ಉದಯವಾಣಿ ಸಂಪಾದಕರಾಗಲಿರುವ ಶಿವಸುಬ್ರಹ್ಮಣ್ಯ
ಬೆಂಗಳೂರು, ಡಿಸೆಂಬರ್ 12: ಕನ್ನಡ ಪತ್ರಿಕಾ ಲೋಕದಲ್ಲೊಂದು ಬದಲಾವಣೆಯಾಗಿದೆ. ಹೊಸದಿಗಂತ ದಿನಪತ್ರಿಕೆಯ ಸಂಪಾದಕ ಸ್ಥಾನಕ್ಕೆ ಶಿವಸುಬ್ರಹ್ಮಣ್ಯ ಅವರು ರಾಜೀನಾಮೆ ನೀಡಿದ್ದಾರೆ. ಡಿಸೆಂಬರ್ ಹದಿನಾಲ್ಕರಂದು ಉದಯವಾಣಿಯ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ. ಸೋಮವಾರದಂದು ತಮ್ಮ ರಾಜೀನಾಮೆ ವಿಚಾರವನ್ನು ಶಿವಸುಬ್ರಹ್ಮಣ್ಯ ಅವರು ಘೋಷಣೆ ಮಾಡಿದ್ದಾರೆ.
ರವಿ-ಮಾರುತಿ ಸಾರಥ್ಯದ ಫಸ್ಟ್ ನ್ಯೂಸ್ ಸೇರಿದ ಸೋಮಣ್ಣ
ಮುಂಗಾರು ಪತ್ರಿಕೆ ಮೂಲಕ ವೃತ್ತಿ ಜೀವನ ಆರಂಭಿಸಿದ ಶಿವಸುಬ್ರಹ್ಮಣ್ಯ ಅವರು ಹೊಸದಿಗಂತ, ಉದಯ ವಾಣಿ, ಸಂಯುಕ್ತ ಕರ್ನಾಟಕ ಹಾಗೂ ಕನ್ನಡ ಪ್ರಭದಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದೀಗ ಉದಯವಾಣಿಗೆ ಸಂಪಾದಕರಾಗಿ ಮರಳುತ್ತಿದ್ದಾರೆ ಎಂಬುದನ್ನು ಮೂಲಗಳು ಖಚಿತಪಡಿಸಿವೆ.
ಸುದ್ದಿಮನೆ ಸುದ್ದಿ: ಬಿಟಿವಿಯಿಂದ ಚಂದನ್ ಶರ್ಮ ಟಿವಿ9ಗೆ ಎಂಟ್ರಿ
ಫೋಟೋಗ್ರಫಿಯಲ್ಲೂ ತುಂಬ ಆಸಕ್ತಿ ಹೊಂದಿರುವ ಅವರು, ಕನ್ನಡ ಪ್ರಭದಲ್ಲಿ ಸಂಪಾದಕರಾಗಿದ್ದ ವೇಳೆ ಹಲವು ಸವಾಲುಗಳನ್ನು ಎದುರಿಸಿದ್ದರು. ಅವೆಲ್ಲವನ್ನೂ ಮೀರಿ ಪತ್ರಿಕೆಯ ಗಾಂಭೀರ್ಯ, ಸ್ವಾದ ಹಾಗೇ ಉಳಿಸಿಕೊಂಡವರು. ಕನ್ನಡ ಪ್ರಭದ ನಂತರ ಕಳೆದ ಕೆಲ ವರ್ಷದಿಂದ ಹೊಸದಿಗಂತದ ಸಂಪಾದಕರಾಗಿದ್ದರು.
ಇನ್ನು ಎರಡು ದಿನದಲ್ಲಿ ಉದಯವಾಣಿ ಪತ್ರಿಕೆಯ ಸಂಪಾದಕರಾಗಿ ಹೊಸ ಜವಾಬ್ದಾರಿ ವಹಿಸಿಕೊಳ್ಳಲಿರುವ ಶಿವಸುಬ್ರಹ್ಮಣ್ಯ ಅವರಿಗೆ ಶುಭ ಹಾರೈಸೋಣ.
