ದೇಶದ್ರೋಹಿಗಳನ್ನು ಗುಂಡಿಕ್ಕಿ ಕೊಲ್ಲಿ: ವಜುಭಾಯಿ ವಾಲಾ
ಬೆಂಗಳೂರು, ಡಿಸೆಂಬರ್ 16: ಭಯೋತ್ಪಾದಕ ಕಸಬ್ ನ ಮರಣ ವರ್ಷಾಚರಣೆ ಆಚರಿಸುತ್ತಿರುವವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಕರ್ನಾಟಕ ರಾಜ್ಯ ರಾಜ್ಯಪಾಲ ವಜುಭಾಯಿ ವಾಲಾ ಹೇಳಿದ್ದಾರೆ.
ನಗರದಲ್ಲಿ ಆಯೋಜಿಸಿದ್ದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು ದೇಶದ್ರೋಹಿಯ ಬಗ್ಗೆ ಕರುಣೆ ತೋರುವವರು, ದೇಶದ್ರೋಹಿಗಳನ್ನು ಆದರ್ಶವಾಗಿ ಪರಿಗಣಿಸುವವರೂ ಕೂಡ ದೇಶದ್ರೋಹಿಗಳೇ ಎಂದರು.
ಕೆಲವು ಮಂದಿ, ಭಯೋತ್ಪಾದಕ ಕಸಬ್ ನ ಮರಣದಿನದ ವರ್ಷಾಚರಣೆಯಲ್ಲಿ ತೊಡಗಿದ್ದಾರೆ, ಇಂತಹಾ ಹೀನ ಕೃತ್ಯವನ್ನು ಸಹಿಸಲು ಅಸಾಧ್ಯ, ದೇಶದ್ರೋಹಿಗಳನ್ನು ಬೆಂಬಲಿಸುವವರನ್ನೂ ದೇಶದ್ರೋಹಿಗಳೆಂದೇ ಪರಿಗಣಿಸಿ ಕೊಂದುಬಿಡುವುದು ಉತ್ತಮ ಎಂದು ಅವರು ಕೋಪೋದ್ರಿಕ್ತರಾಗಿ ಮಾತನಾಡಿದ್ದಾರೆ.
ಸಂಸತ್ ಮೇಲಾದ ಭಯೋತ್ಪಾದಕರ ದಾಳಿಯ ಪ್ರಮುಖ ಆರೋಪಿ ಅಫ್ಜಲ್ ಗುರು ವಿಷಯದಲ್ಲೂ ಹೀಗೆಯೇ ಆಗಿತ್ತು, ಆತನ ಮರಣ ದಂಡಣೆ ವಿರೋಧಿಸಿ ಪ್ರತಿಭಟನೆಯನ್ನೂ ಮಾಡಿದ್ದರು ಎಂದ ಅವರು ದೇಶದ್ರೋಹಿಗಳನ್ನು ಮೂರೇ ದಿನದಲ್ಲಿ ಗಲ್ಲಿಗೆ ಹಾಕಿಬಿಡಬೇಕು, ನಮ್ಮ ನ್ಯಾಯಾಂಗ ಪ್ರಕ್ರಿಯೆ ಪೂರ್ಣಗೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತಿದೆ ಅದು ಕಡಿಮೆಯಾಗಬೇಕು ಎಂದರು.
ದೇಶಪ್ರೇಮದ ಬಗ್ಗೆ ಇಸ್ರೇಲ್ ರಾಷ್ಟ್ರವನ್ನು ಉದಾಹರಣೆಯಾಗಿ ನೀಡಿದ ಅವರು, ಆ ದೇಶದ ಮಹಿಳೆಯರೂ, ಪುರುಷರು ಖಡ್ಡಾಯವಾಗಿ ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ, ಅವರಿಗೆ ದೇಶದ ಬಗ್ಗೆ ಉತ್ಕಟವಾದ ಪ್ರೇಮವಿದೆ ಅದೇ ರೀತಿಯ ದೇಶಪ್ರೇಮ ಭಾರತದಲ್ಲೂ ಕಾಣಬೇಕು ಎಂದರು.