'ಮಕ್ಕಳ ಶೋಷಣೆಯ ಪ್ರಕರಣ ತನಿಖೆ ವೇಳೆ ಘನತೆ ಕಾಪಾಡಿ'
ಬೆಂಗಳೂರು, ಆಗಸ್ಟ್ 4: ಮಕ್ಕಳ ಮೇಲೆ ನಡೆಯುವ ಲೈಂಗಿಕ ಶೋಷಣೆಯು ಗಂಭೀರವಾದ ಅಪರಾಧವಾಗಿದ್ದು ಇಂತಹ ಪ್ರಕರಣಗಳ ತನಿಖೆಯಲ್ಲಿ ಶೋಷಣೆಗೆ ಒಳಗಾದ ಮಕ್ಕಳ ಸಾಮಾಜಿಕ ಘನತೆ ಹಾಗೂ ಕ್ಷೇಮವನ್ನು ಕಾಪಾಡುವ ಜವಾಬ್ದಾರಿಯನ್ನು ಪೊಲೀಸರದ್ದು ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕರು ನೀಲಮಣಿ ಎನ್. ರಾಜು ಹೇಳಿದರು.
ಶನಿವಾರ ಪೊಲೀಸ್ ಮಹಾನಿರೀಕ್ಷಕರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ' ಫೋಕ್ಸೊ ಕಾಯ್ದೆ - 2012 ರ ಸಮರ್ಪಕ ಅನುಷ್ಠಾನ ' ಕುರಿತಂತೆ ಒಂದು ದಿನದ ಕಾರ್ಯಾಗಾರವನ್ನು ಉದ್ಫಾಟಿಸಿ ಮಾತನಾಡಿದ ಅವರು ಮಕ್ಕಳ ವಿರುದ್ಧ ನಡೆಯುವ ಲೈಂಗಿಕ ಶೋಷಣೆಯ ಘಟನೆಗಳ ಕಾಲಮಿತಿಯಲ್ಲಿ ನ್ಯಾಯಯುತವಾಗಿ ಅತ್ಯಂತ ತುರ್ತಾಗಿ ಕ್ರಮಕೈಗೊಳ್ಳಬೇಕು.
ಕಬ್ಬನ್ ಪಾರ್ಕ್ನಲ್ಲಿ ಅತ್ಯಾಚಾರ, ಇಬ್ಬರಿಗೆ ಜೀವಾವಧಿ ಶಿಕ್ಷೆ
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯದ ತನಿಖೆ ನಡೆಯುವ ಮಕ್ಕಳ ಮೇಲೆ ಗಂಭೀರ ಪರಿಣಾಮ ಬೀರುವ ಸಾಮಾಜಿಕ ಸಮಸ್ಯೆಗಳ ಅರಿವು ತನಿಖಾಧಿಕಾರಿಗಳಿಗೆ ಇರಬೇಕು. ಇಂತಹ ಪ್ರಕರಣಗಳ ತನಿಖೆ ಪೂರ್ಣಗೊಳ್ಳುವ ತನಕ ಹಾಗೂ ಪೂರ್ಣಗೊಂಡ ನಂತರ ಸಹ ಶೋಷಣೆಗೆ ಒಳಪಟ್ಟ ಮಕ್ಕಳ ಬಗ್ಗೆ ಮಾಧ್ಯಮಗಳಿಗೆ ಮತ್ತು ಸಾರ್ವಜನಿಕರಿಗೆ ತಿಳಿಯದಂತೆ ಗೌಪ್ಯತೆಯನ್ನು ಕಾಪಾಡಿಕೊಂಡು ಮಕ್ಕಳ ಘನತೆಯನ್ನು ಕಾಪಾಡುವುದು ಪೊಲೀಸ್ ಇಲಾಖೆಯ ಕರ್ತವ್ಯವಾಗಿದೆ.
ಇಂತಹ ಘಟನೆಗಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಲು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಚರ್ಚಿಸಿದ್ದಲ್ಲಿ ಉತ್ತಮ ರೀತಿಯ ತನಿಖೆಗೆ ಸಹಕಾರಿಯಾಗಲಿದೆ. ಗುಣಮಟ್ಟದ ತನಿಖೆಯನ್ನು ನಡೆಸಲು ಇಂತಹ ಕಾರ್ಯಾಗಾರಗಳು ಸಹಕಾರಿಯಾಗಲಿದೆ.
ಈ ಕಾರ್ಯಾಗಾರವನ್ನು ಸದುಪಯೋಗಪಡಿಸಿಕೊಂಡು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಲು ಇಲ್ಲಿ ಪಾಲ್ಗೊಂಡಿರುವ ಹಿರಿಯ ಅಧಿಕಾರಿಗಳು ತಮ್ಮ ಕಿರಿಯ ಅಧಿಕಾರಿಗಳೊಂದಿಗೆ ಸಮಾಲೋಚಿಸಿದಾಗ ಕಾರ್ಯಾಗಾರದ ಉದ್ದೇಶ ಈಡೇರಿದಂತಾಗುತ್ತದೆ ಎಂದು ಹೇಳಿದರು.