ಟಿಆರ್ ಪಿ ವಾರ್ ನಲ್ಲಿ ಮಕಾಡೆ ಮಲಗಿದ ಬಿಗ್ ಬಾಸ್ ಕನ್ನಡ 5
ಇಪ್ಪತ್ತೈದು ವರ್ಷಗಳ ಹಿಂದೆ ಉದಯವಾಣಿ ಬೆಂಗಳೂರು ಆವೃತ್ತಿ ಆರಂಭಗೊಂಡಾಗ ಶಿವಸುಬ್ರಹ್ಮಣ್ಯ ವರದಿಗಾರರಾಗಿ ಸೇರ್ಪಡೆಗೊಂಡು, ಐದೂವರೆ ವರ್ಷ ಕಾರ್ಯ ನಿರ್ವಹಿಸಿದ್ದರು. ಆದ್ದರಿಂದ ಅವರಿಗೆ ಇದು ಮರಳಿ ಮನೆಗೆ ಎಂಬಂತಾಗಿದೆ.
ಶಿವಸುಬ್ರಹ್ಮಣ್ಯ ಅವರು ಒನ್ಇಂಡಿಯಾ ಕನ್ನಡ ಜತೆ ಮಾತನಾಡಿ, ಈ ರೀತಿಯ ಬದಲಾವಣೆ ಪ್ರಕ್ರಿಯೆ ಪತ್ರಿಕೋದ್ಯಮದಲ್ಲಿ ಸಹಜ. ಎಲ್ಲಿ ಕೆಲಸ ಮಾಡುತ್ತಾರೋ ಆ ಸಂಸ್ಥೆಯ ಏಳಿಗೆಗೆ ಪ್ರಾಮಾಣಿಕರಾಗಿ ದುಡಿಯಬೇಕಾದ್ದೇ ಪತ್ರಕರ್ತರ ಕರ್ತವ್ಯ. ಪ್ರತಿಭಾವಂತರನ್ನು ಹುಡುಕಿ ಬೆಳೆಸುವುದೇ ಸಂಪಾದಕರ ಕೆಲಸ.
ಕನ್ನಡಪ್ರಭದಲ್ಲಿ ಸಂಪಾದಕ ಹುದ್ದೆ ವಹಿಸಿಕೊಂಡಾಗ ಇದ್ದ ಪ್ರಸಾರ ಸಂಖ್ಯೆಯನ್ನು ಹುದ್ದೆಯಿಂದ ನಿರ್ಗಮಿಸುವ ವೇಳೆಗೆ ದಾಖಲೆಯ 2.14 ಲಕ್ಷಕ್ಕೆ ಏರಿಸಿದ ನನ್ನ ಸಾಧನೆ ಮರೆಯಲಾಗದು. ಹೊಸದಿಗಂತವನ್ನೂ ಗುಣಮಟ್ಟದಲ್ಲಿ ಓದುಗರನ್ನು ಸೆಳೆದು ದೊಡ್ಡಪತ್ರಿಕೆಯ ಮಟ್ಟಕ್ಕೆ ಬೆಳೆಸಿದ ಹೆಮ್ಮೆ ಮತ್ತು ತೃಪ್ತಿ ನನಗೆ ಇದೆ. ಈಗಾಗಲೇ ಹೆಮ್ಮರವಾಗಿರುವ ಉದಯವಾಣಿಯಲ್ಲಿ ಈ ಎಲ್ಲಾ ಅಂಶಗಳೊಂದಿಗೆ ವೃತ್ತಿಪರತೆಯೊಂದಿಗೆ ಮುಂದುವರಿಯುತ್ತೇನೆ ಎಂದರು.