ಬೆಂಗಳೂರಲ್ಲಿ ಶ್ರೀ ಸಾಯಿ ಕೋಟಿ ಬಾಬ ಮಂದಿರ ನಿರ್ಮಾಣ
ಬೆಂಗಳೂರು, ನವೆಂಬರ್, 16 : ಶ್ರೀ ಸಾಯಿಬಾಬ ಅಂತರಾಷ್ಟ್ರೀಯ ಪ್ರತಿಷ್ಠಾನದ ವತಿಯಿಂದ ಶ್ರೀ ಸಾಯಿ ಕೋಟಿ ಬಾಬ ಮಂದಿರವನ್ನು ಬೆಂಗಳೂರಿನ ಅಂತರಾಷ್ಟೀಯ ವಿಮಾನ ನಿಲ್ದಾಣ ರಸ್ತೆಯ ಚಿಕ್ಕಜಾಲದಲ್ಲಿ ನಿರ್ಮಿಸಲಾಗುತ್ತಿದೆ ಎಂದು ಸಂಸ್ಥಾಪಕ ಅಧ್ಯಕ್ಷ ಬಾಬ ಆದೇಶ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
1 ಕೋಟಿ ಸಾಯಿಬಾಬ ಮೂರ್ತಿಗಳನ್ನು ಮಂದಿರದ ಆವರಣದಲ್ಲಿ ಪ್ರತಿಷ್ಠಾಪನೆ ಮಾಡಲಾಗುವುದು. ಆಧ್ಯಾತ್ಮಕ ಕೇಂದ್ರವನ್ನು ಮಂದಿರದಲ್ಲಿ ಸ್ಥಾಪಿಸಿ ಬೆಂಗಳೂರು ಶಾಂತಿ, ಸಹಭಾಳ್ವೆ ಹಾಗೂ ಭಕ್ತಿಯನ್ನು ಇಡೀ ಜಗತ್ತಿಗೆ ಸಾರುವ ಉದ್ದೇಶದಿಂದ ಹಾಗೂ ಸ್ಮಾರಕವನ್ನು ಬಾಬಾ ಭಕ್ತರಿಗೆ ಅರ್ಪಿಸುವ ಉದ್ದೇಶದಿಂದ ಶ್ರೀ ಸಾಯಿ ಕೋಟಿ ಬಾಬ ಮಂದಿರವನ್ನು ನಿರ್ಮಾಣ ಮಾಡಲಾಗುತ್ತಿದೆ ಎಂದರು.
ನ. 19 ಹಾಗೂ 2ರಂದು ತ್ರಿಪುರವಾಸಿನಿ, ಪ್ಯಾಲೆಸ್ ಮೈದಾನದಲ್ಲಿ ಶ್ರೀ ಶಿರಡಿ ಸಾಯಿಬಾಬರವರ ನಿಜಪಾದುಕ ದರ್ಶನ ಹಾಗೂ 11 ಅಡಿ ಎತ್ತರದ ಶ್ರೀ ಸಾಯಿಬಾಬರವರ ಮೂರ್ತಿಯ ದರ್ಶನವನ್ನು ಮತ್ತು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಭಕ್ತಾಧಿಗಳಿಗೆ ಏರ್ಪಡಿಸಲಾಗಿದೆ.
ಸಬ್ ಕ ಮಾಲಿಕ್ ಏಕ್ ಎಂಬ ಪರಿಕಲ್ಪನೆಯಲ್ಲಿ ಎಲ್ಲಾ ಧರ್ಮದವರು ಕಾರ್ಯಕ್ರಮಕ್ಕೆ ಆಗಮಿಸಿ ಶ್ರೀ ಶಿರಡಿ ಸಾಯಿಬಾಬರವರ ಕೃಪೆಗೆ ಪಾತ್ರರಾಗಬೇಕೆಂದು ವಕ್ತಾರ ಗುರುರಾಜ ಕೋರಿದರು.
ದೇವಸ್ಥಾನದ ಆವರಣದಲ್ಲಿ ನಮ್ಮ ದೇಶದ ಸಂಸ್ಕೃತಿಯಾದ ಗೋವುಗಳನ್ನು ರಕ್ಷಿಸಿ, ಅದನ್ನು ಪೋಷಿಸಲು ಗೋಶಾಲೆಗಳನ್ನು ನಿರ್ಮಿಸುವುದು.
ನಿರ್ಗತಿಕರಿಗೆ ಉಚಿತ ಆರೋಗ್ಯ ಕೇಂದ್ರ, ಜೈ ಜವಾನ್-ಜೈ ಕಿಸಾನ್ ಎಂಬ ಮೂಲ ಕಲ್ಪನೆಯ ಮೇಲೆ ನಂಬಿಕೆ ಹೊಂದಿ ಸಮಾಜದ ಕ್ಷೇಮಕ್ಕೆ ತಮ್ಮ ಜೀವನವನ್ನು ಸವೆಸುವ ರೈತರ ಕುಂಟುಂಬಕ್ಕೆ ಹಾಗೂ ದೇಶದ ರಕ್ಷಣೆಗೆ ತಮ್ಮ ಜೀವನವನ್ನೇ ಮುಡುಪಾಗಿಡುವ ಸೈನಿಕರ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವುದು.
ನಿರ್ಗತಿಕ ಹಾಗೂ ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಕಲ್ಪಿಸಲಾಗುವುದು ಎಂದು ಉಪಾಧ್ಯಕ್ಷ ವಿಜಯ್ ಕುಮಾರ್ ಗೌಡರವರು ತಿಳಿಸಿದರು.