸಿದ ಶ್ರೀಗಳ ಮನ ಓಲೈಸಿದ ಆಪ್ತರು ಬೆಂಗಳೂರಿನ ಬಿಜಿಎಸ್ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾರೆ.
ಶ್ರೀಗಳು ಬೆಂಗಳೂರಿಗೆ ತೆರಳುತ್ತಿರುವ ಸುದ್ದಿ ತಿಳಿದ ಹೆದ್ದಾರಿಯ ಬದಿಯ ಗ್ರಾಮಸ್ಥರು, ರಸ್ತೆಯ ಇಕ್ಕೆಲದಲ್ಲಿ ನಿಂತು ಶ್ರೀಗಳಿಗೆ ಜಯಘೋಷ ಹಾಕಿ, ಶುಭ ಹಾರೈಸಿದರು. [ಸಿದ್ದಗಂಗಾ ಶ್ರೀಗಳ ಆರೋಗ್ಯದಲ್ಲಿ ಏರುಪೇರು]
ಮರ್ಸಿಡೀಸ್ ಬೆಂಜ್ ಕಾರಿನಲ್ಲಿ ವೈದ್ಯರ ತಂಡದ ಜತೆಗೆ ಕಿರಿಯ ಸ್ವಾಮೀಜಿಗಳು ಇದ್ದರು. ಮಾಜಿ ಸಚಿವ ವಿ ಸೋಮಣ್ಣ, ಸೊಗಡು ಶಿವಣ್ಣ ಅವರು ಕಾರನ್ನು ಹಿಂಬಾಲಿಸಿ ಬಿ ಜಿಎಸ್ ಆಸ್ಪತ್ರೆಗೆ ಬಂದು ಸಕಲ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ.
ವೈದ್ಯರ ಹೇಳಿಕೆ: ಶ್ವಾಸಕೋಶ, ಜಠರ ಹಾಗೂ ಮೂತ್ರದಲ್ಲಿ ಸೋಂಕು ಇರುವ ಶಂಕೆಯಿದ್ದು, ರಕ್ತದ ಮಾದರಿಯನ್ನು ಪರೀಕ್ಷಿಸಲಾಗಿದೆ. 5 ಜನ ವೈದ್ಯರ ತಂಡ ಶ್ರೀಗಳ ಆರೋಗ್ಯದ ಮೇಲೆ ನಿಗಾವಹಿಸಿದ್ದಾರೆ ಎಂದು ತಜ್ಞ ವೈದ್ಯ ಡಾ.ವೆಂಕಟರಮಣ ತಿಳಿಸಿದ್ದಾರೆ.