ಒಂದು ಮತದಿಂದ ವಿಶ್ವಾಸಮತ ಗೆದ್ದ ಸಭಾಪತಿ ಶಂಕರಮೂರ್ತಿ
ಬೆಂಗಳೂರು, ಜೂನ್ 15: ವಿಧಾನ ಪರಿಷತ್ ಸಭಾಪತಿ ಡಿ.ಎಚ್. ಶಂಕರಮೂರ್ತಿ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಿ ಕಾಂಗ್ರೆಸ್ ತೀವ್ರ ಮುಖಭಂಗ ಅನುಭವಿಸಿದೆ. ಕಾಂಗ್ರೆಸ್ ಮಂಡಿಸಿದ್ದ ಅವಿಶ್ವಾಸ ನಿರ್ಣಯಕ್ಕೆ ಸೋಲಾಗಿದ್ದು ಡಿ.ಎಚ್ ಶಂಕರಮೂರ್ತಿ ಸ್ಥಾನ ಸದ್ಯಕ್ಕೆ ಅಬಾಧಿತವಾಗಿದೆ.
75 ಸದಸ್ಯ ಬಲದ ವಿಧಾನಪರಿಷತ್ (ಹಲವು ಸ್ಥಾನಗಳು ಖಾಲಿ ಇವೆ) ನಲ್ಲಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯದ ವಿರುದ್ಧ 37 ಮತಗಳು ಚಲಾವಣೆಯಾಗಿವೆ. ನಿರ್ಣಯದ ಪರ 36 ಮತಗಳು ಚಲಾವಣೆಯಾಗಿದ್ದು ಒಂದು ಮತದ ಅಂತರದಲ್ಲಿ ಶಂಕರಮೂರ್ತಿ ಸೇಫ್ ಆಗಿದ್ದಾರೆ.
ಗುರುವಾರ ವಿಧಾನಪರಿಷತ್ ನಲ್ಲಿ ಅವಿಶ್ವಾಸ ನಿರ್ಣಯಕ್ಕೆ ಉಪಸಭಾಪತಿ ಮರಿತಿಬ್ಬೇಗೌಡ ಅವಕಾಶ ನೀಡಿದರು.
ಬುಧವಾರವೇ ಸಭಾಪತಿ ಡಿ.ಎಚ್ ಶಂಕರಮೂರ್ತಿಯವರನ್ನು ಬೆಂಬಲಿಸಲು ಜೆಡಿಎಸ್ ನಿರ್ಧರಿಸಿತ್ತು. ಮಾತ್ರವಲ್ಲ ಪಕ್ಷದ ಎಲ್ಲಾ 13 ಶಾಸಕರಿಗೆ ಈ ಸಂಬಂಧ ವಿಪ್ ಜಾರಿಗೊಳಿಸಿ ಮತದಾನದ ವೇಳೆ ಕಡ್ಡಾಯ ಹಾಜರಿರುವಂತೆ ಸೂಚನೆ ನೀಡಿತ್ತು.
ಅದರಂತೆ ಇಂದು ಜೆಡಿಎಸ್ ಎಂಎಲ್ ಸಿ ಗಳು ಅವಿಶ್ವಾಸ ನಿರ್ಣಯದ ವಿರುದ್ಧ ಮತ ಚಲಾಯಿಸಿದರು. ಹೀಗಾಗಿ ಕಾಂಗ್ರೆಸ್ ಅವಿಶ್ವಾಸ ನಿರ್ಣಯಕ್ಕೆ ಸೋಲಾಯಿತು.