ರುದ್ರೇಶ್ ಕೊಲೆ ಹಿಂದೆ ಬೇಗ್ ಕೈವಾಡ: ಕರಂದ್ಲಾಜೆ
ಬೆಂಗಳೂರು, ನವೆಂಬರ್, 4: ಹಾಡಹಗಲೇ ಬರ್ಬರವಾಗಿ ಕೊಲೆಯಾದ ಆರ್ ಎಸ್ ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ಹಿಂದೆ ಸಚಿವ ಆರ್.ರೋಷನ್ ಬೇಗ್ ಅವರ ಕೈವಾಡವಿದೆ ಎಂದು ಉಡುಪಿ ಸಂಸದೆ ಶೋಭಾ ಕರಂದ್ಲಾಜೆ ಗಂಭೀರ ಆರೋಪ ಮಾಡಿದ್ದಾರೆ. ರುದ್ರೇಶ್ ಹತ್ಯೆಯು ಕಾಂಗ್ರೆಸ್ ಸರಕಾರದ ಪ್ರಾಯೋಜಿತ ಕೊಲೆ ಎಂದು ಅವರು ಶುಕ್ರವಾರ ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನಲ್ಲಿ ಆರೋಪಿಸಿದ್ದಾರೆ.
ಶಿವಾಜಿನಗರದಲ್ಲಿ ರುದ್ರೇಶ್ ಬೆಳವಣಿಗೆ ಸಹಿಸದೆ ಕಾಂಗ್ರೆಸ್ ಈ ಕೊಲೆ ಮಾಡಿಸಿದೆ ಎಂದು ಅವರು ದೂರಿದ್ದಾರೆ. ಈ ಪ್ರಕರಣದ ಸಂಬಂಧ ರಾಜ್ಯ ಪೊಲೀಸರ ಮೇಲೆ ಒತ್ತಡ ಹೇರುತ್ತಿದ್ದು, ಸಿಬಿಐ ಅಥವಾ ಎನ್ ಐಎ ತನಿಖೆ ನಡೆಯಬೇಕು ಎಂದು ಅವರು ಒತ್ತಾಯಿಸಿದರು. ರಾಜ್ಯದ ಪೊಲೀಸರು ರುದ್ರೇಶ್ ಹತ್ಯೆ ತನಿಖೆ ನಡೆಸುವುದು ಬೇಡ, ಹತ್ಯೆ ಹಿಂದೆ ಸಚಿವರ ಕೈವಾಡವಿದೆ ಎಂದು ಶಿವಾಜಿನಗರದ ಜನತೆ ಮತ್ತು ಅಧಿಕಾರಿಗಳು ಮಾತನಾಡುತ್ತಿದ್ದಾರೆ ಎಂದು ಅವರು ಹೇಳಿದರು.
ಸಚಿವ ರೋಷನ್ ಬೇಗ್ ಕೊಲೆಯಲ್ಲಿ ಶಾಮೀಲಾಗಿರುವ ಬಗ್ಗೆ ಹಲವು ಅಧಿಕಾರಿಗಳಿಗೆ ಗುಮಾನಿ ಇದೆ. ಹಾಗಾಗಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಉನ್ನತ ಮಟ್ಟದ ತನಿಖೆಯಾಗಬೇಕು ಎಂದು ಅವರು ಹೇಳಿದ್ದಾರೆ.['ರುದ್ರೇಶ್ ಹತ್ಯೆಗೂ ಪಿಎಫ್ಐಗೂ ಯಾವುದೇ ಸಂಬಂಧವಿಲ್ಲ']