ಬಿಜೆಪಿ ಶಾಸಕರನ್ನು ಮುಟ್ಟಿದರೆ ಹುಷಾರ್ ಎಂದ ಶೋಭಾ ಕರಂದ್ಲಾಜೆ
ಬೆಂಗಳೂರು, ಸೆಪ್ಟೆಂಬರ್ 10: ಮುಖ್ಯಮಂತ್ರಿ ಎಚ್ಡಿ ಕುಮಾರಸ್ವಾಮಿ ಐವರು ಬಿಜೆಪಿ ಶಾಸಕರನ್ನು ತಮ್ಮತ್ತ ಸೆಳೆಯುವುದಾಗಿ ನೀಡಿರುವ ಹೇಳಿಕೆಗೆ ಖಾರವಾಗಿಯೇ ಪ್ರತಿಕ್ರಿಯೆ ನೀಡಿರುವ ಸಂಸದೆ ಶೋಭಾ ಕರಂದ್ಲಾಜೆ, ಅಪ್ಪಿತಪ್ಪಿ ಬಿಜೆಪಿ ಶಾಸಕರನ್ನು ಮುಟ್ಟಿದರೆ ಇದರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯಿಂದ ಐವರು ಶಾಸಕರಲ್ಲ ಒಬ್ಬರೂ ಕೂಡ ಹೋಗುವುದಿಲ್ಲ ಒಂದು ವೇಳೆ ಸಿಎಂ ಕುಮಾರಸ್ವಾಮಿ ಅಂತಹ ಪ್ರಯತ್ನಗಳಿಗೆ ಕೈಹಾಕಿದರೆ ಯಶಸ್ವಿಯಾಗುವುದಿಲ್ಲ, ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಸುಮ್ಮನೆ ಕೂರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಆಪರೇಷನ್ ಕಮಲ ಸುದ್ದಿಗಳು : ಕುಮಾರಸ್ವಾಮಿ ಖಾರದ ಮಾತುಗಳು!
ಶಾಸಕರಾದ ಗುಳಿಹಟ್ಟಿ ಶೇಖರ್ ಹಾಗೂ ಪೂರ್ಣಿಮಾ ಶ್ರೀನಿವಾಸ್ ಯಾವ ಕಾಂಗ್ರೆಸ್ ನಾಯಕರ ಜತೆಯಲ್ಲೂ ಮಾತನಾಡಿಲ್ಲ ಆದರೆ ರಾಜ್ಯದಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರ ಇರುವುದರಿಂದ ಕಾಂಗ್ರೆಸ್ ನ ಸಚಿವರನ್ನು ಕಾರ್ಯನಿಮಿತ್ತ ಭೇಟಿ ಮಾಡುವುದು ಅನಿವಾರ್ಯ, ಹಿಂದೆ ಯಡಿಯೂರಪ್ಪ ಸಿಎಂ ಇದ್ದಾಗಲೂ ಅನ್ಯ ಪಕ್ಷದ ಅನೇಕ ಶಾಸಕರು ಯಡಿಯೂರಪ್ಪ ಅವರನ್ನು ಭೇಟಿ ಮಾಡುತ್ತಿದ್ದರು. ಈ ರೀತಿ ಭೇಟಿಯನ್ನೇ ರಾಜಕೀಯ ಉದ್ದೇಶ ಎಂದು ಬಿಂಬಿಸುವುದು ಸರಿಯಲ್ಲ ಎಂದರು.
ಹೀಗಾಗಿ ಬಿಜೆಪಿ ಶಾಸಕರು ಪಕ್ಷ ಬಿಡುತ್ತಾರೆ ಎಂದು ಬಿಂಬಿಸುವುದನ್ನು ಕುಮಾರಸ್ವಾಮಿ ನಿಲ್ಲಿಸಬೇಕು ಎಂದು ಹೇಳಿದರು. ಇದೇ ವೇಳೆ ಜೆಡಿಎಸ್ ಹಾಗೂ ಕಾಂಗ್ರೆಸ್ ನ ಪಾಪದ ಸರ್ಕಾರ ತನ್ನ ಭಾರಕ್ಕೆ ಕುಸಿದುಬಿದ್ದರೆ ಆಗ ಒಂದು ರಾಜಕೀಯ ಪಕ್ಷವಾಗಿ ಬಿಜೆಪಿ ಕೆಲಸ ಮಾಡಬೇಕಾಗುತ್ತದೆ. ಅಂದಿನ ಪರಿಸ್ಥಿತಿ ನೋಡಿಕೊಂಡು ಮುಂದಿನ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಬಿಜೆಪಿ ಸೇರಲು 4 ಷರತ್ತು ಹಾಕಿದ ರಮೇಶ್ ಜಾರಕಿಹೊಳಿ!
ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತವನ್ನು ತರುವ ಉದ್ದೇಶ ನಮಗಿಲ್ಲ, ಹಾಗಂತ ನಾವು ವಾಮ ಮಾರ್ಗದ ಮೂಲಕವೂ ಸರ್ಕಾರವನ್ನು ರಚನೆ ಮಾಡುವುದಿಲ್ಲ, ಒಂದು ರಾಜಕೀಯ ಪಕ್ಷವಾಗಿ ಅವತ್ತಿನ ದಿನಕ್ಕೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಎಂದು ಸರ್ಕಾರ ರಚನೆಯ ಸುಳಿವು ನೀಡಿದರು.
ಕಾಂಗ್ರೆಸ್ ಶಾಸಕರ ಬೆಂಬಲ ಸಿಕ್ಕರೆ ಬಿಜೆಪಿ ಸರ್ಕಾರ: ಆಪರೇಷನ್ಗೆ ಅಸ್ತು?
ಸೋಮವಾರ ನಡೆದ ಭಾರತ್ ಬಂದ್ ವೇಳೆ ಕಾಂಗ್ರೆಸ್ ಹಾಗ ಜೆಡಿಎಸ್ ಸರ್ಕಾರ ಒತ್ತಾಯಪೂರ್ವಕವಾಗಿ ನಡೆಸಲು ಕುಮ್ಮಕ್ಕು ನೀಡಿದ್ದರು ಇದರಿಂದ ರಾಜ್ಯ ಸರ್ಕಾರದ ಬೊಕ್ಕಸಕ್ಕೆ ಸಾವಿರಾರು ಕೋಟಿಗಳ ನಷ್ಟವಾಗಿದೆ ಇದನ್ನು ಸರ್ಕಾರವೇ ಭರಿಸಬೇಕು ಎಂದು ಆಗ್ರಹಿಸಿದರು.