ಡಾಬಾ ಸೀನನ ಮೇಲೆ ಗುಂಡಿನ ದಾಳಿ, ಪಾಯ್ಸನ್ ರಾಮ ಅರೆಸ್ಟ್
ಬೆಂಗಳೂರು, ಫೆಬ್ರವರಿ 3: ಬೆಂಗಳೂರಿನ ಯಲಹಂಕದಲ್ಲಿ ನಡೆದಿದ್ದ ಶೂಟೌಟ್ ನಲ್ಲಿ ಗಾಯಗೊಂಡಿದ್ದ ಕಡಬಗೆರೆ ಶ್ರೀನಿವಾಸ್ ಗೆ ಯಶಸ್ವಿ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಸತತ 5 ಗಂಟೆಗಳ ಶಸ್ತ್ರ ಚಿಕಿತ್ಸೆ ನಂತರ ಅವರ ದೇಹದಿಂದ ಕೊಲಂಬಿಯಾ ಏಷ್ಯಾ ಆಸ್ಪತ್ರೆ ವೈದ್ಯರು ಮೂರು ಗುಂಡುಗಳನ್ನು ಹೊರತೆಗೆದಿದ್ದಾರೆ. ಸದ್ಯ ಶ್ರೀನಿವಾಸ್ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಬೆಂಗಳೂರಿನ ಯಲಹಂಕದಲ್ಲಿ ಶುಕ್ರವಾರ ಮಧ್ಯಾಹ್ನ 12 ಗಂಟೆ ಸುಮಾರಿಗೆ ಶೂಟೌಟ್ ನಡೆದಿದೆ. ಪಲ್ಸರ್ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಕಾರಿನ ಮೇಲೆ ಏಕಾಏಕಿ ಗುಂಡು ಹಾರಿಸಿದ್ದಾರೆ.
ಯಲಹಂಕದ ಏರ್ ಪೋರ್ಟ್ ರಸ್ತೆಯಲ್ಲಿರುವ ಕೋಗಿಲು ಸಿಗ್ನಲ್ ಬಳಿ ಈ ಗುಂಡಿನ ದಾಳಿ ನಡೆದಿದೆ. ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಪೊಲೀಸರು ಬರುವ ವೇಳೆಗೆ ಗುಂಡು ಹಾರಿಸಿದ ದುಷ್ಕರ್ಮಿಗಳು ಸ್ಥಳದಿಂದ ಕಾಲು ಕಿತ್ತಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆ ನೆಲಮಂಗಲ ತಾಲೂಕಿನ ದಾಸನಪುರ ಎಪಿಎಂಸಿ ಅಧ್ಯಕ್ಷ ಕಡಬಗೆರೆ ಶ್ರೀನಿವಾಸ್ ಅಲಿಯಾಸ್ ಡಾಬಾ ಸೀನ ಮೇಲೆ ಐದಾರು ಸುತ್ತಿನ ಗುಂಡಿನ ದಾಳಿ ನಡೆದಿದೆ. 2010ರಲ್ಲೂ ಇದೇ ಶ್ರೀನಿವಾಸ್ ಮೇಲೆ ಗುಂಡಿನ ದಾಳಿ ನಡೆದಿತ್ತು. ಘಟನೆಯಲ್ಲಿ ಶ್ರೀನಿವಾಸ್ ಹಾಗೂ ಕಾರಿನ ಚಾಲಕ ಮೂರ್ತಿ ಗಾಯಗೊಂಡಿದ್ದು ಹೆಬ್ಬಾಳದ ಕೊಲಂಬಿಯಾ ಏಷ್ಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಫೈರಿಂಗ್ ವೇಳೆ ಕಾರಿನಲ್ಲಿ ಮೂರು ಜನರಿದ್ದರು. ಶ್ರೀನಿವಾಸ್ ದೇಹಕ್ಕೆ ಎರಡು ಗುಂಡುಗಳು ಹೊಕ್ಕಿದ್ದು ತೀವ್ರ ಗಾಯಗೊಂಡಿದ್ದಾರೆ. ಒಂದು ಗುಂಡು ಶ್ರೀನಿವಾಸ್ ಬೆನ್ನಿಗೆ ತಾಗಿದೆ. ಇನ್ನೊಂದು ಗುಂಡು ಚಾಲಕ ಮೂರ್ತಿಗೆ ತಾಗಿರುವ ಸಾಧ್ಯತೆ ಇದ್ದು ಉಳಿದೆರಡು ಗುಂಡುಗಳು ಮಿಸ್ ಫೈರ್ ಆಗಿವೆ.
ಯಲಹಂಕ ಬಿಜೆಪಿ ಶಾಸಕ ಎಚ್. ಆರ್ ವಿಶ್ವನಾಥ್ ಆಪ್ತರಾಗಿರುವ ಶ್ರೀನಿವಾಸ್ ರೌಡಿಶೀಟರ್ ಪಾಯ್ಸನ್ ರಾಮನ ಅಣ್ಣ ಎನ್ನಲಾಗಿದೆ. ಇವರ ಮೇಲೆ ಒಟ್ಟು 13 ಕೇಸುಗಳಿವೆ ಎಂದು ತಿಳಿದು ಬಂದಿದೆ. ಸಿಗ್ನಲ್ ನಲ್ಲಿ ಹೋಂಡಾ ಸಿಟಿ ಕಾರು ಸಂಖ್ಯೆ ಕೆ.ಎ04 ಎಂಎಸ್ 605ರಲ್ಲಿ ಕುಳಿತಿದ್ದಾಗ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ.ಘಟನಾ ಸ್ಥಳಕ್ಕೆ ಬೆಂಗಳೂರು ಪೊಲೀಸ್ ಆಯುಕ್ತ ಪ್ರವೀಣ್ ಸೂದ್, ಈಶಾನ್ಯ ವಲಯ ಡಿಸಿಪಿ ಹರ್ಷ, ಹೆಚ್ಚುವರಿ ಪೊಲೀಸ್ ಆಯುಕ್ತೆ ಮಾಲಿನಿ ಕೃಷ್ಣಮೂರ್ತಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾಯ್ಸನ್ ರಾಮ ವಶಕ್ಕೆ
ಆಸ್ಪತ್ರೆಗೆ ತಮ್ಮ ಕಡಬಗೆರೆ ಶ್ರೀನಿವಾಸ್ ರನ್ನು ನೋಡಲು ಬಂದಿದ್ದ ಅಣ್ಣ ರೌಡಿ ಶೀಟರ್ ಪಾಯ್ಸನ್ ರಾಮನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಶೂಟೌಟ್ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದು ಆರೋಪಿಗಳಿಗೆ ಬಲೆ ಬೀಸಿದ್ದಾರೆ.